ಪಾಕ್ ಸಾಯೋದಾದ್ರೆ ಸಾಯಲಿ ಬಿಡಿ: ಪ್ರಧಾನಿ ಮೋದಿ
ಮೋದಿ ಮಾತು ಬರೀ ಪಾಕ್ ಬಗ್ಗೆ ಮಾತಾಡೋದ್ರಿಂದ ಟೈಂ ವೇಸ್ಟ್, ಪಾಕ್ ಸಾಯೋದಾದ್ರೆ ಸಾಯಲಿ ಬಿಡಿ| ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರ ಪ್ರಶ್ನೆಗೆ ಮೋದಿ ಉತ್ತರ| ‘ನಾನೂ ಚೌಕೀದಾರ’ ಸಂವಾದ
ಬೆಂಗಳೂರು[ಏ.01]: ‘ನಾವು ಕೇವಲ ಭಾರತ-ಪಾಕಿಸ್ತಾನ ಎಂಬುದಾಗಿ ಮಾತನಾಡುವ ಮೂಲಕ ಬಹಳಷ್ಟು ಸಮಯ ವ್ಯರ್ಥ ಮಾಡಿದ್ದೇವೆ. ಪಾಕ್ ಸಾಯೋದಾದ್ರೆ ಸಾಯಲಿ ಬಿಡಿ. ಅದನ್ನು ಬಿಟ್ಟು ನಾವು ಮುಂದೆ ಹೋಗೋಣ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶೀಘ್ರದಲ್ಲೇ ನಮ್ಮ ದೇಶ ೫ ಟ್ರಿಲಿಯನ್ ರಾಷ್ಟ್ರಗಳ ಕ್ಲಬ್ಗೆ ಸೇರ್ಪಡೆಯಾಗಲಿದೆ ಎಂದೂ ಅವರು ತಿಳಿಸಿದ್ದಾರೆ.
ಭಾನುವಾರ ಸಂಜೆ ರಾಷ್ಟ್ರೀಯ ಬಿಜೆಪಿಯಿಂದ ಆಯೋಜಿಸಲಾಗಿದ್ದ ‘ನಾನೂ ಚೌಕೀದಾರ’ ಎಂಬ ಕಾರ್ಯಕ್ರಮದ ಅಂಗವಾಗಿ ದೇಶಾದ್ಯಂತ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ ಮೋದಿ ಅವರು ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರ ಪ್ರಶ್ನೆಗೆ ಉತ್ತರಿಸಿದರು.
ನಗರದ ಮಹದೇವಪುರದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಐಟಿ ಉದ್ಯೋಗಿ ರಾಕೇಶ್ ಪ್ರಸಾದ್ ಎಂಬುವರು ಪ್ರಧಾನಿಯನ್ನು ಉದ್ದೇಶಿಸಿ, ‘ಹಲವು ದಶಕಗಳಿಂದ ಭಾರತ ಅಭಿವೃದ್ಧಿ ಶೀಲ ದೇಶಗಳ ಪಟ್ಟಿಯಲ್ಲೇ ಇದೆ. ಅಭಿವೃದ್ಧಿ ದೇಶಗಳ ಪಟ್ಟಿಗೆ ಸೇರುವುದು ಯಾವಾಗ’ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ‘ನಾವು ಬಹಳ ವರ್ಷ ಕೇವಲ ಭಾರತ-ಪಾಕಿಸ್ತಾನ ಎಂಬ ವಿಷಯ ಕುರಿತು ಮಾತನಾಡುತ್ತಲೇ ಸಾಕಷ್ಟು ಸಮಯ ವ್ಯರ್ಥ ಮಾಡಿದ್ದೇವೆ. ಪಾಕಿಸ್ತಾನ ಸಾಯುವುದಾದರೆ ಸಾಯಲಿ ಬಿಡಿ. ನಾವು ಮುಂದೆ ಹೋಗೋಣ. ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ’ ಎಂದು ತಿಳಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದ ಅಭಿವೃದ್ಧಿಶೀಲ ದೇಶದ ವಿಷಯ ಪ್ರಸ್ತಾಪವಾಗುತ್ತಲೇ ಇದೆ. ಈ ವಿಷಯದಲ್ಲಿ ಸಾಕಷ್ಟು ವಿಳಂಬವಾಗಿದೆ. ನಮ್ಮ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ದಿಕ್ಕಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಭಾರತ ಸಮೃದ್ಧ ದೇಶ. ಇಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಇಚ್ಛಾಶಕ್ತಿ ಮತ್ತು ದೇಶದ ೧೨೫ ಕೋಟಿ ಜನರ ಕನಸು ನನಸಾಗಬೇಕು. ಹಿಂದುಳಿದ ದೇಶಗಳ ಪಟ್ಟಿಯಿಂದ ಹೊರಗೆ ಬರಬೇಕು’ ಎಂದರು.
‘ಕಳೆದ ಐದು ವರ್ಷಗಳ ಆಡಳಿತ ಗಮನಿಸುತ್ತಿದ್ದೀರಿ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಜಾಗತಿಕ ಮಟ್ಟದಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವಾಗ ಭಾರತವನ್ನು ಪರಿಗಣಿಸಲಾಗುತ್ತದೆ. 2014ರಲ್ಲಿ ಭಾರತ ಆರ್ಥಿಕ ವ್ಯವಸ್ಥೆಯಲ್ಲಿ ಜಾಗತಿಕ ಮಟ್ಟದಲ್ಲಿ 11ನೇ ಸಾಲಿನಲ್ಲಿತ್ತು. ಆದರೆ, ಈಗ ೬ನೇ ಸ್ಥಾನಕ್ಕೆ ಏರಿದೆ. ಇದನ್ನು ನಾವು ಡಂಗುರ ಸಾರಲು ಹೋಗಿಲ್ಲ’ ಎಂದು ಮೋದಿ ಹೇಳಿದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...