ಲೋಕಸಭಾ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆ| ನಾಮಿನೇಷನ್ ಪತ್ರ ಮನೆಯಲ್ಲೇ ಮರೆತು ಬಂದ ಅಭ್ಯರ್ಥಿ!
ಧಾರವಾಡ[ಏ.02]: ಧಾರವಾಡ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದ ಅಭ್ಯರ್ಥಿಯೊಬ್ಬರು ನಾಮಪತ್ರವನ್ನೇ ಮರೆತು ಚುನಾವಣಾಧಿಕಾರಿಗಳ ಮುಂದೆ ಹೋಗಿ ಪೇಚಿಗೀಡಾದ ಅಪರೂಪದ ಪ್ರಸಂಗ ಸೋಮವಾರ ನಡೆದಿದೆ.
ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲು ಆಗಮಿಸಿದ್ದ ಮಲ್ಲಿಕಾರ್ಜುನ ಬಾಳನಗೌಡ್ರ ಸೋಮವಾರ ನಾಮಪತ್ರ ಇಲ್ಲದೇ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ಚುನಾವಣಾಧಿಕಾರಿ ಬಳಿ ತೆರಳಿದರು. ಹತ್ತಾರು ಜನರ ಮೆರವಣಿಗೆ ಮುಗಿಸಿ, ಕೈ ಬೀಸುತ್ತಾ ಒಳ ಬಂದ ಬಾಳನಗೌಡರಿಗೆ ನಾಮಪತ್ರ ತಂದಿಲ್ಲ ಎಂಬುದೂ ಮರೆತು ಹೋಗಿತ್ತು.
ಚುನಾವಣಾಧಿಕಾರಿಗಳ ಮುಂದೆ ಹೋಗಿ ನಿಂತಾಗಿತ್ತು. ಆಗ ಚುನಾವಣಾಧಿಕಾರಿಗಳು ನಾಮಪತ್ರ ಎಲ್ಲಿ ಎಂದು ಪ್ರಶ್ನಿಸಿದಾಗಲೇ ನಾಮಪತ್ರ ಬಿಟ್ಟು ಬಂದದ್ದು ಅರಿವಾಗಿದೆ. ಆಗ ಎಚ್ಚೆತ್ತು ಸಹಚರನಿಗೆ ನಾಮಪತ್ರ ತರಲು ಹೇಳಿದರು. ಆದರೆ, ಆತ ಬರಲು ತಡ ಮಾಡಿದ್ದರಿಂದ ತಾವೇ ಹೊರ ಹೋಗಿ ನಾಮಪತ್ರ ತಂದು ಕೊನೇ ಕ್ಷಣದಲ್ಲಿ ಸಲ್ಲಿಸಿದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
