ಬದಲಾಯ್ತು ಲೋಕಸಭಾ ಚುನಾವಣಾ ಲೆಕ್ಕಾಚಾರ| ಗೆಲುವಿಗಾಗಿ 29 ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡ ಬಿಜೆಪಿ| ಗೆದ್ದ ಸೀಟುಗಳನ್ನೂ ಬಿಟ್ಟುಕೊಡಬೇಕಾದ ಅನಿವಾರ್ಯತೆ!

ನವದೆಹಲಿ[ಮಾ.19]: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಹೀಗಿರುವಾಗ ಬಿಜೆಪಿ ತನ್ನ ಲೆಕ್ಕಾಚಾರ ಬದಲಾಯಿಸಿದ್ದು ಗೆಲುವಿಗಾಗಿ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದು, ಸೀಟು ಹಂಚಿಕೆ ವಿಚಾರದಲ್ಲೂ ಮೃಧು ಧೋರಣೆ ತಳೆದಿದೆ. 2014ರಲ್ಲಿ ಬಿಜೆಪಿಯು 16 ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸಿತ್ತು. ಆದರೆ ಈ ಬಾರಿ ಈ ಸಂಕ್ಯೆ 29ಕ್ಕೇರಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2014ರ ಚುನಾವಣೆಯಲ್ಲಿ ಬಿಹಾರದ 40ರಲ್ಲಿ 22 ಕ್ಷೇತ್ರಗಳಲ್ಲಿ ಗೆದ್ದಿದ್ದರೂ ಈ ಬಾರಿ ಕೇವಲ 17 ಕ್ಷೇತ್ರಗಳಲ್ಲಿ ಚುನಾವಣೆ ಎದುರಿಸಲು ಒಪ್ಪಿಕೊಂಡಿದೆ. ಇಷ್ಟೇ ಅಲ್ಲದೇ ಬಿಜೆಪಿಯು ಮೆತ್ರಿ ಪಕ್ಷಗಳಿಗಾಗಿ ಈ ಹಿಂದೆ ತಾನು ಗೆದ್ದಿದ್ದ ಕ್ಷೇತ್ರಗಳನ್ನೂ ಬಿಟ್ಟುಕೊಡಲು ಸಜ್ಜಾಗಿದೆ. ಇನ್ನೂ ಅಚ್ಚರಿಯ ವಿಚಾರವೆಂದರೆ ತಾನು ಸೋಲುಂಡ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ. ಉದಾಹರಣೆಗೆ ಬಿಹಾರದ ನವಾದಾ ಕ್ಷೇತ್ರ ಈ ಬಾರಿ LJP ತೆಕ್ಕೆಗೆ ಸೇರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಇತ್ತ ಜೆಡಿಯು ಕೂಡಾ ಬಿಜೆಪಿ ಗೆದ್ದಿರುವ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಒತ್ತಡ ಹೇರಿದೆ.

ಝಾರ್ಕಂಡ್ ನಲ್ಲಿ ಬಿಜೆಪಿಯು ಮಿತ್ರ ಪಕ್ಷಗಳಿಗಾಗಿ ಬಹುದೊಡ್ಡ ತ್ಯಾಗ ಮಾಡಿದೆ. ಇಲ್ಲಿನ ಗಿರ್ಡೀಹ್ ಕ್ಷೇತ್ರದಲ್ಲಿ ಬಿಜೆಪಿಯು 5 ಬಾರಿ ಜಯ ಸಾಧಿಸಿದೆ. ಆದರೆ ಈ ಬಾರಿ ಈ ಕ್ಷೇತ್ರವನ್ನು ತನ್ನ ಮಿತ್ರ ಪಕ್ಷ AJSU ಗೆ ಬಿಟ್ಟುಕೊಟ್ಟಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದರೆ ಶಿವಸೇನೆ ಮಾತ್ರ ಕಾಲ ಕಾಲಕ್ಕೆ ಪ್ರಧಾನಿ ಮೋದಿಯನ್ನು ಟೀಕಿಸುತ್ತಾ, ವಾಗ್ದಾಳಿ ನಡೆಸುತ್ತಾ ಬಂದಿದೆ. ಶಿವಸೇನೆಯ ಸಂಸದ ಸಂಜಯ್ ರಾವತ್ ಪ್ರಧಾನಿ ಮೋದಿಯನ್ನು 'ಚೋರ್' ಎಂದೂ ಹಣಿದಿದ್ದಾರೆ. ಅಲ್ಲದೇ ನೋಟ್ ಬ್ಯಾನ್, ಅರ್ಥ ವ್ಯವಸ್ಥೆಯಲ್ಲಿ ತಂದ ಬದಲಾವಣೆ, ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯನ್ನು ಟೀಕಿಸಿದೆ. 

ಉತ್ತರ ಪ್ರದೇಶವನ್ನು ಗಮನಿಸಿದರೆ ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿ ಮಿತ್ರ ಪಕ್ಷಗಳ ಓಲೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದೆಲ್ಲೆಡೆ ಸುಹೇಲ್ ದೇವ್ ರವರ ಪಕ್ಷ ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ 6 ನಾಯಕರು ಸೇರಿದಂತೆ ಒಟ್ಟು 13 ಮಂದಿಗೆ ವಿವಿಧ ನಿಗಮ ಮಂಡಳಿಯ ಜವಾಬ್ದಾರಿ ನೀಡಿದ್ದಾರೆ.

ಮತ್ತೊಂದೆಡೆ ಉಳಿದೆಲ್ಲಾ ಪಕ್ಷಗಳು ಒಂದಾಗಿ ಬಿಜೆಪಿಯೊಂದಿಗೆ ಚುನಾವಣಾ ಅಖಾಡಕ್ಕಿಳಿದಿವೆ. ವಿಪಕ್ಷ ನಾಯಕರ ಒಗ್ಗಟ್ಟು ಹಲವಾರು ವೇದಿಕೆಗಳಲ್ಲಿ ಕಂಡು ಬಂದಿದೆ. ವಿಪಕ್ಷಗಳು ಮಹಾ ಮೈತ್ರಿ ಮಾಡಿಕೊಂಡು ಲೋಕಸಭೆಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯಲು ಸಜ್ಜಾಗಿವೆ. 

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