ಡಿಕೆಶಿಗೆ ಮಂಡ್ಯ ಕಾಂಗ್ರೆಸ್ಸಿಗರ ಎಚ್ಚರಿಕೆ, JDSಗೆ ನಡುಕ ಶುರು..!
ರಾಜ್ಯ ರಾಜಕಾರಣದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ರಣಾಂಗಣವಾಗಿದ್ದು, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಸುಮಲತಾ ಅಂಬರಿಶ್ ಅಡ್ಡಗಾಲಾಗಿದ್ದಾರೆ. ಇದನ್ನು ತಡೆಯಲು ಮಂಡ್ಯ ಅಖಾಡಕ್ಕಿಳಿದ ಕಾಂಗ್ರೆಸ್ ಟ್ರಬಲ್ ಶೂಟರ್ಗೆ ಮುಖಭಂಗವಾಗಿದೆ.
ಮಂಡ್ಯ, (ಮಾ.12): ಸುಮಲತಾ ಅಂಬರೀಶ್ ಸ್ಪರ್ಧೆಯಿಂದ ಮಂಡ್ಯ ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ಭಾರೀ ರಂಗೇರುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಹಾಗೂ ಸಮಲತಾ ನಡುವೆ ನೆಕ್ ಟು ನೆಕ್ ಫೈಟ್ ಏರ್ಪಟ್ಟಿದೆ.
ಅದರಲ್ಲೂ ಅಂಬಿ ಫ್ಯಾನ್ಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವಿನ ಆರೋಪ ಪ್ರತ್ಯಾರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಈ ಹಿನ್ನಲೆಯಲ್ಲಿ ಜೆಡಿಎಸ್ ಮಂಡ್ಯವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಮತ್ತೊಂದೆಡೆ ಮೈತ್ರಿ ಪಕ್ಷ ಕಾಂಗ್ರೆಸ್ ನಾಯಕರು ಸಮಲತಾ ಅಂಬರೀಶ್ಗೆ ಬೆಂಬಲ ನೀಡುತ್ತಿರುವುದು ಜೆಡಿಎಸ್ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮಂಡ್ಯ ಚುನಾವಣಾ ಅಖಾಡಕ್ಕೆ ಡಿಕೆಶಿ ಎಂಟ್ರಿ
ಹೀಗಾಗಿ ಜಿಲ್ಲೆಯ ಕಾಂಗ್ರೆಸ್ ನಾಯರನ್ನು ಹದ್ದುಬಸ್ತಿನಲ್ಲಿಡಲು ಸ್ವತಃ ಕುಮಾರಸ್ವಾಮಿ ಅವರೇ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರನ್ನು ಮಂಡ್ಯ ಅಖಾಡಕ್ಕಿಳಿಸಿದ್ದಾರೆ. ಆದ್ರೆ ಅದು ತಿರುಗುಬಾಣವಾಗಿದೆ.
"
'ಗೋ ಬ್ಯಾಕ್ ಡಿಕೆಶಿ' ಎಚ್ಚರಿಕೆ
ಹೌದು....ನಟ ನಿಖಿಲ್ ಕುಮಾರಸ್ವಾಮಿ ಬೆನ್ನಲ್ಲೇ ಇದೀಗ ಮಂಡ್ಯದಲ್ಲಿ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ `ಡಿಕೆಶಿ ಗೋ ಬ್ಯಾಕ್’ ಅನ್ನೋದಕ್ಕೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸಿದ್ಧತೆ ನಡೆಸುತ್ತಿದ್ದಾರೆ.
ಡಿಕೆಶಿ ವಿರುದ್ಧ ಹೋರಾಟಕ್ಕೆ ನಿರ್ಧರಿಸಿರುವ ಮಂಡ್ಯ ಕಾಂಗ್ರೆಸ್ಸಿಗರು, ಕಾಂಗ್ರೆಸ್ ಪಕ್ಷದ ಸಂಘಟನೆಗೆ ಬಂದರೆ ಸ್ವಾಗತಿಸುತ್ತೇವೆ. ಆದ್ರೆ ಜೆಡಿಎಸ್ ಏಜೆಂಟಾಗಿ ಬಂದರೆ ‘ಗೋ ಬ್ಯಾಕ್ ಡಿಕೆಶಿ’ ಹೆಸರಲ್ಲಿ ಹೋರಾಟ ಮಾಡುವುದಾಗಿ ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡ, ನಗರಸಭೆ ಮಾಜಿ ಸದಸ್ಯ ಅನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
1994ರಲ್ಲಿ ಕನಕಪುರದಿಂದ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪಕ್ಷೇತರವಾಗಿ ನಿಂತು ಗೆದ್ದಿದ್ದೀರಿ. ಅವತ್ತೇ ನಿಮ್ಮ ವಿರುದ್ಧ ಕ್ರಮ ತೆಗೆದುಕೊಂಡಿದ್ರೆ ಇವತ್ತು ನೀವು ಕಾಂಗ್ರೆಸ್ ನಾಯಕರಾಗುತ್ತಿರಲಿಲ್ಲ.
ನಿಖಿಲ್ ಸ್ಪರ್ಧಿಸಲೇಬೇಕಿದ್ರೆ ರಾಮನಗರದಲ್ಲಿ ನಿಲ್ಲಿಸಿಕೊಳ್ಳಲಿ. ಅಪ್ಪ-ಮಗ ಅವ್ವ ಎಲ್ಲಾ ಒಂದೇ ಕ್ಷೇತ್ರದಲ್ಲಿ ಇರಲಿ. ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಷ್ಟ, ಸುಖ ಕೇಳೋದಕ್ಕೆ ನೀವು ಸಚಿವರಾಗಿದ್ದೀರಿ. ನಿಮ್ಮ ಬಾಮೈದ ಎಂಎಲ್ಸಿ ಆಗಿದ್ದಾರೆ.
ಮಂಡ್ಯದಲ್ಲಿ ಯಾವೊಬ್ಬ ಕಾಂಗ್ರೆಸ್ ಜನಪ್ರತಿನಿಧಿ ಇಲ್ಲ. ನಮ್ಮ ಕಷ್ಟ ಸುಖ ಕೇಳೋದಕ್ಕೆ ಅಂತಾಲೇ ಸುಮಲತಾ ಗೆಲ್ಲಿಸಿಕೊಂಡು ಬರ್ತೀವಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಿಗೆ, ಪಕ್ಷ ಉಳಿಸಲು ಸಭೆ ಕರೆದರೆ ಒಪ್ಪಿಗೆ ಇದೆ. ಜೆಡಿಎಸ್ ಪರವಾಗಿ, ಜೆಡಿಎಸ್ ಗೆ ಚುನಾವಣೆ ಮಾಡಿ ಎಂದು ಸಭೆ ಕರೆದರೆ ಬಹಿಷ್ಕರಿಸುತ್ತೇವೆ.
ಕಾಂಗ್ರೆಸ್ ನಿಂದ ಸುಮಲತಾಗೆ ಟಿಕೆಟ್ ಕೊಡದಿದ್ದರೂ ಪಕ್ಷೇತರವಾಗಿ ನಿಲ್ಲಿಸಿ ಗೆಲ್ಲಿಸುತ್ತೇವೆ. ನಾಯಕರಿಗೆ ಪಕ್ಷದಿಂದ ಅಮಾನತು, ನೋಟಿಸ್ ಕೊಡುವುದಾಗಿ ಬೆದರಿಕೆ ಹಾಕಿದ್ರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.