ಮೈತ್ರಿ ಪಕ್ಷದ 4 ದಿಗ್ಗಜರಿಗೆ ಸೋಲಿನ ಭವಿಷ್ಯ : ಗರಂ ಆದ ಸಿದ್ದರಾಮಯ್ಯ
ಲೋಕಸಭಾ ಚುನಾವಣೆಯ ಬಗ್ಗೆ ನಾಲ್ವರು ದಿಗ್ಗಜರಿಗೆ ಸೋಲಾಗಲಿದೆ ಎನ್ನುವ ಭವಿಷ್ಯದ ಬಗ್ಗೆ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಬೆಂಗಳೂರು : ಲೋಕಸಭೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ನ ನಾಲ್ಕು ಮಂದಿ ದಿಗ್ಗಜರು ಸೋಲುತ್ತಾರೆಂದು ಭವಿಷ್ಯ ನುಡಿದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪಗೆ ಶಾಸ್ತ್ರ ಹೇಳೋದು ಕೂಡ ಗೊತ್ತಾ? ಹಾಗಾದರೆ ಶಾಸ್ತ್ರ ಬಳಸಿಕೊಂಡು ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಬಹುದಿತ್ತಲ್ಲಾ ಎಂದು ಕಾಲೆಳೆದಿದ್ದಾರೆ.
ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಗುರುವಾರ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಮೂರು ದಿನ ಉಳಿದುಕೊಳ್ಳಲಿಲ್ಲ. ಅಂಥವರು ಅದ್ಯಾವ ಶಾಸ್ತ್ರ ಹೇಳುತ್ತಾರೆ? ಬಹುಮತ ಇಲ್ಲದಿದ್ದರೂ ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಯತ್ನಿಸಿದ್ದರು. ಶಾಸ್ತ್ರ ಗೊತ್ತಿದ್ದಿದ್ದರೆ ಅವರು ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳಬಹುದಿತ್ತಲ್ಲವೇ ಎಂದು ಹೇಳಿದರು.
ಮೋದಿ, ರಾಹುಲ್ಗಿಂತ ದೇವೇಗೌಡರಿಗೆ ಪ್ರಧಾನಿ ಹುದ್ದೆ ಅವಕಾಶ ಹೆಚ್ಚು!
ಶುಕ್ರವಾರ ಕುಂದಗೋಳ ಕ್ಷೇತ್ರಕ್ಕೆ ಹೋಗಿ ಕಾರ್ಯಕರ್ತರ ರಾರಯಲಿಯಲ್ಲಿ ಭಾಗವಹಿಸುತ್ತೇನೆ. ಚಿಂಚೋಳಿ, ಕುಂದಗೋಳ ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದರು.
ಎರಡೂ ಕ್ಷೇತ್ರ ಗೆಲ್ಲುತ್ತೇವೆ:
ವಿಧಾನಸಭೆ ಉಪ ಚುನಾವಣೆ ನಡೆಯಲಿರುವ ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಲ್ಲಿ ಯಾವುದೇ ಅಸಮಾಧಾನ ಇಲ್ಲ. ಬಿಜೆಪಿಯವರು ಸುಳ್ಳು ಸುದ್ದಿಗಳ ಮೂಲಕ ಗೊಂದಲ ಹಬ್ಬಿಸಲು ಹೊರಟಿದ್ದಾರೆ. ವಾಸ್ತವವಾಗಿ ಎರಡೂ ಕ್ಷೇತ್ರಗಳೂ ಕಾಂಗ್ರೆಸ್ನ ಶಾಸಕರಿದ್ದ ಕ್ಷೇತ್ರಗಳಾಗಿದ್ದು, ಎರಡರಲ್ಲೂ ಕಾಂಗ್ರೆಸ್ಗೆ ಪೂರಕ ವಾತಾವರಣ ಇದೆ. ಎರಡೂ ಕ್ಷೇತ್ರಗಳನ್ನೂ ನಾವೇ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.