BSYಗೆ ವಿರುದ್ಧ ಸ್ಪರ್ಧಿಸಿದ್ದ ವಿನಯ್ ಈಗ ಲೋಕ ಸಮರದಲ್ಲಿ 'ಚಿಲ್ಲರೆ ಗಿರಾಕಿ'
ಅಂದು ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಲು ಕಾಪ್ಟರ್ ನಲ್ಲಿ ಬಂದಿದ್ದ ವಿನಯ್| ಇಂದು ಲೋಕಸಭಾ ಸಮರಕ್ಕೆ 'ಚಿಲ್ಲರೆ ಗಿರಾಕಿ' ಗೆಟಪ್!
ಶಿವಮೊಗ್ಗ[ಏ.05]: ಯಾರಾದ್ರೂ ಅಷ್ಟೋ ಇಷ್ಟೋ ಚಿಲ್ಲರೆ ಹಣ ಜೇಬಿನಲ್ಲಿ ಇಟ್ಟುಕೊಂಡಿದ್ದರೆ ಅವರನ್ನು ಸಾಮಾನ್ಯವಾಗಿ ತಮಾಷೆಗಾಗಿ ಚಿಲ್ರೆ ಗಿರಾಕಿ ಅಂತಾರೆ. ಆದರೆ, ಇಲ್ಲೊಬ್ಬ ಭೂಪ ಅದೇ ಚಿಲ್ಲರೆಯನ್ನು ಇಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾನೆ.
ಹೀಗೆ ಈ ಬಾರಿ ಎಲೆಕ್ಷನ್ ಗೆ ಸ್ಪರ್ಧಿಸುತ್ತಿರುವಾತನ ಹೆಸರು ವಿನಯ್ ರಾಜಾವತ್. ಈತ ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆಯಲ್ಲಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಹೆಲಿಕಾಪ್ಟರ್ ನಲ್ಲಿ ಶಿಕಾರಿಪುರಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸಿ ಕೇವಲ 400 ಮತಗಳನ್ನು ಪಡೆದಿದ್ದರು. ಆದರೆ ಈ ಬಾರಿ ವಿಭಿನ್ನವಾಗಿ ಚುನಾವಣಾ ಕಣಕ್ಕಿಳಿದಿದ್ದಾನೆ. ಇದಕ್ಕಾಗಿ ವಿನಯ್ ಕೇವಲ 1 ರೂ. ಹಾಗೂ 2 ರೂ. ಗಳ ಚಿಲ್ಲರೆ ನಾಣ್ಯಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಬಂದು, ತನ್ನ ಉಮೇದುವಾರಿಕೆ ಸಲ್ಲಿಸಿ, ಹಣವನ್ನು ಡಿಪಾಸಿಟ್ ಮಾಡಿದ್ದಾನೆ.
12,500 ರೂ. ಗಳ ಚಿಲ್ಲರೆ ಹಣವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ತಂದ ಈತನನ್ನು ಸಾರ್ವಜನಿಕರು, ಪೊಲೀಸರು, ಬೆಕ್ಕಸ ಬೆರಗಾಗಿ ನೋಡುತ್ತಿದ್ದರು. ಚಿಲ್ಲರೆಯನ್ನ ತೋರಿಸಿದ ಈತ, ಆ ಚೀಲವನ್ನ ಎತ್ತಿಕೊಂಡು ಹೋಗಿ ಜಿಲ್ಲಾಧಿಕಾರಿಗಳ ಮುಂದೆ ಇಟ್ಟಿದ್ದಾನೆ. ಬಳಿಕ ಪಕ್ಷೇತರನಾಗಿ ತನ್ನ ಉಮೇದುವಾರಿಕೆ ಸಲ್ಲಿಸಿದ್ದಾನೆ.
ಈತನ ವರ್ತನೆಗೆ ಜಿಲ್ಲಾಧಿಕಾರಿಗಳೇ ಆಶ್ಚರ್ಯಗೊಂಡು ನಗುಮೊಗದಿಂದಲೇ ಅದನ್ನು ಸ್ವೀಕರಿಸಿದ್ದಾರೆ. ಅಂದಹಾಗೆ, ಈ ವಿನಯ್ ರಾಜಾವತ್ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲು ಎತ್ತಿನ ಗಾಡಿಯಲ್ಲಿ ಡಿಫ್ರೆಂಟ್ ವೇಷ ಭೂಷಣದಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದಾನೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...