ಹಿಂದೂ, ಬೌದ್ಧ ವಲಸಿಗರಿಗೆ ಮಾತ್ರ ಪೌರತ್ವ, ಉಳಿದ ಗೆದ್ದಲು ಹೊರಕ್ಕೆ: ಅಮಿತ್ ಶಾ
ಬಾಂಗ್ಲಾದಿಂದ ಬಂದ ಹಿಂದೂ, ಬೌದ್ಧರಿಗೆ ಮಾತ್ರ ಪೌರತ್ವ, ಉಳಿದ ಗೆದ್ದಲು ಹೊರಕ್ಕೆ: ಬಿಜೆಪಿ ರಾಷಟ್ರೀಯ ಅಧ್ಯಕ್ಷ ಅಮಿತ್ ಶಾ
ರಾಯ್ಗಂಜ್[ಏ.12]: ಬಾಂಗ್ಲಾ ದೇಶದ ಅಕ್ರಮ ವಲಸಿಗರನ್ನು ಗೆದ್ದಲು ಎಂದು ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅಕ್ರಮ ವಲಸಿಗರನ್ನು ಹೊರಹಾಕಲಿದೆ. ಹಿಂದೂಗಳು ಮತ್ತು ಬೌದ್ಧ ನಿರಾಶ್ರಿತರಿಗೆ ಮಾತ್ರ ಪೌರತ್ವ ನೀಡಲಾಗುವುದು ಎಂದು ಗುರುವಾರ ಹೇಳಿದ್ದಾರೆ.
ಇಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಬಾಂಗ್ಲಾದಿಂದ ಬಂದ ಅಕ್ರಮ ವಲಸಿಗರು ಗೆದ್ದಲು ಹುಳು ಇದ್ದಂತೆ. ಅವರು ಬಡವರಿಗೆ ತಲುಪಬೇಕಾದ ಪಡಿತರಗಳನ್ನು ತಿನ್ನುತ್ತಿದ್ದಾರೆ. ಅವರು ನಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಅವರನ್ನು ಹೊರದಬ್ಬಲಾಗುವುದು ಎಂದು ಹೇಳಿದ್ದಾರೆ.
ಇದೇ ವೇಳೆ ಟಿಎಂಸಿಯಲ್ಲಿ ಟಿ ಎಂಬುದರ ಅರ್ಥ ತುಷ್ಟೀಕರಣ, ಎಮ್ ಅಂದರೆ ಮಾಫಿಯಾ ಮತ್ತು ಸಿ ಅಂದರೆ ಚಿಟ್ಫಂಡ್ಸ್ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದಿದ್ದಾರೆ.
ಜೊತೆಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಲಾಗುವುದು. ಎನ್ಆರ್ಸಿಯನ್ನು ದೇಶದ ಇತರೆ ಕೆಲವು ರಾಜ್ಯಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.