ಕೇಂದ್ರ ಚುನಾವಣಾಧಿಕಾರಿ ಕೈಯಲ್ಲಿ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯ
ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಿಎಂ ಕುಮಾರಸ್ವಾಮಿ ಪ್ರತಿಷ್ಠೆಯ ಕಣವಾಗಿರುವ ಮಂಡ್ಯ ಕ್ಷೇತ್ರ ರಾಜಕೀಯ ಚದುರಂಗದಾಟಕ್ಕೂ ವೇದಿಕೆಯಾಗುತ್ತಿದೆ. ಇದರ ಮಧ್ಯೆ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಅಸಿಂಧುವಾಗುತ್ತಾ ಅನ್ನೋ ಆತಂಕ ಶುರುವಾಗಿದೆ. ಅಷ್ಟಕ್ಕೂ ನಾಮಪತ್ರದಲ್ಲಾದ ಲೋಪದೋಷಗಳೇನು..?
ಮಂಡ್ಯ, (ಮಾ.28): ಸಿಎಂ ಕುಮಾರಸ್ವಾಮಿ ಪ್ರತಿಷ್ಠೆಯ ಕಣವಾಗಿರುವ ಮಂಡ್ಯ ಕ್ಷೇತ್ರ ರಾಜಕೀಯ ಚದುರಂಗದಾಟಕ್ಕೆ ವೇದಿಕೆಯಾಗುತ್ತಿದೆ. ಒಂದು ಕಡೆ ಜೆಡಿಎಸ್ ನಾಯಕರಿಗೆ ಐಟಿ ಶಾಕ್, ಮತ್ತೊಂದೆಡೆ ನಿಖಿಲ್ ಕುಮಾರಸ್ವಾಮಿ ನಾಮಿನೇಷನ್ ತಿರಸ್ಕೃತ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಅಷ್ಟಕ್ಕೂ ನಿಖಿಲ್ ನಾಮಪತ್ರದಲ್ಲಿ ಆಗಿರುವ ಲೋಪದೋಷಗಳೇನು ಎನ್ನುವ ಬಗ್ಗೆ ಕಂಪ್ಲೀಟ್ ವಿವರ ಈ ಕೆಳಗಿನಂತಿದೆ.
2018ರಲ್ಲಿ ಸುಪ್ರೀಂಕೋರ್ಟ್ ಹೊಸ ನಾಮಪತ್ರ ಮಾದರಿಯನ್ನು ಆದೇಶ ಮಾಡಿದೆ. ಈ ಹೊಸ ನಾಮಪತ್ರದಲ್ಲಿ ಅವಿಭಕ್ತ ಕುಟುಂಬ ಹಾಗೂ ವಿಭಕ್ತ ಕುಟುಂಬಗಳೆಂಬ ಎರಡು ಕಾಲಂಗಳನ್ನು ಸೇರಿಸಲಾಗಿದೆ. ಆದ್ರೆ ನಿಖಿಲ್ ಸಲ್ಲಿಸಿರುವ ಹಳೇ ಮಾದರಿಯಲ್ಲೇ ನಾಮಪತ್ರ ಸಲ್ಲಿಸಿದ್ದಾರೆ
ನಿಖಿಲ್ ಕುಮಾರಸ್ವಾಮಿ ನಾಮಪತ್ರ ಅಸಿಂಧುವಾಗುತ್ತಾ?
ಹೊಸ ಮಾದರಿಯಲ್ಲಿ 8 ಕಾಲಂ ಭರ್ತಿ ಮಾಡಬೇಕಿದ್ದ ಅಫಿಡವಿಟ್ ಅನ್ನ ಹಳೇ ಮಾದರಿಯಂತೆ 6 ಕಾಲಂ ಭರ್ತಿ ಮಾಡಿ ಸಲ್ಲಿಸಲಾಗಿದೆ. ನಾಮಪತ್ರ ಪರಿಶೀಲನೆ ವೇಳೆಯಲ್ಲಿ ಎಂದು ಸುಮಾಲತಾ ಅಂಬರೀಶ್ ಕಡೆಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಚುನಾವಣಾಧಿಕಾರಿ (ಮಂಡ್ಯ ಡಿಸಿ) ಮಂಜುಶ್ರೀ ಅವರು ನಿಖಿಲ್ ನಾಮಪತ್ರದ ಜೊತೆಗಿದ್ದ ಪ್ರಮಾಣ ಪತ್ರವನ್ನು ತೋರಿಸಲಿಲ್ಲ.
