ಲೋಕಸಭಾ ಚುನಾವಣೆ ಬಳಿಕ ಮೈತ್ರಿ ಸರ್ಕಾರ ಇರಲ್ಲ : ಕಾಂಗ್ರೆಸ್ ಮುಖಂಡ
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಗ್ಗೆ ಹಲವು ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದೆ.
ತುಮಕೂರು: ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದಿಲ್ಲ ಎಂದು ಕಾಂಗ್ರೆಸ್ನ ಮಾಜಿ ಶಾಸಕ ಕೆ.ಎನ್. ರಾಜಣ್ಣ ಭವಿಷ್ಯ ನುಡಿದಿದ್ದಾರೆ. ತುಮಕೂರು ಸಮೀಪದ ಹೆಬ್ಬೂರಿನಲ್ಲಿ ಸಂಸದ ಮುದ್ದಹನುಮೇಗೌಡರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ಗೆ ಕ್ಷೇತ್ರ ಬಿಟ್ಟುಕೊಡುವುದಲ್ಲದೆ ಅಭ್ಯರ್ಥಿಗಳನ್ನು ನಾವೇ ಕೊಡಬೇಕಾಗಿದೆ.
ಬೆಂಗಳೂರು ಉತ್ತರಕ್ಕೆ ಮುದ್ದಹನುಮೇಗೌಡ ಸ್ಪರ್ಧಿಸಲು ಸಿದ್ಧರಿದ್ದಾರೆ ಎಂದರೆ ಸಾಕು ದೇವೇಗೌಡರು ಇಲ್ಲಿಗೇ ಬಿ ಫಾರಂ ಕಳಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಮುದ್ದಹನುಮೇಗೌಡರು ಸ್ಪರ್ಧೆ ಮಾಡುವ ನಿರ್ಧಾರಕ್ಕೆ ಬಂದಿದ್ದು, ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ನಾನೂ ಇರುತ್ತೇನೆ. ಮುದ್ದಹನುಮೇಗೌಡರು ಸ್ಪರ್ಧಿಸುತ್ತಿರುವುದರಿಂದ ನಾನು ಸ್ಪರ್ಧಿಸುವುದಿಲ್ಲ. ಅವರು ಬೇರೆಯಲ್ಲ, ನಾನು ಬೇರೆಯಲ್ಲ. ಮುದ್ದಹನುಮೇಗೌಡರು ಸಂಸತ್ನಲ್ಲಿ ಕರ್ನಾಟಕದ ಧ್ವನಿಯಾಗಿದ್ದರು. ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುತ್ತಿದ್ದರು. ಇಂತಹವರಿಗೆ ಟಿಕೆಟ್ ನೀಡದೇ ಇರುವುದು ಅನ್ಯಾಯ ಎಂದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...