ನಾನೇಕೆ ನೆಗೆದು ಬೀಳಬೇಕು? ಸಾಲ ಮನ್ನಾ ಮಾಡಿದ್ದಕ್ಕಾ?: ಸಿಎಂ ಕುಮಾರಸ್ವಾಮಿ
ಚುನಾವಣೆ ಮುಗಿದ ಕೂಡಲೇ ಸರ್ಕಾರ ಬೀಳುತ್ತೆ ಅನ್ನೋ ಭರದಲ್ಲಿ ಕುಮಾರಸ್ವಾಮಿಯೇ ನೆಗೆದು ಬೀಳ್ತಾರೆ ಎಂದಿದ್ದ ಈಶ್ವರಪ್ಪ| ವಿವಾದಾತ್ಮಕ ಹೇಳಿಕೆ ನೀಡಿದ ಈಶ್ವರಪ್ಪಗೆ ಸಿಎಂ ಮರುಪ್ರಶ್ನೆ!
ಶಿವಮೊಗ್ಗ[ಏ.04]: ಲೋಕಸಭಾ ಚುನಾವಣೆ ಬಳಿಕ ನಾನು ನೆಗೆದು ಬಿದ್ದು ಹೋಗುತ್ತೇನೆಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡುತ್ತಾರೆ. ಯಾವ ಕಾರಣಕ್ಕೆ ನಾನು ನೆಗೆದು ಹೋಗಬೇಕು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆಗ್ರಹಿಸಿದರು.
ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆಯ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ರೈತರ ಸಾಲಮನ್ನಾ ಮಾಡಿದ್ದಕ್ಕೆ ನೆಗೆದುಬಿದ್ದು ಹೋಗಬೇಕಾ? ರಾಜ್ಯವನ್ನು ಅಭಿವೃದ್ಧಿ ಮಾಡಿದ್ದಕ್ಕೆ ನೆಗೆದುಬಿದ್ದು ಹೋಗಬೇಕಾ? ಜನತೆಯೇ ಸರಿಯಾದ ತೀರ್ಮಾನ ಕೈಗೊಳ್ಳಬೇಕು ಎಂದರು.
'ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ನೆಗೆದು ಬೀಳ್ತಾರೆ'
ಇನ್ನು ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆಗೆ ಮುನ್ನ ಈಶ್ವರಪ್ಪ ಹೇಳಿಕೆ ಕುರಿತು ಗರಂ ಆಗಿದ್ದ ಕುಮಾರಸ್ವಾಮಿ, ನಾಮಪತ್ರ ಸಲ್ಲಿಕೆಯ ಬಳಿಕ ತಮ್ಮ ಧಾಟಿ ಬದಲಾಯಿಸಿಕೊಂಡರು.
‘ಚುನಾವಣೆ ಬಳಿಕ ನಾನು ನೆಗೆದು ಬೀಳುತ್ತೇನೆಂದು ಈಶ್ವರಪ್ಪನವರು ಗ್ರಾಮೀಣ ಭಾಷೆಯಲ್ಲಿ ಹೇಳಿರಬಹುದು. ನೆಗೆದು ಬೀಳುತ್ತೇನೆ ಎಂದರೆ ಹಾರಿ ಬೀಳುತ್ತೇನೆ ಎಂಬರ್ಥವಿರಬಹುದು. ಬಹುಶಃ ಸರ್ಕಾರ ಬಿದ್ದು ಹೋಗುತ್ತದೆ ಎನ್ನುವುದಕ್ಕೆ ಈ ರೀತಿಯಲ್ಲಿ ಹೇಳಿರಬಹುದು. ಪಾಪ ಈಶ್ವರಪ್ಪ ಹಳ್ಳಿಯವರು, ಹಳ್ಳಿ ಭಾಷೆಯಲ್ಲಿ ಮಾತನಾಡಿದ್ದಾರೆ’ ಎಂದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...