ಧಾರವಾಡ ಅಭ್ಯರ್ಥಿ ಆಯ್ಕೆ ಕಗ್ಗಂಟು : ಕಾಂಗ್ರೆಸ್ ರೇಸ್ ನಲ್ಲಿ ಯಾರು..?
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ದಿನಗಣನೆ ಆರಂಭವಾಗಿದ್ದು, ಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯು ಕಗ್ಗಂಟಾಗಿದೆ.
ಧಾರವಾಡ : ರಾಜ್ಯದಲ್ಲಿ ಕಾಂಗ್ರೆಸ್ ಪಾಲಿನ 20 ಲೋಕಸಭಾ ಕ್ಷೇತ್ರಗಳ ಪೈಕಿ 19 ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದ್ದು, ಧಾರವಾಡ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಮಾತ್ರ ಮತ್ತಷ್ಟು ಗೋಜಲಾಗಿದೆ. ಟಿಕೆಟ್ ಗಾಗಿ ತೀವ್ರ ಪೈಪೋಟಿ, ಲಾಬಿ, ಜಾತಿ ಲೆಕ್ಕಾಚಾರ ನಡೆದಿರುವ ಹಿನ್ನೆಲೆಯಲ್ಲಿ ಧಾರವಾಡ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಕಗ್ಗಂಟು ಮುಂದುವರೆದಿದ್ದು, ಕಾಂಗ್ರೆಸ್ಗೆ ತಲೆ ನೋವಾಗಿ ಪರಿಣ ಮಿಸಿದೆ.ಲಿಂಗಾಯತ ಅಥವಾ ಮುಸ್ಲಿಂ ಅಭ್ಯರ್ಥಿಗಳಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಗೊಂದಲ ಧಾರವಾಡ ಟಿಕೆಟ್ ಹಂಚಿಕೆಯನ್ನು ಸಂಕೀರ್ಣ ಗೊಳಿಸಿದೆ.
ಈ ಮಧ್ಯೆ ಮಾಜಿ ಸಚಿವ ವಿನಯ್ ಕುಲಕರ್ಣಿ ಪರ ಅಂತಿಮ ಕ್ಷಣದಲ್ಲಿ ಆರಂಭಗೊಂಡಿರುವ ಲಾಬಿ ಇನ್ನಷ್ಟು ಸಮಸ್ಯೆಗೆ ಕಾರಣವಾಗಿದೆ. ಧಾರವಾಡ ಕ್ಷೇತ್ರದ ಟಿಕೆಟ್ ಅನ್ನು ಲಿಂಗಾಯತರಾದ ಸದಾನಂದ ಡಂಗಣ್ಣವರ್ ಅಥವಾ ಮುಸ್ಲಿಂ ಜನಾಂಗದ ಶಾಕಿರ್ ಸನದಿ ಅವರಿಬ್ಬರ ಪೈಕಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಗೊಂದಲ ಕಾಂಗ್ರೆಸ್ ನಾಯಕರನ್ನು ಇನ್ನೂ ಕಾಡುತ್ತಿದೆ.
ಇಬ್ಬರ ಪರವಾಗಿಯೂ ಹೈಕಮಾಂಡ್ ಮಟ್ಟ ದಲ್ಲಿ ತೀವ್ರ ಲಾಬಿ ನಡೆದ ಪರಿಣಾಮ ಗೊಂದಲ ಉಂಟಾಗಿದೆ. ಇದರ ನಡುವೆಯೇ ವಿನಯ ಕುಲಕರ್ಣಿ ಪರವಾಗಿ ಕಡೆ ಕ್ಷಣದಲ್ಲಿ ತೀವ್ರ ಒತ್ತಡ ನಿರ್ಮಾಣ ಗೊಂಡಿರುವ ಹಿನ್ನೆಲೆಯಲ್ಲಿ ನಾಯಕರು ಗೊಂದಲಕ್ಕೆ ಬಿದ್ದಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ಧಾರವಾಡದ ಸ್ಥಳೀಯ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಶಾಕಿರ್ ಸನದಿ ಹಾಗೂ ಡಂಗಣ್ಣವರ್ ಅವರಿ ಗಿಂತ ಸ್ಥಳೀಯವಾಗಿ ಪ್ರಭಾವಿಯಾಗಿರುವ ವಿನಯ್ ಕುಲಕರ್ಣಿ ಅವರಿಗೆ ಟಿಕೆಟ್ ನೀಡುವುದು ಉತ್ತಮ ಎಂದು ಸ್ಥಳೀಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದರು. ಹೀಗಾಗಿ ಶಾಕಿರ್ ಸನದಿ ಹಾಗೂ ಸದಾನಂದ ಡಂಗಣ್ಣವರ್ ನಡುವೆ ಇದ್ದ ಪೈಪೋಟಿ ತ್ರಿಕೋನ ಸ್ಪರ್ಧೆಗೆ ತಿರುಗಿದೆ. ಹೀಗಾಗಿ ಟಿಕೆಟ್ ಘೋಷಣೆ ವಿಳಂಬವಾಗುತ್ತಿದೆ ಎಂಬ ಮಾತು ಕೇಳಿ ಬಂದಿವೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...