Asianet Suvarna News Asianet Suvarna News

ಮಂಗಳೂರು: ಮೆಡಿಕಲ್ ಸೀಟ್ ಅಕ್ರಮ, ಜಿಆರ್‌ ಕಾಲೇಜು ವಿರುದ್ದ ತಿರುಗಿಬಿದ್ದ ವಿದ್ಯಾರ್ಥಿಗಳು!

ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ನಡೆದ ಎಂಬಿಬಿಎಸ್ ಮೆಡಿಕಲ್ ಸೀಟ್ ಹೆಸರಿನ ಭಾರೀ ಅಕ್ರಮ ಪ್ರಕರಣ ಸಂಬಂದಿಸಿ ಮೆಡಿಕಲ್ ಕಾಲೇಜಿಗೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಕಾಲೇಜು ಮುಂಭಾಗ ವಿದ್ಯಾರ್ಥಿಗಳು ಹಾಗೂ ಪೋಷಕರು ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸುವ ಮೂಲಕ ತಿರುಗಿ ಬಿದ್ದಿದ್ದಾರೆ.

Students protest against GR college medical seat illegality at mangaluru rav
Author
First Published Sep 4, 2023, 5:16 PM IST

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಸೆ.4): ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ನಡೆದ ಎಂಬಿಬಿಎಸ್ ಮೆಡಿಕಲ್ ಸೀಟ್ ಹೆಸರಿನ ಭಾರೀ ಅಕ್ರಮ ಪ್ರಕರಣ ಸಂಬಂದಿಸಿ ಮೆಡಿಕಲ್ ಕಾಲೇಜಿಗೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಕಾಲೇಜು ಮುಂಭಾಗ ವಿದ್ಯಾರ್ಥಿಗಳು ಹಾಗೂ ಪೋಷಕರು ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸುವ ಮೂಲಕ ತಿರುಗಿ ಬಿದ್ದಿದ್ದಾರೆ.

ಲಕ್ಷ ಲಕ್ಷ ಫೀಸ್ ಕಲೆಕ್ಟ್ ಮಾಡಿ ವಂಚಿಸಿದ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತವಾಗಿದ್ದು, ಸರ್ಕಾರದ ಅನುಮತಿ ಇಲ್ಲದೇ ನೂರಾರು ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿದೆ. ಮಂಗಳೂರಿನ ನೀರುಮಾರ್ಗದ ಜಿ.ಆರ್.ಮೆಡಿಕಲ್ ಕಾಲೇಜು(GR Medical collage mangaluru) ಹೆಸರಿನಲ್ಲಿ ನಡೆದಿರೋ ಭಾರೀ ಅಕ್ರಮ ಇದಾಗಿದ್ದು, ಈಗಾಗಲೇ ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಸಮಗ್ರ ತನಿಖೆಗೆ ಸೂಚನೆ ನೀಡಲಾಗಿದೆ. 

ಅಯ್ಯೋ ವಿಧಿಯೇ! ಸಮುದ್ರಕ್ಕೆ ಜಾರಿಬಿದ್ದ ಡಾಕ್ಟರ್‌ ಬದುಕಿದ್ರು, ಇಣುಕಿದ ಯುವವೈದ್ಯ ಬಲಿ!

ರಾಜ್ಯ ಸರ್ಕಾರಕ್ಕೆ ಮೆಡಿಕಲ್ ಸೀಟ್ ಅಕ್ರಮದ ತನಿಖೆಗೆ ಆಯೋಗ ಪತ್ರ ಬರೆದಿತ್ತು. ಮಂಗಳೂರಿನ ನೀರುಮಾರ್ಗದಲ್ಲಿ ಎರಡು ವರ್ಷಗಳ ಹಿಂದೆ ಆರಂಭವಾಗಿರುವ ಜಿ.ಆರ್.ಮೆಡಿಕಲ್ ಕಾಲೇಜು, ಗಣೇಶ್ ರಾವ್ ಎಂಬವರ ಮಾಲೀಕತ್ವದಲ್ಲಿದೆ‌. ಲಕ್ಷಾಂತರ ಶುಲ್ಕ ತೆತ್ತು ಪ್ರವೇಶ ಪಡೆದ 150 ವಿದ್ಯಾರ್ಥಿಗಳ ಭವಿಷ್ಯ ಸದ್ಯ ಅತಂತ್ರವಾಗಿದೆ. ಅನುಮತಿ‌ ಇಲ್ಲದೇ ಸೀಟು ನೀಡಿರುವುದು ಅಕ್ರಮ ಮತ್ತು ಕಾನೂನು ಬಾಹಿರ ಎಂದು ವರದಿ ಆಯೋಗ ವರದಿ‌ ನೀಡಿದೆ. 

