ರಾಜ್ಯದ 7 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜನ್ನು ಉನ್ನತೀಕರಿಸಿ ತಾಂತ್ರಿಕ ಶ್ರೇಷ್ಠತೆಯ ಕಾಲೇಜುಗಳನ್ನು ಕೆಐಟಿಗಳನ್ನಾಗಿ ಮಾರ್ಪಡಿಸಿದ ರಾಜ್ಯ ಸರ್ಕಾರ

ಅಮರೇಶ್ವರಸ್ವಾಮಿ ಕಂದಗಲ್ಲಮಠ

Add Asianetnews Kannada as a Preferred SourcegooglePreferred

ಕುಕನೂರು(ಜು.20): ತಾಲೂಕಿನ ತಳಕಲ್‌ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜನ್ನು ರಾಜ್ಯ ಸರ್ಕಾರವು ಕರ್ನಾಟಕ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಕೆಐಟಿ)ಯನ್ನಾಗಿ ಉನ್ನತೀಕರಿಸಿದೆ. ಎಂಜಿನಿಯರ್‌ ಕಾಲೇಜು ನಿರ್ಮಾಣಗೊಂಡು ಕೆಲವೇ ವರ್ಷದಲ್ಲಿ ಕಾಲೇಜಿನ ಸುಂದರ ಕಟ್ಟಡ, ವಿಶಾಲವಾದ ಮೈದಾನ, ನಾನಾ ಮೂಲ ಸೌಕರ್ಯವನ್ನು ಆಧರಿಸಿ ರಾಜ್ಯ ಸರ್ಕಾರ ರಾಜ್ಯದ 7 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜನ್ನು ಉನ್ನತೀಕರಿಸಿ ತಾಂತ್ರಿಕ ಶ್ರೇಷ್ಠತೆಯ ಕಾಲೇಜುಗಳನ್ನು ಕರ್ನಾಟಕ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ(ಕೆಐಟಿ)ಗಳನ್ನಾಗಿ ಮಾರ್ಪಡಿಸಿದ್ದು, ಅವುಗಳಲ್ಲಿ ಇದೂ ಒಂದು.

2016- 17ನೇ ಸಾಲಿನಲ್ಲಿ ಅಂದಾಜು .150 ಕೋಟಿ ಅನುದಾನದಲ್ಲಿ ಈ ಕಾಲೇಜು ಕಟ್ಟಡಕ್ಕೆ ಅಂದು ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ ಅವರು ಸಿಎಂ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆ ಮಾಡಿಸಿದ್ದರು. ಇಂದು ತಳಕಲ್‌ ಮತ್ತು ಭಾನಾಪುರ ಮಧ್ಯದ ಸುಮಾರು 70 ಎಕರೆ ಜಮೀನಿನಲ್ಲಿ ವಿಶಾಲವಾದ ಕಟ್ಟಡ ತಲೆಯೆತ್ತಿ ನಿಂತಿದೆ.

ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್, ಇನ್ಮುಂದೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್

ಮಾದರಿ ಕಾಲೇಜು:

ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್‌, ಕಾಲೇಜಿನಲ್ಲಿ ಕ್ಯಾಂಟೀನ್‌ ಸೌಲಭ್ಯವಿದೆ. ಸಿವಿಲ್‌, ಮೆಕ್ಯಾನಿಕಲ್‌, ಎಲೆಕ್ಟ್ರಾನಿಕ್‌, ಎಲೆಕ್ಟ್ರಿಸಿಯನ್‌ ಮತ್ತು ಕಂಪ್ಯೂಟರ್‌ ಸೈನ್ಸ್‌ ವಿಭಾಗಗಳು ಇವೆ. ನಾನಾ ವಿಭಾಗದಲ್ಲಿ ಒಟ್ಟು 630 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಕೆಐಟಿಯಡಿ ಕಾಲೇಜಿನ ಮೂಲ ಸೌಕರ್ಯಕ್ಕೆ ತಾಲೂಕಿನ ಶಾಸಕರು ಮತ್ತು ಗಣಿ ಭೂ ವಿಜ್ಞಾನ ಇಲಾಖೆಯ ಸಚಿವ ಹಾಲಪ್ಪ ಆಚಾರ್‌ ಅವರು ರಾಜ್ಯ ಸರ್ಕಾರದಿಂದ .6 ಕೋಟಿ ಮಂಜೂರು ಮಾಡಿಸಿದ್ದಾರೆ. ಈ ಕಾಲೇಜು ಕಲ್ಯಾಣ ಕರ್ನಾಟಕದಲ್ಲಿ ಅತ್ಯುತ್ತಮ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಆಗಿದ್ದು, ಸದ್ಯ ಕೆಐಟಿಗೆ ಸೇರ್ಪಡೆಯಾಗಿದೆ.

ಕೆಐಟಿ ಉನ್ನತೀಕರಣದಿಂದ ಏನು ಲಾಭ?

