2019ರ ಲೋಕಸಭೆ ಚುನಾವಣೆಗೆ ಅಧಿಕೃತ ಆರಂಭ| ದೇಶದ ವಿವಿಧ ರಾಜ್ಯಗಳಲ್ಲಿ ಮೊದಲ ಹಂತದ ಮತದಾನ ಆರಂಭ| ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಒಟ್ಟಿಗೆ ಚುನಾವಣೆ| ಇವಿಎಂ ಯಂತ್ರ ಒಡೆದು ಹಾಕಿದ ಜನಸೇನಾ ಪಕ್ಷದ ಅಭ್ಯರ್ಥಿ| ಅಭ್ಯರ್ಥಿ ಪಟ್ಟಿ ಪ್ರಶ್ನಿಸಿ ವಾಗ್ವಾದಕ್ಕಿಳಿದ ಮಧುಸೂಧನ್ ಗುಪ್ತಾ| ಆವೇಶದಲ್ಲಿ ಮತಯಮತ್ರ ಒಡೆದು ಜೈಲು ಸೇರಿದ ಗುಪ್ತಾ|
ಬೆಂಗಳೂರು(ಏ.11): ಭಾರತದ ರಾಷ್ಟ್ರೀಯ ಹಬ್ಬ ಎಂದೇ ಪರಿಗಣಿಸಲಾಗುವ ಲೋಕಸಭೆ ಚುನಾವಣೆಗೆ ದೇಶ ಮುನ್ನುಡಿ ಬರೆದಿದೆ. ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಮೊದಲ ಹಂತದ ಮತದಾನ ಪ್ರಾರಂಭವಾಗಿದ್ದು, 2019ರ ಲೋಕಸಭೆ ಚುನಾವಣೆಗೆ ಅಧಿಕೃತ ಪ್ರಾರಂಭ ಸಿಕ್ಕಂತಾಗಿದೆ.
ಈ ಮಧ್ಯೆ ಆಂಧ್ರದಲ್ಲಿ ಜನಸೇನಾ ಪಕ್ಷದ ಅಭ್ಯರ್ಥಿ ಮಧುಸೂಧನ್ ಗುಪ್ತಾ ಮತಗಟ್ಟೆಯಲ್ಲಿ ಇಟ್ಟಿದ್ದ ಇವಿಎಂ ಮತಯಂತ್ರವನ್ನು ಒಡೆದು ಹಾಕಿದ್ದಾರೆ. ಗುಂತಕಲ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಗುಪ್ತಾ, ಮತದಾನಕ್ಕೆಂದು ಮತಗಟ್ಟೆಗೆ ಬಂದಾಗ ಮತಯಂತ್ರವನ್ನು ನೆಲಕ್ಕೆ ಬಿಸಾಕಿ ಒಡೆದು ಹಾಕಿದ್ದಾರೆ.
ವಿಧಾನಸಭೆ ಮತ್ತು ಲೋಕಸಭೆ ಅಭ್ಯರ್ಥಿಗಳ ಪಟ್ಟಿ ಸರಿಯಿಲ್ಲ ಎಂದು ಆಕ್ಷೇಪಿಸಿ ಗುಪ್ತಾ ಚುನಾವಣಾಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಗುಪ್ತಾ ಆರೋಪವನ್ನು ನಿರಾಕರಿಸಿದ ಅಧಿಕಾರಿಗಳು, ಮತ ಹಾಕಿ ತೆರಳುವಂತೆ ಸೂಚಿಸಿದ್ದಾರೆ.
ಇದರಿಂದ ಕೆರಳಿದ ಮಧುಸೂಧನ್ ಗುಪ್ತಾ, ಇವಿಎಂ ಮಶಿನ್ ನ್ನು ನೆಲಕ್ಕೆ ಬಿಸಾಕಿ ಒಡೆದು ಹಾಕಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಗುಪ್ತಾ ಅವರನ್ನು ಬಂಧಿಸಿದ್ದು, ಗುಪ್ತಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
"
ಆಂಧ್ರದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿದ್ದು, ಪಕ್ಕದ ತೆಲಂಗಾಣದಲ್ಲಿ ಒಂದೇ ಹಂತದಲ್ಲಿ ಲೋಕಸಭೆಗೆ ಚುನಾವಣೆ ನಡೆಯುತ್ತಿದೆ.
ಆಂಧ್ರದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಅನೇಕ ಗಣ್ಯರು ಮತದಾನ ಮಾಡಿದರು.
ತೆಲಂಗಾಣದಲ್ಲಿ ಸಿಎಂ ಕೆಸಿಆರ್, ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಸೇರಿದಂತೆ ಹಲವು ಗಣ್ಯರು ಮತದನ ಮಾಡಿದರು.
