ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಅಭ್ಯರ್ಥಿಗಳು ಗೆಲುವಿಗಾಗಿ ವಿವಿಧ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಇದೀಗ ಬಿಜೆಪಿ ನಾಯಕರೋರ್ವರು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

ಮಂಗಳೂರು : ಬಿಜೆಪಿ ಮುಖಂಡ ನಳೀನ್ ಕುಮಾರ್ ಕಟೀಲು ಕಾಂಗ್ರೆಸ್ ‌ಮುಖಂಡ ಜನಾರ್ದನ ಪೂಜಾರಿ ಭೇಟಿಯಾಗಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. 

Add Asianetnews Kannada as a Preferred SourcegooglePreferred

ಪೂಜಾರಿ ಭೇಟಿಯಾದ ಬಳಿಕ ಮಾತನಾಡಿದ ನಳೀನ್ ಕುಮಾರ್ ಜನಾರ್ದನ ಪೂಜಾರಿ ನಮ್ಮಂಥವರಿಗೆ ಆದರ್ಶ ವ್ಯಕ್ತಿ. ಭ್ರಷ್ಟಾಚಾರ ರಹಿತವಾದ ನೇರ ನಡೆ ನುಡಿಯ ರಾಜಕಾರಣಿ. ಜನಾರ್ದನ ಪೂಜಾರಿಯನ್ನು ನಾನು ಬಹಳ ಗೌರವದಿಂದ ಕಂಡವನು ಎಂದು ಹೇಳಿದರು. 

ಇನ್ನು 2009ರ ಚುನಾವಣೆ ವೇಳೆ ಅವರ ವಿರುದ್ಧ ಸ್ಪರ್ಧಿಸಿದ್ದರೂ ಕೂಡ ಅವರ ಆಶೀರ್ವಾದ ಪಡೆದುಕೊಂಡಿದ್ದೆ. ಅಂದು ಕೂಡ ಅವರು ಅಭ್ಯರ್ಥಿಯಾಗಿದ್ದರೂ ನನಗೆ ಒಳ್ಳೆಯದಾಗಲು ಎಂದು ಆಶೀರ್ವಾದ ಮಾಡಿದ್ದರು. ಇಂದೂ ಒಳ್ಳೆಯದಾಗಲಿ ಎಂದು ಸಂಪೂರ್ಣ ಮನಸ್ಸಿನಿಂದ ಆಶೀರ್ವಾದ ಮಾಡಿದ್ದಾರೆ ಎಂದರು. 

ಎರಡು ಬಾರಿ ಅವರ ಆಶೀರ್ವಾದದಿಂದ ಗೆದ್ದಿದ್ದೇನೆ, ಮೂರನೇ ಬಾರಿಯೂ ಕೂಡ ಅವರ ಆಶೀರ್ವಾದದಿಂದ ಗೆಲ್ಲುತ್ತೇನೆ ಎನ್ನುವ ಭರವಸೆ ಇದೆ. ಆದರ್ಶಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಲು ಮಾರ್ಗದರ್ಶನ ಮಾಡಿದ್ದಾರೆ. ಹೀಗಾಗಿ ಅವರು ನನಗೆ ರಾಜಕೀಯ ಗುರುಗಳು ಎಂದು ಹೇಳಿದರು. 

ಒಂದು ಕಡೆಯಿಂದ ದೇವರ ಆಶೀರ್ವಾದ, ಇನ್ನೊಂದು ಕಡೆ ನಾರಾಯಣ ಗುರು ಮತ್ತು ಜನಾರ್ದನ ಪೂಜಾರಿ ಆಶೀರ್ವಾದ. ಇದನ್ನ ಪಡೆದು ಇಂದಿನಿಂದಲೇ ನಾನು ಕಣಕ್ಕೆ ಇಳಿಯುತ್ತಿದ್ದೇನೆ. 2009ರಲ್ಲಿ ನನ್ನ ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ಸಂಪ್ರದಾಯದಂತೆ ಕುದ್ರೋಳಿ ಕ್ಷೇತ್ರದ ದೇವರ ದರ್ಶನ ಪಡೆಯುತ್ತಿದ್ದೇನೆ. ನಾಮಪತ್ರ ಸಲ್ಲಿಕೆಗೂ ಮೊದಲು ಇಲ್ಲಿಗೆ ಬಂದಿದ್ದೇನೆ ಎಂದು ನಳೀನ್ ಕುಮಾರ್ ಹೇಳಿದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