‘ಕಮಲ’ಕ್ಕೆ ಮತ ಕೊಡಿ ಎಂದ ಮೈಸೂರು ಕಾಂಗ್ರೆಸ್ ಅಭ್ಯರ್ಥಿ!
ಬಿಜೆಪಿಯಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ| ‘ಕಮಲ’ಕ್ಕೆ ಮತ ಕೊಡಿ ಎಂದ ಮೈಸೂರು ಸಿ. ಎಚ್. ವಿಜಯಶಂಕರ್
ಸಿದ್ದಾಪುರ[ಏ.02]: ಈ ಹಿಂದೆ ಬಿಜೆಪಿಯಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರು ಬಾಯಿತಪ್ಪಿ ‘ನನ್ನ ಚಿಹ್ನೆಯಾದ ಕಮಲಕ್ಕೆ ಮತ ನೀಡಿ’ ಎಂದು ಕೇಳಿದ ಪ್ರಸಂಗ ನಡೆದಿದೆ.
ವಿಜಯಶಂಕರ್ ಸೋಮವಾರ ಸಿದ್ದಾಪುರ ಪಟ್ಟಣದಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಎಲ್ಲ ಮತದಾರರು ನನ್ನ ಚಿಹ್ನೆಯಾದ ಕಮಲಕ್ಕೆ ಮತ ನೀಡಿ ಎಂದು ಹೇಳುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರು ಬೆಚ್ಚಿಬಿದ್ದು ಗೊಂದಲಕ್ಕಿಡಾದರು. ನಂತರ ಎಚ್ಚೆತ್ತುಕೊಂಡ ಅವರು, ನನ್ನ ಬಾಯ್ತಪ್ಪಿನಿಂದ ಹಾಗಾಗಿದೆ. ನನ್ನ ಹಸ್ತ ಚಿಹ್ನೆಗೆ ಮತ ನೀಡಿ ಎಂದು ಸರಿಪಡಿಸಿಕೊಂಡರು.
ವಿಜಯಶಂಕರ್ ಅವರು ಈ ಹಿಂದೆ ಬಿಜೆಪಿಯಲ್ಲಿದ್ದು, ಆ ಪಕ್ಷ ತೊರೆದು ಈಗ ಮೈತ್ರಿ ಅಭ್ಯರ್ಥಿ ಆಗಿ ಸ್ಪರ್ಧಾ ಕಣದಲ್ಲಿದ್ದಾರೆ. ಕಾಂಗ್ರೆಸ್ನಲ್ಲಿದ್ದರೂ ಅವರು ಸಂಪೂರ್ಣವಾಗಿ ಬಿಜೆಪಿಯನ್ನು ತೊರೆದಿಲ್ಲ ಎಂದು ಈ ಸಂದರ್ಭದಲ್ಲಿ ಕಾರ್ಯಕರ್ತರು ಆಡಿಕೊಳ್ಳುತ್ತಿರುವುದು ಕಂಡುಬಂತು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...