2022-23 ಸಾಲಿಗೆ 150 ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ದಾಖಲಾತಿಯಾಗಿದ್ದು, 2021-22ರಲ್ಲಿ ಎಂಎಆರ್‌ಬಿ ಮೆಡಿಕಲ್ ಕಾಲೇಜು ನಡೆಸಲು ಅನುಮತಿ ನೀಡಿತ್ತು. ಆದರೆ 2022ರ ಸೆಪ್ಟೆಂಬರ್ ನಲ್ಲಿ ಎಂಎಆರ್ಬಿ ತಂಡ ಕಾಲೇಜಿನಲ್ಲಿ ಪರಿಶೀಲನೆ ನಡೆಸಿತ್ತು. ಈ ವೇಳೆ ಕಾಲೇಜಿನಲ್ಲಿ ರಿಸರ್ಚ್ ಸೆಂಟರ್ ಅಗತ್ಯ ಮಾನದಂಡ ಮತ್ತು ನುರಿತ ಸಿಬ್ಬಂದಿ ಇರಲಿಲ್ಲ. ಹೀಗಾಗಿ ಎರಡನೇ ಬ್ಯಾಚ್ ನಲ್ಲಿ ಎಂಬಿಬಿಎಸ್ ದಾಖಲಾತಿಗೆ ಅವಕಾಶ ನೀಡಿರಲಿಲ್ಲ. ಹೀಗಿದ್ದರೂ ಕಾನೂನು ಬಾಹಿರವಾಗಿ 150 ಮಂದಿಗೆ ಸೀಟು ಹಂಚಿಕೆ ಮಾಡಲಾಗಿತ್ತು. ಕೋಟ್ಯಾಂತರ ರೂ. ಶುಲ್ಕ ಪಡೆದು ಸೀಟು ಹಂಚಿಕೆ ಮಾಡಿದ್ದು, ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಎರಡು ಬಾರಿ ಆಯೋಗ ತನಿಖೆಗೆ ಸೂಚಿಸಿತ್ತು. 

ಇದೀಗ ಮೊದಲ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಿಗೂ ಮಹಾ ಮೋಸದ ಆರೋಪ ಕೇಳಿ ಬಂದಿದ್ದು, ಕಾಲೇಜು ಮುಂಭಾಗ 300ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಪೋಷಕರು ಧರಣಿ ನಡೆಸಿದ್ದಾರೆ. ವೈದ್ಯರಾಗುವ ಕನಸು ಹೊತ್ತ ನೂರಾರು ವಿದ್ಯಾರ್ಥಿಗಳ ಬದುಕು ಅತಂತ್ರವಾಗಿದ್ದು, ಚೇರ್ ಮೆನ್ ಗಣೇಶ್ ರಾವ್ ಸ್ಥಳಕ್ಕೆ ಬರುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. 

ಆಸ್ಪತ್ರೆಯಿದ್ದರೂ ರೋಗಿಗಳಿಲ್ಲ, ಮೆಡಿಕಲ್ ಕಾಲೇಜಿಗಾಗಿ ಎಲ್ಲವೂ ನಕಲಿ!

ಇನ್ನು ವೈದ್ಯಕೀಯ ಕಾಲೇಜಿಗೆ ಮಾನ್ಯತೆ ಸಿಗಬೇಕಾದ್ರೆ ಏನೆಲ್ಲಾ ಮೂಲಭೂತ ಸೌಕರ್ಯಗಳು ಇರಬೇಕೋ ಅದ್ಯಾವುದೂ ಕೂಡ ಈ ಕಾಲೇಜಿನಲ್ಲಿ ಇಲ್ಲ. ಇಲ್ಲಿ ಈಗಾಗಲೇ ಎರಡನೇ ವರ್ಷಕ್ಕೆ ಕಾಲಿಟ್ಟ ವಿದ್ಯಾರ್ಥಿಗಳಿಗೆ ಮೆಡಿಕಲ್​ ಸೈನ್ಸ್​ನ ಎಬಿಸಿಡಿ ಕೂಡಾ ಇಲ್ಲಿ ಕಲಿಸಿಲ್ಲ. ಕನಿಷ್ಟ ಇವರಿಗೆ ಬಿಪಿ ಪರೀಕ್ಷೆ ಮಾಡೋದನ್ನೂ ಕೂಡ ಸರಿಯಾಗಿ ಕಲಿಸಿಲ್ಲ ಅಂತ ವಿದ್ಯಾರ್ಥಿಗಳೇ ದೂರಿದ್ದಾರೆ. ಇವರು ಹೇಳೋ ಪ್ರಕಾರ ಮೆಡಿಕಲ್​ ಕಾಲೇಜಿನಲ್ಲಿ ಆಸ್ಪತ್ರೆ ಇದೆಯಾದ್ರೂ ಒಂದೇ ಒಂದು ರೋಗಿ ಇಲ್ಲಿ ದಾಖಲಾಗಿಲ್ಲ. ಎಂಎಆರ್​ಬಿಯವರು ತಪಾಸಣೆಗೆ ಬರೋವಾಗ ಇಲ್ಲಿ ಬಾಡಿಗೆ ರೋಗಿಗಳು, ಬಾಡಿಗೆ ವೈದ್ಯರನ್ನು ಹೊರಗಿನಿಂದ ತರ್ತಾರೆ ಅನ್ನೋ ಆರೋಪ ವಿದ್ಯಾರ್ಥಿಗಳದ್ದು. 