ಕೆಐಟಿ ಉನ್ನತೀಕರಣದಿಂದ .6 ಕೋಟಿ ವೆಚ್ಚದಲ್ಲಿ ವಿವಿಧ ಸೌಲಭ್ಯ, ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಮುಖ್ಯವಾಗಿ ಕಾಲೇಜಿನ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ. ಬೋಧನೆಯಲ್ಲಿ ಉತ್ಕೃಷ್ಟತೆ ಸಾಧಿಸಲು ಶೈಕ್ಷಣಿಕ ಮತ್ತು ಭೌತಿಕ ಮೂಲ ಸೌಕರ‍್ಯ ಒದಗಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಸಂಶೋಧನೆ ಕಾರ್ಯಕ್ರಮ, ಸ್ವಾಯತ್ತತೆ ಹಾಗೂ ಪರಿಣಾಮಕಾರಿ ಆಡಳಿತಕ್ಕೆ ಉತ್ತೇಜನ ನೀಡಲಾಗುತ್ತದೆ. ಅಲ್ಲದೇ ಉದ್ಯಮ ಆಧರಿತ ಕೌಶಲ್ಯ ಕೋರ್ಸ್‌ ಆರಂಭಿಸಲಾಗುತ್ತದೆ. ಕೆಐಟಿಗಳನ್ನು ಇಂಟರನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ಎಕ್ಸಲೆನ್ಸ್‌ ಸಂಸ್ಥೆಗಳನ್ನಾಗಿ ಪರಿವರ್ತಿಸಲಾಗುವುದು. ವಿದೇಶಿ ವಿಶ್ವವಿದ್ಯಾಲಗಳೊಂದಿಗೆ ಶೈಕ್ಷಣಿಕ ಪ್ರಗತಿಗೆ ಒಪ್ಪಂದವನ್ನೂ ಮಾಡಿಕೊಳ್ಳಲಾಗುತ್ತದೆ.

ಜಿಲ್ಲೆಗೊಂದು 'ಸೂಪರ್‌ 30' ಎಂಜಿನಿಯರಿಂಗ್‌ ಕಾಲೇಜು: ಅಶ್ವತ್ಥ ನಾರಾಯಣ

ಈ ಕಾಲೇಜು ಕಲ್ಯಾಣ ಕರ್ನಾಟಕದಲ್ಲಿ ಅತ್ಯುತ್ತಮ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಆಗಿದೆ. ಸದ್ಯ ಕೆಐಟಿಗೆ ಸೇರ್ಪಡೆಯಾಗಿದೆ. ಕಾಲೇಜಿಗೆ ಬೇಕಾದ ಮೂಲ ಸೌಕರ‍್ಯ ಒದಗಿಸಿದ್ದೇನೆ. ಗ್ರಾಮೀಣ ಭಾಗದ ವಿದಾರ್ಥಿಗಳಿಗೆ ಅನುಕೂಲ ಆಗಲಿದೆ. ವಿದೇಶಿ ವಿಶ್ವವಿದ್ಯಾಲಯದೊಂದಿಗೆ ತಳಕಲ್‌ ಎಂಜಿನಿಯರಿಂಗ್‌ ಕಾಲೇಜಿನ ನಾನಾ ಶೈಕ್ಷಣಿಕ ಪ್ರಗತಿಗೆ ಒಪ್ಪಂದ ಸಹ ಆಗಲಿದೆ ಅಂತ ಸಚಿವ ಹಾಲಪ್ಪ ಆಚಾರ್‌ ಹೇಳಿದ್ದಾರೆ.

ಜಿಲ್ಲೆಗೆ ಎಂಜಿನಿಯರಿಂಗ್‌ ಕಾಲೇಜು ಬೇಕೆಂದು ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಅವಧಿಯಲ್ಲಿ ನಾನು ಉನ್ನತ ಶಿಕ್ಷಣ ಸಚಿವನಿದ್ದಾಗ ತಳಕಲ್‌ ಎಂಜಿನಿಯರಿಂಗ್‌ ಕಾಲೇಜನ್ನು ಮಂಜೂರು ಮಾಡಿಸಿದ್ದೆ. ರಾಜ್ಯದ ಬಹುದೊಡ್ಡ ಎಂಜಿನಿಯರಿಂಗ್‌ ಕಾಲೇಜು ಇದಾಗಿದ್ದು, ಸರ್ಕಾರ ಕೆಐಟಿ ಘೋಷಣೆ ಮಾಡಿದರೆ ಸಾಲದು. ಇನ್ನೂ ಹೆಚ್ಚಿನ ಮೂಲ ಸೌಕರ‍್ಯಕ್ಕೆ .25 ಕೋಟಿ ಮಂಜೂರು ಮಾಡಬೇಕು ಅಂತ ಮಾಜಿ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.