JDS ಗೆ ಆಘಾತ: ಪ್ರಭಾವಿ ಮುಖಂಡ, 25 ಕ್ಕೂ ಹೆಚ್ಚು ಪದಾಧಿಕಾರಿಗಳು ಪಕ್ಷಕ್ಕೆ ಗುಡ್ ಬೈ!
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಎಲ್ಲಾ ಪಕ್ಷಗಳು ಚುನಾವಣೆಯಲ್ಲಿ ಗೆಲುವು ತಮ್ಮದಾಗಿಸಿಕೊಳ್ಳಲು ಮತದಾರನ ಓಲೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ಜೆಡಿಎಸ್ ಗೆ ಆಘಾತವೊಂದು ಎದುರಾಗಿದೆ.
ಶಿವಮೊಗ್ಗ[ಏ.02]: ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಜೆಡಿಎಸ್ ಗೆ ಆಘಾತ ಎದುರಾಗಿದೆ. ಪ್ರಭಾವಿ ಮುಖಂಡ ಹಾಗೂ ಒಕ್ಕಲಿಗ ನಾಯಕ ಪಕ್ಷಕ್ಕೆ ಗುಡ್ ಬೈ ಹೆಳಿರುವುದು ಜೆಡಿಎಸ್ ಗೆ ನುಂಗಲಾರದ ತುತ್ತಾಗಿದೆ. ಅಷ್ಟಕ್ಕೂ ಪಕ್ಷ ತೊರೆದ ಆ ನಾಯಕ ಯಾರು? ಇಲ್ಲಿದೆ ವಿವರ
ಶಿವಮೊಗ್ಗದ ಸಮಾಜವಾದಿ ನಾಯಕ ದಿ.ಶಾಂತವೇರಿ ಗೋಪಾಲ ಗೌಡರ ಮೊಮ್ಮಗ ಜೆಡಿಎಸ್ ನ ಪ್ರಭಾವಿ ಮುಖಂಡ ಹಾಗೂ ಒಕ್ಕಲಿಗ ನಾಯಕ ಆರ್ ಮದನ್, ಜೆಡಿಎಸ್ ಗೆ ಗುಡ್ ಬೈ ಹೇಳಿದ್ದಾರೆ. JDS ಪಕ್ಷದ ತಾಲ್ಲೂಕು ಅಧ್ಯಕ್ಷ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಅಧಿಕೃತವಾಗಿ ಪಕ್ಷ ತೊರೆದಿದ್ದಾರೆ.
ಆರ್ ಮದನ್ 2013 ರ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಆಭ್ಯರ್ಥಿಯಾಗಿ 22 ಸಾವಿರ ಮತಗಳನ್ನು ಪಡೆದು ಜೆಡಿಎಸ್ ನೆಲೆ ಭದ್ರ ಪಡಿಸಿದ್ದರು. ಆದರೆ 2018 ರ ವಿಧಾನ ಸಭಾ ಚುನಾವಣೆಯಲ್ಲಿ ಆರ್. ಎಂ. ಮಂಜುನಾಥ ಗೌಡರಿಗಾಗಿ ತಮ್ಮ ಸ್ಥಾನವನ್ನು ಮದನ್ ತ್ಯಾಗ ಮಾಡಿದ್ದರು. ಆದರೀಗ ಜೆಡಿಎಸ್ ಜಿಲ್ಕಾಧ್ಯಕ್ಷ ರಾದ ಮಂಜುನಾಥ ಗೌಡರ ಮೂಲೆಗುಂಪು ರಾಜಕಾರಣ, ಹಗೆತನದ ನೀತಿಯಿಂದಾಗಿ ಬೇಸತ್ತ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.
ರಾಜೀನಾಮೆ ಕುರಿತಾಗಿ ಪ್ರತಿಕ್ರಿಯಿಸಿರುವ ಆರ್ ಮದನ್ 'ನಾನು ತಾಲ್ಲೂಕು ಅಧ್ಯಕ್ಷನಾಗಿದ್ದರೂ ಮಂಜುನಾಥ ಗೌಡರು ನನ್ನನ್ನು ಬಿಟ್ಟು ತೀರ್ಥಹಳ್ಳಿ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕ್ರಮ ಆಯೋಜಿಸಿದ್ದರು. ಅವತರ ವರ್ತನೆ ತೀವ್ರ ಬೇಸರವನ್ನುಂಟು ಮಾಡಿದೆ. ನನ್ನೊಂದಿಗೆ 25 ಕ್ಕೂ ಹೆಚ್ಚು ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನನ್ನ ಬೆಂಬಲಿಗರ ಮತ್ತು ಹಿತೈಷಿಗಳ ಅಭಿಪ್ರಾಯ ಪಡೆದು ಯುಗಾದಿ ಹಬ್ಬದ ನಂತರ ನನ್ನ ಮುಂದಿನ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತೇನೆ' ಎಂದಿದ್ದಾರೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...