ಒತ್ತಡಕ್ಕೆ ಮಣಿದು ಸ್ಪರ್ಧಿಸುತ್ತಿದ್ದೇನೆ ಎಂದ ದೇವೇಗೌಡರ ಆಸ್ತಿ ಎಷ್ಟು?
ಸ್ಪೀಕರ್ ಸಲಹೆ, ಮಮತಾ ಒತ್ತಡಕ್ಕೆ ಮಣಿದು ಸ್ಪರ್ಧೆ: ಗೌಡ| ತುಮಕೂರಿನಲ್ಲಿ ಪರಂ ನೇತೃತ್ವದಲ್ಲಿ ಚುನಾವಣೆ| ಫಲಿತಾಂಶದ ಬಳಿಕ ಮೈತ್ರಿ ಪಕ್ಷಗಳ ಬೆಲೆ ಗೊತ್ತಾಗುತ್ತೆ
ತುಮಕೂರು[ಮಾ.26]: ರಾಜ್ಯದ ಎಲ್ಲ 28 ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೋಗುವುದಾಗಿ ಮಾಜಿ ಪ್ರಧಾನಿ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್.ಡಿ. ದೇವೇಗೌಡ ತಿಳಿಸಿದರು.
ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಎಲ್ಲ ಕಡೆಯೂ ಪ್ರಚಾರಕ್ಕೆ ಹೋಗುತ್ತೇನೆ. ಕೇವಲ ನಾನು ತುಮಕೂರಿಗೆ ಮಾತ್ರ ಸೀಮಿತವಾಗುವುದಿಲ್ಲ. ಎಲ್ಲಿ ಅಭ್ಯರ್ಥಿಗಳಿಗೆ ನನ್ನ ಅಪೇಕ್ಷೆ ಇದೆಯೋ ಅಲ್ಲೆಲ್ಲಾ ಹೋಗುವುದಾಗಿ ತಿಳಿಸಿದರು.
ಕೇವಲ ರಾಜ್ಯದಲ್ಲಿ ಮಾತ್ರವಲ್ಲ, ಹೊರ ರಾಜ್ಯದಲ್ಲೂ ಪ್ರಚಾರಕ್ಕೆ ಹೋಗುತ್ತೇನೆ. ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಕರೆದಿದ್ದು, ಅಲ್ಲಿಗೆ ಹೋಗುವುದಾಗಿ ತಿಳಿಸಿದರು. ನಾನು ಪುನಃ ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದೆ. ಆದರೆ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ನಿಮ್ಮಂತಹವರು ಇರಬೇಕು ಎನ್ನುವ ಒತ್ತಡಗಳು ಬಂದವು. ಖುದ್ದು ಲೋಕಸಭಾ ಸ್ಪೀಕರ್ ಅವರೇ ಈ ರೀತಿಯ ಅಭಿಪ್ರಾಯ ಹಂಚಿಕೊಂಡಿದ್ದರು. ನಾನು ಇಂಥ ಸನ್ನಿವೇಶದಲ್ಲಿ ಮತ್ತೆ ಸ್ಪರ್ಧಿಸಬೇಕಾ ಅಂತಾ ಯೋಚಿಸುತ್ತಿದ್ದೆ. ಆದರೆ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಮುಖಂಡರು ನನ್ನ ಮೇಲೆ ಒತ್ತಡ ತಂದರು ಎಂದು ಮತ್ತೆ ಸ್ಪರ್ಧೆ ಮಾಡಿದ ಕಾರಣವನ್ನು ವಿವರಿಸಿದರು.
ಪರಮೇಶ್ವರ್ ಅವರ ನಾಯಕತ್ವದಲ್ಲಿ ಇಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ ಕುಗ್ಗಿಸುವ ಶಕ್ತಿ ನಮಗಿದ್ದು ಆ ಕೆಲಸವನ್ನು ನಾವು ಮಾಡುವುದಾಗಿ ತಿಳಿಸಿದರು. ಚುನಾವಣಾ ಫಲಿತಾಂಶ ಬಂದ ಮೇಲೆ ಮೈತ್ರಿ ಪಕ್ಷಗಳ ಬೆಲೆ ಗೊತ್ತಾಗುತ್ತೆ ಎಂದರು.
