ಎಲೆಕ್ಷನ್ ಬಂದ್ರೆ ಅಳಿಯನ ಮನೇಲಿ ತಂಗುವ ಸಂಗಣ್ಣ!: ಕಾರಣ ಕೇಳಿದ್ರೆ ಅಚ್ಚರಿ ಪಡುತ್ತೀರಿ
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜಕಾರಣಿಗಳೆಲ್ಲಾ ಮತದಾರರನ್ನು ಓಲೈಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೃಆಎ. ಹೀಗಿರುವಾಗ ಹಾಲಿ ಸಂಸದ ಸಂಗಣ್ಣ ಕರಡಿಗೆ ಸಂಬಂಧಿಸಿದಂತೆ ಅಚ್ಚರಿಯ ವಿಚಾರ ಬಯಲಾಗಿದೆ. ಅದೇನು? ಇಲ್ಲಿದೆ ವಿವರ
ಕೊಪ್ಪಳ[ಮೇ.01]: ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಾಗಿ ಅಭ್ಯರ್ಥಿಗಳು ಮಂತ್ರಗಳನ್ನು ಜಪಿಸುವುದು, ದೇವರನ್ನು ಆರಾಧಿಸುವುದು ಸಾಮಾನ್ಯ. ಆದರೆ, ಹಾಲಿ ಸಂಸದ ಸಂಗಣ್ಣ ಕರಡಿ ಮಾತ್ರ ಚುನಾವಣೆಯಲ್ಲಿ ಅದೃಷ್ಟಕ್ಕಾಗಿ ಅಳಿಯನ ಮನೆಯಲ್ಲಿಯೇ ವಾಸಿಸುತ್ತಿದ್ದಾರೆ!
ನಗರದ ಕಿನ್ನಾಳ ರಸ್ತೆ ಬಳಿ ಪ್ರಗತಿ ನಗರದಲ್ಲಿರುವ ಅಳಿಯ (ಪುತ್ರಿಯ ಪತಿ) ಗಿರೀಶ್ ಕಣವಿ ನಿವಾಸ ದಲ್ಲಿಯೇ ತಂಗಿದ್ದಾರೆ. ಟಿಕೆಟ್ ಪಕ್ಕಾ ಆಗುವ ಮೊದಲೇ ಚುನಾವಣೆ ಅಧಿ ಸೂಚನೆ ಪ್ರಕಟವಾಗುತ್ತಿ ದ್ದಂತೆ ಈ ಮನೆಯಲ್ಲಿ ಠಿಕಾಣಿ ಹೂಡಲಾರಂಭಿ ಸಿದ್ದರು. ಅದರಲ್ಲೂ ಕೈಗೆ ಬಿ ಫಾರಂ ಸಿಗುತ್ತಿದ್ದಂತೆ ಸಂಪೂರ್ಣವಾಗಿ ಅಲ್ಲಿಯೇ ತಂಗುತ್ತಿದ್ದಾರೆ. ಅಲ್ಲಿಂದಲೇ ಪ್ರಚಾರಕ್ಕೆ ತೆರಳುತ್ತಿದ್ದಾರೆ.
ಜೆಡಿಎಸ್ನಲ್ಲಿದ್ದ ಸಂಗಣ್ಣ ಕರಡಿ 2011ರಲ್ಲಿ ಆಪರೇಷನ್ ಕಮಲಕ್ಕೆ ತುತ್ತಾಗಿ ಬಿಜೆಪಿ ಸೇರಿದ್ದರು. ಈ ಸಂದರ್ಭದಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಅವರು, ಅಳಿಯನ ಮನೆಯಲ್ಲಿ ಟೆಂಟ್ ಹಾಕಿದ್ದರು. ಆ ಚುನಾವಣೆಯಲ್ಲಿ ಜಯ ಸಾಧಿಸಿದರು. ಇದಾದ ಮೇಲೆ 2013ರಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಆಯಿತು. ನಗರದ ಕವಲೂರು ಬಡಾವಣೆಯಲ್ಲಿರುವ ತಮ್ಮ ಹೊಸ ಮನೆಯಿಂದಲೇ ಚುನಾವಣೆ ಚಟುವಟಿಕೆ ಆರಂಭಿಸಿದರು. ಆದರೆ, ಸೋಲುಂಡಿದ್ದರು.
ಅಳಿಯನ ಮನೆಯಲ್ಲಿ ಇದ್ದಿದ್ದರೆ ಗೆದ್ದಿರೋರು ಎಂದು ಬೆಂಬಲಿಗರು ಆಡಿಕೊಂಡರು. 2014ರಲ್ಲಿ ಲೋಕಸಭಾ ಚುನಾವಣೆ ಘೋಷಣೆ ಆಯಿತು. ಆಗ ಬಿಜೆಪಿಯಿಂದ ಅಖಾಡಕ್ಕಿಳಿದು, ಬೆಂಬಲಿಗರ ಸಲಹೆ ಮೇರೆಗೆ ಅಳಿಯನ ಮನೆಯಲ್ಲಿ ತಂಗಿದರು. ಏನೋ ಗೊತ್ತಿಲ್ಲ ಜಯಶಾಲಿಯಾದರು. ಈ ಬಾರಿ ಟಿಕೆಟ್ ಕೈ ತಪ್ಪಿ ಹೋಗುವ ಲಕ್ಷಣಗಳು ಕಾಣಲಾರಂಭಿಸಿದ್ದವು. ತಕ್ಷಣ ಅಳಿಯನ ಮನೆಗೆ ಶಿಫ್ಟ್ ಆದರು. ಅಚ್ಚರಿ ಎನ್ನುವಂತೆ ಟಿಕೆಟ್ ಲಭಿಸಿತು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...