ಇನ್ನು ಹಾಸ್ಟೆಲ್​ , ಕಾಲೇಜು ಕ್ಯಾಂಪಸ್​ನಲ್ಲಿ ವಿದ್ಯಾರ್ಥಿನಿಯರಿಗೆ ಯಾವುದೇ ಭದ್ರತೆ ಕೂಡ ಇಲ್ಲ. ಕಳಪೆ ಗುಣಮಟ್ಟದ ಊಟವನ್ನು ಬೇಕಾದರೆ ತಿನ್ನಬೇಕು ಅನ್ನೋ ರೀತಿಯಲ್ಲಿ ಆಡಳಿತ ಮಂಡಳಿ ವರ್ತಿಸುತ್ತಿದೆಯಂತೆ. ಹೆತ್ತವರೊಬ್ಬರು ಮಗಳು ಡಾಕ್ಟರ್​ ಆಗಬೇಕು ಅನ್ನೋ ಕನಸನ್ನ ನನಸು ಮಾಡೋದಿಕ್ಕೆ ಅಂತ ತಮ್ಮ ಜಮೀನು ಮಾರಾಟ ಮಾಡಿ ಮೆಡಿಕಲ್ ಸೀಟ್​ ಗಿಟ್ಟಿಸಿಕೊಂಡಿದ್ದಾರೆ. ಆದ್ರೆ ಈಗ ಮೆಡಿಕಲ್ ಸೀಟ್​ ಸಿಕ್ಕರೂ ಮಗಳು ವೈದ್ಯೆ ಆಗ್ತಾಳೆ ಅನ್ನೋ ಕನಸನ್ನೇ ಇವರು ಕಳೆದುಕೊಂಡಿದ್ದಾರೆ. 

ಮಂಗಳೂರು ಸಿಸಿಬಿ ಭರ್ಜರಿ ಕಾರ್ಯಾಚರಣೆ; ನೈಜೀರಿಯಾ ಮೂಲದ ಡ್ರಗ್ಸ್ ಪೆಡ್ಲರ್ ಸೆರೆ

ಮೆಡಿಕಲ್ ಕಾಲೇಜಿನ ಮಾನ್ಯತೆ ರದ್ದಾಗಿರೋ ಕಾರಣದಿಂದ ಈ ವಿದ್ಯಾರ್ಥಿಗಳ ರಿಜಿಸ್ಟ್ರೇಷನ್​ ಆಗದೇ ಈ ಬಾರಿ ಪರೀಕ್ಷೆ ಬರೆಯೋದೇ ಅನುಮಾನವಾಗಿದೆ. ಇನ್ನು ಕಾಲೇಜಿನ ಮಾನ್ಯತೆ ರದ್ದಾಗಿರೋದನ್ನ ಕಾಲೇಜು ಆಡಳಿತ ಮಂಡಳಿಗೆ ತಿಳಿಸಿದ್ರೂ ಡಿಎಂಎ ಹಾಗೂ ಕೆಇಎಗೆ ಈ ಬಗ್ಗೆ ಮಾಹಿತಿ ನೀಡದ್ದು ಮತ್ತೊಂದು ತಪ್ಪು. ಇಲಾಖೆಗಳ ನಡುವೆಯೇ ಸರಿಯಾದ ಮಾಹಿತಿ ಹಂಚಿಕೆ ಆಗದೇ ಇರೋದು ಈ ಎಲ್ಲಾ ಸಮಸ್ಯೆಗೆ ಕಾರಣ. ಇನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೂಡ ಕಾಲೇಜಿನ ಅನುಮತಿ ಬಗ್ಗೆ ಮಾಹಿತಿ ಪಡೆಯದೇ ಸೀಟ್ ಗಳನ್ನು ಅಲಾಟ್ ಮಾಡಿ ಎಡವಟ್ಟು ಮಾಡಿದೆ. ಸದ್ಯ 150 ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಸರ್ಕಾರದ ಕೈಲಿದ್ದು ಸೂಕ್ತ ಕ್ರಮವನ್ನು ಶೀಘ್ರವಾಗಿ ಕೈಗೊಳ್ಳಬೇಕಾಗಿದೆ.

Follow Us:
Download App:
  • android
  • ios