ಮಾಜಿ ಪ್ರಧಾನಿ ಶ್ರೀ ಎಚ್.ಡಿ. ದೇವೇಗೌಡ ಅವರು ಇಂದು ತುಮಕೂರಿನಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಎಸ್ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
— Dr. G Parameshwara (@DrParameshwara) March 25, 2019
ಈ ಸಂದರ್ಭದಲ್ಲಿ ಹಲವು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರೊಂದಿಗೆ ನಾನು ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಂಡೆ. pic.twitter.com/BoWnYfDTK2
ನೂರಕ್ಕೆ ನೂರು ದೇವೇಗೌಡರ ಆಯ್ಕೆ ಖಚಿತ
ತುಮಕೂರು: ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಚ್.ಡಿ. ದೇವೇಗೌಡರು ಚುನಾವಣೆಯಲ್ಲಿ ಆಯ್ಕೆಯಾಗುವುದು ನೂರಕ್ಕೆ ನೂರು ಖಚಿತ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರದ ಜನರ ಬಗ್ಗೆ ವಿಶ್ವಾಸ ಹಾಗೂ ನಂಬಿಕೆ ಇದೆ. ಬರುವ ಚುನಾವಣೆಯಲ್ಲಿ ರಾಷ್ಟ್ರ ನಾಯಕ ದೇವೇಗೌಡ ಗೆಲ್ಲುವುದು ಶತಃಸಿದ್ಧ ಎಂದರು.
ಈ ಕ್ಷೇತ್ರದಲ್ಲಿ ಬಿಜೆಪಿ ಏನು ಮಾಡುತ್ತೆ ಎಂಬುದು ನಮಗೆ ಗೊತ್ತಿದೆ, ಇದೇನು ನಮಗೆ ಹೊಸದಲ್ಲ. ಆದರೆ ಇದನ್ನು ಎದುರಿಸುವ ಶಕ್ತಿ ನಮಗಿದೆ. ದೇವೇಗೌಡರ ಆಶೀರ್ವಾದೊಂದಿಗೆ ಅದನ್ನು ಎದುರಿಸುತ್ತೇವೆ ಎಂದು ಹೇಳಿದರು. ದೇವೇಗೌಡರು ನನ್ನ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾಗಿ ಬಂದಿದ್ದಕ್ಕೆ ನಾನು ಸ್ವಾಗತಿಸುತ್ತೇನೆ. ಈ ಚುನಾವಣೆಯಲ್ಲಿ ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಿಕೊಡುವ ಭರವಸೆಯನ್ನು ಗೌಡರಿಗೆ ನೀಡುತ್ತಿರುವುದಾಗಿ ತಿಳಿಸಿದರು.
ದೇವೇಗೌಡರ ಆಸ್ತಿ:
ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ 6 ಕೋಟಿ ಒಡೆಯರು. ಕಳೆದ ಬಾರಿಗಿಂತ ಅವರ ಆಸ್ತಿಯಲ್ಲಿ 5.23 ಕೋಟಿ ಏರಿಕೆ ಕಂಡಿದೆ. ಕಳೆದ ಬಾರಿ ಅವರು ಒಟ್ಟು 76.94 ಲಕ್ಷ ಆಸ್ತಿ ಘೋಷಿಸಿಕೊಂಡಿದ್ದರು. ಈ ಬಾರಿ 1.91 ಕೋಟಿ ಮೌಲ್ಯದ ಚರಾಸ್ತಿ , 4.09 ಕೋಟಿ ಮೌಲ್ಯದ ಸ್ಥಿರಾಸ್ತಿ, 4.98 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿರುವ ಅವರಿಗೆ .97.98 ಲಕ್ಷ ಸಾಲ ಇದೆ. ದೇವೇಗೌಡರ ಹೆಸರಲ್ಲಿ 3 ಅಂಬಾಸಿಡರ್ ಕಾರು, ಪತ್ನಿ ಚನ್ನಮ್ಮ ಹೆಸರಲ್ಲಿ 2 ಟ್ರಾಕ್ಟರ್ ಇವೆ. ದೇವೇಗೌಡರಿಗೆ ಹೊಳೆನರಸೀಪುರ ತಾಲೂಕಿನಲ್ಲಿ ವಿವಿಧ ಸರ್ವೆ ನಂಬರ್ಗಳಲ್ಲಿ ಕೃಷಿ ಭೂಮಿ ಹಾಗೂ 3.28 ಎಕರೆ ಒಣ ಭೂಮಿ ಇದೆ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ವಾರ್ಷಿಕ ಆದಾಯ 6,38,410 ಎಂದು ತಿಳಿಸಿದ್ದಾರೆ.
ಸಿಎಂ ಕುಮಾರನ ಬಳಿ 3.11 ಕೋಟಿ ಮೌಲ್ಯದ ರೇಂಜ್ ರೋವರ್, ಒಟ್ಟು ಆಸ್ತಿ?
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...