*   ಬೆಂಗಳೂರು ವಿವಿಯ ಮತ್ತೊಂದು ಎಡವಟ್ಟು*  ವಿದ್ಯಾರ್ಥಿಗಳಲ್ಲಿ ಆತಂಕ*  ಆಗಿರುವ ಲೋಪ ತಕ್ಷಣ ಸರಿಪಡಿಸಲು ವಿದ್ಯಾರ್ಥಿಗಳ ಆಗ್ರಹ  

ಬೆಂಗಳೂರು(ಜೂ.25): ಸ್ನಾತಕೋತ್ತರ ಪದವಿ ಕೋರ್ಸಿಗೆ ಪ್ರವೇಶ ಪಡೆದಿರುವ ಹಲವು ವಿದ್ಯಾರ್ಥಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯ ಈಗ ನೀವೆಲ್ಲರೂ ಪದವಿಯಲ್ಲಿ ಅನುತ್ತಿರ್ಣರಾಗಿದ್ದೀರಿ ಎಂದು ಹೇಳಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ವಿವಿಯ ಈ ಎಡವಟ್ಟಿನಿಂದ ವಿದ್ಯಾರ್ಥಿಗಳು ಆತಂಕಗೊಂಡಿದ್ದು, ಆಗಿರುವ ಲೋಪವನ್ನು ತಕ್ಷಣ ಸರಿಪಡಿಸಲು ಆಗ್ರಹಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗಷ್ಟೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 3ನೇ ಸಮಿಸ್ಟರ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಕೆಲ ವಿಷಯದಲ್ಲಿ ಮೊದಲು ಗರಿಷ್ಠ ಅಂಕಗಳಿಗೂ ಹೆಚ್ಚು ಅಂಕ ನೀಡಿ ಮಾಡಿದ್ದ ಲೋಪವನ್ನು ಸರಿಪಡಿಸಲು ಹೋಗಿ ಪಾಸ್‌ಆಗಿದ್ದವರನ್ನು ಫೇಲ್‌ ಮಾಡಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಬೆಂಗಳೂರು ವಿಶ್ವವಿದ್ಯಾಲಯದಲ್ಲೂ ಇಂತಹದ್ದೊಂದು ಎಡವಟ್ಟು ನಡೆದಿದೆ. ಪದವಿ ಮುಗಿಸಿ ಸಂಯೋಜಿತ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದು ಮೊದಲ ಸೆಮಿಸ್ಟರ್‌ ಪರೀಕ್ಷೆಗೆ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ನೀವೆಲ್ಲರೂ ಪದವಿಯಲ್ಲಿ ಫೇಲ್‌ ಆಗಿದ್ದೀರಿ ಹಾಗಾಗಿ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಹರಲ್ಲ ಎಂದು ಹೇಳಿ ಬೆಂಗಳೂರು ವಿವಿ ಅವರ ದಾಖಲಾತಿಯನ್ನೇ ಅನರ್ಹಗೊಳಿಸಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಬೆಂ.ನಗರ ವಿವಿಯ ಪಿಜಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಂದ ಸಾಮೂಹಿಕ ನಕಲು

ಆರೋಪ ಮಾಡುತ್ತಿರುವ ವಿದ್ಯಾರ್ಥಿಗಳು ಹೊಂದಿರುವ ದಾಖಲೆಗಳ ಪ್ರಕಾರ 2021ರಲ್ಲಿ ಪದವಿ ಕೋರ್ಸುಗಳಲ್ಲಿ ಉತ್ತೀರ್ಣರಾಗಿದ್ದಾರೆ. ಬೆಂಗಳೂರು ವಿವಿಯಿಂದಲೇ ಪಡೆದಿರುವ ಅಂಕಪಟ್ಟಿಯೂ ಅವರ ಬಳಿ ಇದೆ. ವಿಶೇಷವೆಂದರೆ ಬಹಳಷ್ಟುಜನ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರ ಆಧಾರದ ಮೇಲೆಯೇ ಸ್ನಾತಕೋತ್ತರ ಪದವಿ ಪ್ರವೇಶ ಪಡೆದುಕೊಂಡಿದ್ದಾರೆ. ಕಾಲೇಜಿನವರು ಆ ವಿದ್ಯಾರ್ಥಿಗಳು ಮೊದಲ ವರ್ಷದ ಪರೀಕ್ಷೆಗೆ ಶುಲ್ಕ ಪಾವತಿಸಿಕೊಂಡು ಅನುಮೋದನೆಗೆ ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದಾರೆ. ಈ ವೇಳೆ ಇಂತಹ ಘಟನೆ ನಡೆದಿದೆ.

ಇನ್ನು, ತಮಗಾಗಿರುವ ಅನ್ಯಾಯದ ಬಗ್ಗೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಆಗಿರುವ ಲೋಪವನ್ನು ಮೌಲ್ಯಮಾಪನ ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ದೂರು ನೀಡಲು ಹೋದರೆ ಕಚೇರಿಯಲ್ಲಿ ಯಾರೋಬ್ಬರೂ ಲಭ್ಯವಿರಲಿಲ್ಲ ಎಂದು ಸಂಬಂಧಪಟ್ಟವಿದ್ಯಾರ್ಥಿಗಳು ದೂರಿದ್ದಾರೆ. ಅಲ್ಲದೆ, ಇಂತಹ ಲೋಪಗಳನ್ನು ಉದ್ದೇಶಪೂರ್ವಕವಾಗಿಯೇ ನಡೆಸಿದ್ದು, ಹಣದಾಸೆಗೆ ಕೆಲವರು ಇಂತಹ ಕೃತ್ಯ ಎಸಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.