ಈ ಬಗ್ಗೆ ಬರಹ ರೂಪದಲ್ಲಿ ದೂರು ಕೊಡಿ ಎಂದು ಚುನಾವಣಾಧಿಕಾರಿ (ಮಂಡ್ಯ ಡಿಸಿ) ಮಂಜುಶ್ರೀ ಅವರು ಸುಮಲತಾ ಅವರ ಕಡೆಯವರಿಗೆ ಹೇಳಿದ್ದಾರೆ.ಆಗ ಸುಮಲತಾ ಕಡೆಯವರು ಬರಹ ರೂಪದಲ್ಲಿ ತರಲು ಹೋದ್ರೆ ಇತ್ತ ಚುನಾವಣಾಧಿಕಾರಿಗಳು ನಿಖಿಲ್ ಸಲ್ಲಿಸಿರುವುದು ಹೊಸ ನಾಮಪತ್ರ ಎಂದು ಸ್ವೀಕೃತ ಮಾಡಿದ್ದಾರೆ.
ಬಳಿಕ ಈ ಬಗ್ಗೆ ಸುಮಲತಾ ಕಡೆಯವರು ರಾಜ್ಯ ಹಾಗೂ ಕೇಂದ್ರ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಚುನಾವಣೆ ವೀಕ್ಷಕರು ಮಂಡ್ಯಕ್ಕೆ ಭೇಟಿ ನೀಡುವಷ್ಟರಲ್ಲಿಯೇ ಎಚ್ಚೆತ್ತ ಮಂಜುಶ್ರೀ, ಕೂಡಲೇ ಸಿಎಂ ಕುಮಾರಸ್ವಾಮಿ ಆಪ್ತರಿಗೆ ಕಾಲ್ ಮಾಡಿ ಹೊಸ ಮಾದರಿಯ ನಾಮೀನೇಷನ್ ತರಿಸಿಕೊಂಡು ಸೇರಿಸಿದ್ದಾರೆ.
ಅದು ಇದೀಗ ಮಂಜ್ರುಶ್ರೀಗೆ ಕಂಟಕವಾಗಿದ್ದು, ನಾಮಪತ್ರ ಸಲ್ಲಿಸುತ್ತಿರುವಾಗ ಮಾಡಿದ ವಿಡಿಯೋ ಚಿತ್ರೀಕರಣ ನೀಡಿ ಎಂದು ಕೇಳಿದ್ದಾರೆ. ಇದಕ್ಕೆ ಮಂಜುಶ್ರೀ 3 ತಾಸು ಸಮಯ ಕೇಳಿದ್ದು, ಬಳಿಕ ಇದರ ಸ್ಪಷ್ಟ ಚಿತ್ರಣ ತಿಳಿಯಲಿದೆ.
ಈ ಪ್ರಕರಣದಲ್ಲಿ ಚುನಾವಣಾಧಿಕಾರಿ ಮಂಜುಶ್ರೀ ಶಾಮೀಲಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಒಂದು ವೇಳೆ ನಿಖಿಲ್ ನಾಮಪತ್ರದಲ್ಲಿ ಅಸ್ಪಷ್ಟತೆ ಇರುವುದು ಕಂಡುಬಂದರೆ ಚುನಾವಣಾಧಿಕಾರಿಗಳನ್ನು ಕೆಲಸದಿಂದ ಅಮಾನತು ಮಾಡುವ ಸಾಧ್ಯತೆಗಳಿವೆ.
ಅಷ್ಟೇ ಅಲ್ಲದೇ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರವೂ ಸಹ ತಿರಸ್ಕೃತವಾಗುವ ಸಾಧ್ಯತೆಗಳಿವೆ.
ಒಟ್ಟಿನಲ್ಲಿ ಈ ನಿಖಿಲ್ ಕುಮಾರಸ್ವಾಮಿಯ ರಾಜಕೀಯ ಭವಿಷ್ಯ ಕೇಂದ್ರ ಚುನಾವಣಾಧಿಕಾರಿ ಕೈಯಲ್ಲಿದ್ದು, ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ. ಇದ್ರಿಂದ ಎಲ್ಲರ ಚಿತ್ತ ಕೇಂದ್ರ ಚುನಾವಣಾಧಿಕಾರಿಯತ್ತ ನೆಟ್ಟಿದೆ.