ರತ್ನಪ್ರಭಾಗೆ ಪ್ರಿಯಾಂಕ್ ಖರ್ಗೆ ತಿರುಗೇಟು
2014 ರಲ್ಲಿಯೇ ಸಿಗಬೇಕಾಗಿದ್ದ ಮುಖ್ಯಕಾರ್ಯದರ್ಶಿ ಹುದ್ದೆಯಿಂದ ದೂರ ಇಡಲಾಗಿತ್ತು ಎಂದ ಕೆ.ರತ್ನಪ್ರಭಾ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಸೇಡಂ[ಏ.12]: ತಾವು ದಲಿತರು ಎಂಬ ಕಾರಣಕ್ಕಾಗಿಯೇ ತಮಗೆ 2014 ರಲ್ಲಿಯೇ ಸಿಗಬೇಕಾಗಿದ್ದ ಮುಖ್ಯಕಾರ್ಯದರ್ಶಿ ಹುದ್ದೆಯಿಂದ ದೂರ ಇಡಲಾಗಿತ್ತು ಎಂದು ಬಿಜೆಪಿ ಸೇರಿರುವ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆ, ರತ್ನಪ್ರಭಾ ಅವರ ಸೇವೆ, ಹಿರಿತನ ಎಲ್ಲವನ್ನೂ ಪರಿಗಣಿಸಿಯೇ ಉನ್ನತ ಹುದ್ದೆ ನೀಡಲಾಗಿದ್ದು ಅವರು ಯಾಕೆ ಹಾಗೆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಸ್ ಹುದ್ದೆಗೆ ನೇಮಕಾತಿ ಅದು ಸಿಎಂ ಆದವರ ಪರಮಾಧಿಕಾರವಾಗಿರುತ್ತದೆ. ನಿವೃತ್ತಿ ಬಳಿಕವೂ ಅವರನ್ನು ಸೇವೆಯಲ್ಲಿ ಮುಂದುವರಿಸಿದ್ದನ್ನು ಅವರು ಮರೆಯಬಾರದು ಎಂದರು. ಸರ್ಕಾರವನ್ನು ದಲಿತ ವಿರೋಧಿ ಎಂದು ರತ್ನಪ್ರಭಾ ಜರಿದಿದ್ದು, ಈ ಬಗ್ಗೆ ಈಗ ಏನನ್ನೂ ತಾವು ಹೇಳಲು ಇಷ್ಟಪಡೋದಿಲ್ಲ ಎಂದರುವ ಪ್ರಿಯಾಂಕ್ ಖರ್ಗೆ ಅವರು, ಹೀಗೆಯೇ ಟೀಕಿಸುತ್ತ ನಡೆದರೆ ತಾವು ಅನೇಕ ಸಂಗತಿಗಳನ್ನು ಹೊರ ಹಾಕುವುದಾಗಿ ಹೇಳಿದರು.