‘ಸುಮಲತಾ ಚುನಾವಣೆಯಲ್ಲಿ ಗೆದ್ದಾಗಿದೆ: ಅಂತರವಷ್ಟೇ ತಿಳಿಯಬೇಕಿದೆ’
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಅಭ್ಯರ್ಥಿಗಳು ಪ್ರಚಾರ ಕಾರ್ಯ ಬಿರುಸಿನಿಂದ ನಡೆಸುತ್ತಿದ್ದಾರೆ. ಮಂಡ್ಯದಲ್ಲಿ ಜನ ಮನಗೆಲ್ಲಲು ಪ್ರಚಾರದಲ್ಲಿ ಬ್ಯುಸಿಯಾಗಿರುವ ಸುಮಲತಾ ಈಗಾಗಲೇ ಗೆದ್ದಾಗಿದೆಯಂತೆ. ಹೇಗೆ..?
ಭದ್ರಾವತಿ : ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ಭರ್ಜರಿ ಪ್ರಚಾರವೂ ಕೂಡ ಜೋರಾಗಿದೆ. ಪಕ್ಷಗಳ ನಡುವೆ ವಾಕ್ಸಮರಗಳು ಜೋರಾಗಿದ್ದು, ಎಲ್ಲರೂ ಕೂಡ ತಮ್ಮ ಪಕ್ಷಗಳ ಅಭ್ಯರ್ಥಿಗಳೇ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಶಿವಮೊಗ್ಗದ ಭದ್ರಾವತಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಮಂಡ್ಯದಲ್ಲಿ ಸುಮಲತಾ ಗೆಲುವಿನ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಕಲಬುರಗಿ ಯಲ್ಲಿ ಮಲ್ಲಿಕಾರ್ಜುನ ಖರ್ಗೆ, ತುಮಕೂರಿನಲ್ಲಿ ದೇವೇಗೌಡ ಸೋಲು ಖಚಿತ. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲುವು ಪಡೆದಾಗಿದೆ. ಆದರೆ ಎಷ್ಟು ಅಂತರ ಎನ್ನುವುದನ್ನು ತಿಳಿದುಕೊಳ್ಳಲಷ್ಟೇ ಫಲಿತಾಂಶಕ್ಕೆ ಕಾಯ ಬೇಕಾಗಿದೆ ಎಂದು ಹೇಳಿದ್ದಾರೆ.
ತುಮಕೂರು, ಮೈಸೂರು, ಹಾಸನ , ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಒಡಕು ಮೂಡಿದೆ. ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ಬಿಎಸ್ ವೈ ಹೇಳಿದ್ದಾರೆ.
ಇನ್ನು ಶಿವಮೊಗ್ಗದಲ್ಲಿ ಡಿಕೆಶಿ ಮತ್ತು ಸಿಎಂ ಕುಮಾರಸ್ವಾಮಿ ಬಂದು ಪ್ರಚಾರ ಮಾಡಿದರೆ ಮಾಡಲಿ. ಶಿವಮೊಗ್ಗಕ್ಕೆ ಬಂದು ಡಿಕೆಶಿ , ಹೆಚ್ಡಿಕೆ ಮಾಡುವುದೇನಿದೆ ಮೊದಲು ಅವರು ತಮ್ಮ ಪಕ್ಷಗಳಲ್ಲಿನ ಗೊಂದಲ ಬಗೆಹರಿಸಿ ಕೊಳ್ಳಲಿ. ಜನರು ಬಿಜೆಪಿ ಗೆಲ್ಲಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ. ಬಿಜೆಪಿಯ ಬಿ ವೈ ರಾಘವೇಂದ್ರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...