ಅಯ್ಯಯ್ಯೋ, ಜ್ಯೋತಿಷಿಗಳಿಗೂ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಿಗಳು ಭಾರೀ ಹದ್ದಿಕಣ್ಣಿಟ್ಟಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮಂಡ್ಯದಲ್ಲಿರುವ ಜ್ಯೋತಿಷ್ಯ ಕೇಂದ್ರಗಳಿಗೂ ಸಹ ಚುನಾವಣೆ ನೀತಿ ಸಂಹಿತೆ ಬಿಸಿ ತಟ್ಟಿದೆ.
ಮಂಡ್ಯ, [ಮಾ.12] : ದೇಶದೆಲ್ಲಡೆ ಲೋಕಸಭಾ ಚುನಾವಣೆ ಸಮರ ದಿನದಿಂದ ದಿನಕ್ಕೆ ಬಿರುಸುಗೊಳ್ಳುವ ಬೆನ್ನಲ್ಲೇ ನೀತಿ ಸಂಹಿತೆ ಬಿಸಿ ಎಲ್ಲಡೆ ಆವರಿಸಿಕೊಳ್ಳುತ್ತಿದೆ.
ಅದರ ಬಿಸಿ ಮಂಡ್ಯದಲ್ಲಿರುವ ಜ್ಯೋತಿಷ್ಯ ಕೇಂದ್ರಗಳಿಗೆ ತಟ್ಟಿದ್ದು, ಹಸ್ತದ ಚಿಹ್ನೆ ಹೊಂದಿರುವ ಜ್ಯೋತಿಷ್ಯ ಕೇಂದ್ರದ ನಾಮಫಲಕಗಳಿಗೆ ಚುನಾವಣಾಧಿಕಾರಿಗಳು ಪೇಪರ್ ಮೆತ್ತಿ ಮುಚ್ಚಿದ್ದಾರೆ.
ನೀತಿ ಸಂಹಿತೆ ಜಾರಿ, ಸೋಶಿಯಲ್ ಮೀಡಿಯಾದಲ್ಲಿ ಏನು ಬರೆಯಬಾರದು?
ರಾಜಕೀಯ ಪಕ್ಷದ ಚಿಹ್ನೆಗಳಾದ ಹಸ್ತ, ಕಮಲ, ತೆನೆ ಹೊತ್ತ ಮಹಿಳೆ ಸೇರಿದಂತೆ ಯಾವುದೇ ಚಿಹ್ನೆಗಳನ್ನು ಬಹಿರಂಗವಾಗಿ ಚುನಾವಣಾಧಿಕಾರಿ ಪರವಾನಿಗೆ ಇಲ್ಲದೇ ಪ್ರದರ್ಶನ ಮಾಡುವಂತಿಲ್ಲ. ಹೀಗಾಗಿ ಜ್ಯೋತಿಷ್ಯ ಕೇಂದ್ರದಲ್ಲಿರುವ ಅಂಗೈ ಹಸ್ತದ ಚಿತ್ರಕ್ಕೂ ನೀತಿ ಸಂಹಿತೆ ಬಿಸಿ ತಟ್ಟಿದೆ.
ಕನಕ ದುರ್ಗ ಭವಿಷ್ಯ ಮಂದಿರ ಹಸ್ತದ ಗುರುತಿನ ಮೇಲೆ ಪೇಪರ್ ಮೆತ್ತಿರುವುದನ್ನು ಕಂಡು ಜನ ಮುಸಿ-ಮುಸಿ ನಗುತ್ತಿದ್ದರೆ, ಇನ್ನೂ ಕೆಲವರು ಇವರ ಭವಿಷ್ಯ ಮಂಕಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.