ಶಿವರಾಂ ಮನೆಗೆ ಸಚಿವ ರೇವಣ್ಣ, ಪ್ರಜ್ವಲ್ ಭೇಟಿ
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಚುನಾವಣಾ ಕಣವೂ ಕೂಡ ರಂಗೇರುತ್ತಿದೆ. ಇದೇ ಸಂದರ್ಭದಲ್ಲಿ ಎಣ್ಣೆ - ಸೀಗೇಕಾಯಿಯಂತೆ ಇರುವ ಹಾಸನ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ಭೇಟಿಯಾಗಿದ್ದಾರೆ.
ಹಾಸನ: ಹಿಂದಿನಿಂದಲೂ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಸಂಬಂಧವೆಂದರೆ ಎಣ್ಣೆ- ಸೀಗೆಕಾಯಿ ಇದ್ದಂತೆ. ಆದರೆ ಮೈತ್ರಿ ತತ್ವ ಎರಡೂ ಪಕ್ಷಗಳ ಮುಖಂಡರನ್ನು ಒಂದೆಡೆ ಬೆಸೆದಿದೆ. ಒಂದು ಕಾಲದಲ್ಲಿ ಕಾರ್ಯ ಸಭೆ, ಸಮಾರಂಭ, ಸುದ್ದಿಗೋಷ್ಠಿಗಳಲ್ಲಿ ಟೀಕಾ, ಟಿಪ್ಪಣೆಗಳ ಸುರಿಮಳೆಗೈದಿದ್ದ ಸಚಿವ ರೇವಣ್ಣ ಹಾಗೂ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ.ಶಿವರಾಂ ಈಗ ಮುಖಾಮುಖಿಯಾಗಿ, ಸ್ನೇಹಹಸ್ತ ಚಾಚಿದ್ದಾರೆ.
ಸಚಿವ ರೇವಣ್ಣ, ಹಾಸನ ಲೋಕಸಭಾ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಬಿ.ಶಿವರಾಂ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ವೇಳೆ ತಮ್ಮನ್ನು ಬೆಂಬಲಿಸುವಂತೆ ರೇವಣ್ಣ, ಪ್ರಜ್ವಲ್ ಇಬ್ಬರೂ ಕೋರಿದ್ದು ಶಿವರಾಂ ಸಹ ಅಸ್ತು ಎಂದಿದ್ದಾರೆ.
ಮೊದಲಿಗೆ ತಮ್ಮ ಮನೆಗೆ ಬಂದ ಪ್ರಜ್ವಲ್ ರೇವಣ್ಣನವರಿಗೆ ಶಿವರಾಂ ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿದರು. ಬಳಿಕ ಸಚಿವ ಎಚ್.ಡಿ. ರೇವಣ್ಣ ಮತ್ತು ಬಿ. ಶಿವರಾಂ ಅವರಿಬ್ಬರೇ ಮನೆಯ ಕೊಠಡಿಯಲ್ಲಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...