ಸಿಎಂ ಕಾರನ್ನೇ ತಪಾಸಣೆಗೊಳಪಡಿಸಿದ ಪೊಲೀಸರು!
ಲೋಕ ಸಮರಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆ, ಕಾಂಚಾಣದ ಸದ್ದು ಎಲ್ಲೆಡೆಯಿಂದ ಕೇಳಿ ಬರುವುದೂ ಸಹಜ. ಇದೇ ಹಿನ್ನೆಲೆಯಲ್ಲಿ ಎಲ್ಲೆಡೆ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಿದ್ದು, ಓಡಾಡುವ ಪ್ರತೀ ವಾಹನಗಳ ಮೇಲೂ ನಿಗಾ ಇಡಲಾಗಿದೆ. ಈ ಬೆನ್ನಲ್ಲೇ ಮುಖ್ಯಮಂತ್ರಿಯವರ ವಾಹನವನ್ನೂ ಪೊಲೀಸರು ತಪಾಸಣೆ ನಡೆಸಿದ್ದಾರೆ. ಏನಾದರೂ ಸಿಕ್ತಾ?
ಹಾಸನ: ಚುನಾವಣೆ ಸಮಯದಲ್ಲಿ ಅಕ್ರಮ ನಗದು ಹಾಗೂ ಇತರೆ ವಸ್ತುಗಳ ಸಾಗಣೆ ಆರೋಪಗಳು ಕೇಳಿ ಬರುತ್ತಲೇ ಇವೆ. ಅದರಲ್ಲಿಯೂ ಗುಜರಾತ್ ಹಾಗೂ ತಮಿಳುನಾಡಿನಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಅಪಾರ ಮೊತ್ತದ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕರ್ನಾಟಕದಲ್ಲಿಯೂ ಅಲ್ಲಲ್ಲಿ ಇಂಥ ಪ್ರಕರಣಗಳು ವರದಿಯಾಗುತ್ತಿದ್ದು, ಎಲ್ಲೆಡೆ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ ಪೊಲೀಸರು ಅನುಮಾನವಿರುವ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ.
"
ಇದೇ ಹಿನ್ನೆಲೆಯಲ್ಲಿ ಚೆನ್ನರಾಯಪಟ್ಟಣಕ್ಕೆ ತೆರಳುತ್ತಿದ್ದ ಸಿಎಂ ಕುಮಾರಸ್ವಾಮಿ ಅವರ ಕಾರನ್ನೂ ಪೊಲೀಸರು ಹಿರಿಸಾವೆ ಚೆಕ್ ಪೋಸ್ಟ್ ಬಳಿ ತಪಾಸಣೆಗೆ ಒಳಪಡಿಸಿದರು. ತಪಾಸಣೆಗೆ ಯಾವುದೇ ತಡೆ ತೋರದ ಸಿಎಂ, ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟರು.
ಹಾಸನದ ಗಡಿ ಭಾಗ ಹಿರೀಸಾವೆ ಚೆಕ್ ಪೋಸ್ಟ್ ಬಳಿ ಪ್ರತಿ ವಾಹನವನ್ನೂ ತಪಾಸಣೆ ನಡೆಸಬೇಕೆಂಬ ಆದೇಶದ ಮೇಲೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಅವರ ಮನೆಗೆ ಸಿಎಂ ತೆರಳಿದ್ದರು. ಅಲ್ಲಿ ಉಪಹಾರ ಸೇವಿಸಿ, ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಇಂದು ಹಿರಿಯ ಜೆಡಿಎಸ್ ನಾಯಕರ ಉಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಲೋಕಸಭಾ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