ಸಿಗದ ಟಿಕೆಟ್: ಕಚೇರಿಯ 300 ಕುರ್ಚಿಗಳನ್ನೇ ಹೊತ್ತೊಯ್ದ ಕೈ ಶಾಸಕ!
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿಗದ ಟಿಕೆಟ್| ಕಚೇರಿಯಲ್ಲಿದ್ದ 300 ಕುರ್ಚಿಗಳನ್ನೇ ಹೊತ್ತೊಯ್ದ ಶಾಸಕ| ಪ್ರಶ್ನಿಸಿದಾಗ ಸಿಕ್ತು ಈ ಉತ್ತರ!
ಮುಂಬೈ[ಮಾ.27]: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ ಎಂದು ಬೇಸತ್ತ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕ ಪ್ರಾದೇಶಿಕ ಕಚೇರಿಯಲ್ಲಿದ್ದ 300 ಕುರ್ಚಿಗಳನ್ನು ಬೆಂಬಲಿಗರ ಸಹಾಯದಿಂದ ಹೊತ್ತೊಯ್ದಿದ್ದಾರೆ. ಈ ಮೂಲಕ ಪಕ್ಷದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಮಹಾರಾಷ್ಟ್ರದಲ್ಲಿರುವ ಪ್ರಾದೇಶಿಕ ಕಚೇರಿ 'ಗಾಂಧಿ ಭವನ್'ಲ್ಲಿ ಮಂಗಳವಾರದಂದು ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷ NCP ಮುಖಂಡರ ಸಭೆ ಕರೆಯಲಾಗಿತ್ತು. ಅದರೆ ಈ ಸಭೆಯ ಮಾಹಿತಿ ಪಡೆದ ಶಾಸಕ ಅಬ್ದುಲ್ ಸತ್ತರ್ ಕಚೇರಿಯಲ್ಲಿದ್ದ 300 ಕುರ್ಚಿಗಳನ್ನು ತಮ್ಮ ಬೆಂಬಲಿಗರ ಸಹಾಯದೊಂದಿಗೆ ಹೊರಗೊಯ್ದಿದ್ದಾರೆ. ಈ ಕುರಿತಾಗಿ ಪ್ರಶ್ನಿಸಿದಾಗ ಕುರ್ಚಿಗಳನ್ನು ಸತ್ತರ್ ಇದನ್ನು ದಾನ ಮಾಡಿದ್ದರು ಎಂದು ವಾದಿಸಿದ್ದಾರೆ. ಶಾಸಕರ ಈ ನಡೆಯಿಂದಾಗಿ ಮೈತ್ರಿ ಪಕ್ಷಗಳ ಈ ಸಭೆಯನ್ನು ಬಳಿಕ NCP ಕಚೇರಿಯಲ್ಲಿ ನಡೆಸಲಾಯಿತು.
ಸತ್ತರ್ ಸಿಲೋದ್ ವಿಧಾನಸಭಾ ಕ್ಷೇತ್ರದ ಓರ್ವ ಪ್ರಭಾವಿ ಕಾಂಗ್ರೆಸ್ ನಾಯಕ. ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಔರಂಗಬಾದ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಆಕಾಂಕ್ಷೆ ಇಟ್ಟುಕೊಂಡಿದ್ದರು. ಆದರೆ ಕೈ ಪಕ್ಷವು ಸಂಸದ ಸುಭಾಶ್ ಜಂಬದ್ ರಿಗೆ ಟಿಕೆಟ್ ನೀಡಿತ್ತು. ಇದು ಅಬ್ದುಲ್ ಸತ್ತರ್ ಆಕ್ರೋಶಕ್ಕೆ ಕಾರಣವಾಗಿತ್ತು.
'ಹೌದು ಈ ಕುರ್ಚಿಗಳೆಲ್ಲ ನನ್ನದೇ. ಕಾಂಗ್ರೆಸ್ ಕಚೇರಿಯಲ್ಲಾಗುವ ಸಭೆಗೆಂದು ನಾನದನ್ನು ನೀಡಿದ್ದೆ. ಆದರೀಗ ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಹೀಗಾಗಿ ನಾನು ನೀಡಿದ ಕುರ್ಚಿಗಳನ್ನು ಕೊಂಡೊಯ್ದಿದ್ದೇನೆ. ಪಕ್ಷ ಯಾರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆಯೋ ಅವರೇ ಕುರ್ಚಿಗಳ ವ್ಯವಸ್ಥೆ ಮಾಡಲಿ'
-ಅಬ್ದುಲ್ ಸತ್ತರ್
ಪ್ರಕರಣದ ಕುರಿತಾಗಿ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದು 'ಸತ್ತರ್ ರವರಿಗೆ ಕುರ್ಚಿಗಳ ಅವಶ್ಯಕತೆ ಇತ್ತು ಅನಿಸುತ್ತದೆ. ಹೀಗಾಗಿ ಅವರು ಅವುಗಳನ್ನು ಸಾಗಿಸಿದ್ದಾರೆ. ಇದರಿಂದ ನಮಗೇನೂ ಬೇಜಾರಿಲ್ಲ. ಸತ್ತರ್ ಈಗಲೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದಾರೆ. ಅವರ ರಾಜೀನಾಮೆ ಅಂಗೀಕಾರವಾಗಿಲ್ಲ' ಎಂದಿದ್ದಾರೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...