ಮತ್ತೆ ಮಂಡ್ಯ ಅಖಾಡಕ್ಕಿಳಿಯಲು ಸಜ್ಜಾದ 'ಜೋಡೆತ್ತು'...!
ತೀವ್ರ ಕುತೂಹಲ ಮೂಡಿಸಿರುವ ಸಕ್ಕರೆ ನಾಡು ಮಂಡ್ಯ ಅಖಾಡಕ್ಕೆ ಏಪ್ರಿಲ್ 2 ರಿಂದ ಜೋಡೆತ್ತುಗಳು ಎಂಟ್ರಿಕೊಡಲಿದ್ದು, ಸ್ಟಾರ್ ಕದನವಾಗಿರುವ ಮಂಡ್ಯ ಲೋಕಸಭಾ ಚುನಾವಣೆಗೆ ಮತ್ತಷ್ಟು ರಂಗು ಬರಲಿದೆ.
ಮಂಡ್ಯ, [ಮಾ.29]: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಬ್ಬರಿಸಲು ಜೋಡೆತ್ತು [ದರ್ಶನ್, ಯಶ್] ಅಖಾಡಕ್ಕಿಳಿಯಲು ಸಜ್ಜಾಗಿದ್ದು, ಇದೇ ಏಪ್ರಿಲ್ 2ರಿಂದ 16ರವರೆಗೆ ಸುಮಲತಾ ಪರ ಪ್ರಚಾರ ಮಾಡಲಿವೆ.
ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 2 ರಿಂದ ನಟ ದರ್ಶನ್ ಹಾಗು ನಟ ಯಶ್ ಅವರು ಸುಮಲತಾ ಅವರ ಪರ ನಿರಂತರ ಪ್ರಚಾರ ನಡೆಸಲಿದ್ದಾರೆ. ಈ ಮೂಲಕ ಸ್ಟಾರ್ ಕದನವಾಗಿರುವ ಮಂಡ್ಯ ಲೋಕಸಭಾ ಚುನಾವಣೆಗೆ ಮತ್ತಷ್ಟು ರಂಗು ಬರಲಿದೆ.
ಚಿಹ್ನೆ ಬದಾಲಾವಣೆ: ಸುಮಲತಾ ಬಯಸಿದ್ದು ಅದೇ, ಚುನಾವಣೆ ಆಯೋಗ ಕೊಟ್ಟಿದ್ದು ಅದನ್ನೇ..!
ದರ್ಶನ್ ಮತ್ತು ಯಶ್ ಇಬ್ಬರೂ ಕೂಡ ಏಕಕಾಲದಲ್ಲಿ ಬೇರೆ ಬೇರೆ ತಾಲೂಕುಗಳಲ್ಲಿ ಪ್ರಚಾರ ನಡೆಸಲಿದ್ದು, ದರ್ಶನ್ 12 ದಿನ ಪ್ರಚಾರ ಮಾಡಿದರೆ, ಯಶ್ ಕೂಡ 13 ದಿನ ಪ್ರಚಾರ ನಡೆಸಲಿದ್ದಾರೆ.
ಅಂತಿಮವಾಗಿ ಏಪ್ರಿಲ್ 16 ರಂದು ನಡೆಯುವ ಸಮಾವೇಶದಲ್ಲಿ ಈ ಎರಡು ಜೋಡೆತ್ತುಗಳು ಒಟ್ಟಿಗೆ ಪಾಲ್ಗೊಳ್ಳಲಿವೆ. ಸುಮಲತಾ ಅವರು ಮಾರ್ಚ್ 20ರಂದು ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ದರ್ಶನ್ ಹಾಗೂ ಯಶ್ ಪಾಲ್ಗೊಂಡಿದ್ದರು.
ಬಳಿಕ ಶೂಟಿಂಗ್ ನಲ್ಲಿ ಪಾಲ್ಗೊಮಂಡಿದ್ದರಿಂದ ಈವರೆಗೂ ಯಶ್ ಮತ್ತು ದರ್ಶನ್ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಇದನ್ನು ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಎಲ್ಲಿ ಜೋಡೆತ್ತು ಎಂದು ಸಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದರು.
ಅಷ್ಟೇ ಅಲ್ಲದೇ ಸ್ವತಃ ಸಿಎಂ ಕುಮಾರಸ್ವಾಮಿ ಸಹ ದರ್ಶನ್ ಹಾಗೂ ಯಶ್ ಅವರನ್ನು ಕಳ್ಳೆತ್ತುಗಳೆಂದು ಕಾಲೆಳೆದಿದ್ದರು. ಇದು ದರ್ಶನ್ ಹಾಗೂ ಯಶ್ ಅಬಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.