*  ಶೈಕ್ಷಣಿಕ ಅವಧಿ ಮುಗಿದ್ರು ಪರೀಕ್ಷೆ ನಡೆಸುತ್ತಿಲ್ಲ*  ಪದೇ ಪದೇ ಪದವಿ  ಪರೀಕ್ಷೆ ಮುಂದೂಡಿಕೆ*  ಎನ್‌ಇಪಿ ವಿದ್ಯಾರ್ಥಿಗಳಿಗೆ ಇನ್ನೂ ಪರೀಕ್ಷೆ ಆಯೋಜಿಸಿಲ್ಲ  

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಬಳ್ಳಾರಿ

ಬಳ್ಳಾರಿ(ಏ.27): ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ(National Education Policy) ಕೆಲವೊಂದಿಷ್ಟು ಗೊಂದಲದ ಹಿನ್ನೆಲೆ‌ ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳು ಪದವಿಯ ಮೊದಲ ಸೆಮಿಸ್ಟರ್ ಪರೀಕ್ಷೆಯನ್ನು ನಡೆಸಲು ವಿಳಂಬ ಮಾಡ್ತಿರೋ ಹಿನ್ನೆಲೆ ಲಕ್ಷಾಂತರ ವಿದ್ಯಾರ್ಥಿಗಳ(Students) ಶೈಕ್ಷಣಿಕ ವರ್ಷ ಅತಂತ್ರವಾಗುವ ಆತಂಕ ಎದುರಾಗಿದೆ. ಮಾರ್ಚ್ ತಿಂಗಳ ಅಂತ್ಯದ ವೇಳೆಗಾಗಲೇ ಪರೀಕ್ಷೆ ಮುಗಿಯಬೇಕಿತ್ತು. ಈಗ ಏಪ್ರಿಲ್ ಮುಗಿಯೋಕೆ ಬಂದ್ರೂ ಪದೇ ಪದೇ ಪರೀಕ್ಷೆ ದಿನಾಂಕ ಮುಂದೂಡ್ತ ಇರೋದಕ್ಕೆ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ. 

ಹೀಗಾಗಿ ಬಳ್ಳಾರಿಯ(Ballari) ಶ್ರೀ ಕೃಷ್ಣ ದೇವರಾಯ ವಿವಿ‌(Sri Krishnadevaraya University) ವ್ಯಾಪ್ತಿಯ‌ 126 ಕಾಲೇಜಿನ 26 ಸಾವಿರ ವಿದ್ಯಾರ್ಥಿಗಳು ಸೇರಿದಂತೆ ರಾಜ್ಯಾದ್ಯಂತ(Karnataka) ಇರೋ ಮೂರು ಲಕ್ಷ ವಿದ್ಯಾರ್ಥಿಗಳು ಪದವಿ ಪರೀಕ್ಷೆ(Examination) ಬರೆಯಲಾಗದೇ ಮುಂದಿನ ಶೈಕ್ಷಣಿಕ ಭವಿಷ್ಯದ ದೊಡ್ಡ ಚಿಂತೆಯಾಗಿದೆ.

NEP: ಸಮಗ್ರ ಅಭಿವೃದ್ಧಿಗೆ ರಾಷ್ಟೀಯ ಶಿಕ್ಷಣ ನೀತಿ ಅವಶ್ಯಕ: ಸಚಿವ ನಾಗೇಶ

ಪರೀಕ್ಷೆಗಾಗಿ ಕಾದು ಕುಳಿತ ವಿದ್ಯಾರ್ಥಿಗಳ ಆಕ್ರೋಶ

ಪದವಿ ವಿದ್ಯಾರ್ಥಿಗಳ ಮೊದಲ ಸೆಮಿಸ್ಟರ್‌ನ ಪಠಕ್ರಮದ ಬೋಧನೆ ಮುಕ್ತಾಯವಾಗಿದೆ. ಮೊದಲ ಸಮಿಸ್ಟರ್ ಅವಧಿ ಸಹ ಕೊನೆಯಾಗಿದೆ. ವಿದ್ಯಾರ್ಥಿಗಳು ಸಹ ಪರೀಕ್ಷೆ ಬರೆಯಲು ರೆಡಿಯಾಗಿದ್ದಾರೆ. ಆದ್ರೇ ಪರೀಕ್ಷೆ ನಡೆಸಬೇಕಾದ ವಿಶ್ವ ವಿದ್ಯಾಲಯಗಕು ಪದೇ ಪದೇ ಪರೀಕ್ಷೆ ಮುಂದೂಡುತ್ತಿದೆ. ಹೌದು. ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ವಿವಿಗಳು ಪದವಿ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆ ನಡೆಸಲು ಮೀನಾಮೇಷ ಎಣಿಸುತ್ತಿದೆ. ವಿಎಸ್ ಕೆ ವಿವಿ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಯ 126 ಕಾಲೇಜುಗಳ ಬರೋಬ್ಬರಿ 26 ಸಾವಿರ ವಿದ್ಯಾರ್ಥಿಗಳು ಪ್ರಥಮ ವರ್ಷದ ಪದವಿ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದ್ರೇ ಈ ವಿದ್ಯಾರ್ಥಿಗಳಿಗೆ ಏಪ್ರಿಲ್ ಮೂರನೇ ವಾರ ಮುಕ್ತಾಯವಾದ್ರು ಪ್ರಥಮ ಸೆಮಿಸ್ಟರ್ ಪರೀಕ್ಷೆಗೆ ಅಧಿಕೃತ ದಿನಾಂಕ ಘೋಷಣೆಯಾಗುತ್ತಿಲ್ಲ. ಫೆಬ್ರುವರಿ ತಿಂಗಳಿನಲ್ಲೇ ಮೊದಲ ಸೆಮಿಸ್ಟರ್ ಪರೀಕ್ಷೆ ಬರೆದು ಎಪ್ರಿಲ್ ಅಂತ್ಯಕ್ಕೆ ಫಲಿತಾಂಶ ಪಡೆಯಬೇಕಾಗಿದ್ದ ವಿದ್ಯಾರ್ಥಿಗಳು ಪ್ರಥಮ ಸೆಮಿಸ್ಟರ್ ಪರೀಕ್ಷೆ ನಡೆಸದಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. 

ರಾಷ್ಟ್ರೀಯ ಶಿಕ್ಷಣ ನೀತಿಯ ಗೊಂದಲ ಕಾರಣ?

ವಿಶ್ವವಿದ್ಯಾಲಯ ಈ ಬಾರಿ ಪದವಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗಿದೆ. ಅದರಲ್ಲಿನ ಕೆಲ ಗೊಂದಲದಿಂದಲೇ ಈವರೆಗೂ ಪರೀಕ್ಷೆ ಮಾಡೋದಕ್ಕೆ ಆಗ್ತಿಲ್ಲ ಅನ್ನೋದು ವಿದ್ಯಾರ್ಥಿಗಳ ಆರೋಪ. ಕಳೆದ ಫೆಬ್ರವರಿ ತಿಂಗಳಲ್ಲಿ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸುವುದಾಗಿ ದಿನಾಂಕ ಪ್ರಕಟಿಸಿದ್ದ ವಿವಿ ಈಗಾಗಲೇ ಮೂರು ಭಾರಿ ದಿನಾಂಕ ಮುಂದೂಡಿಕೆ ಮಾಡಿದೆ. ಇನ್ನೂ ಈವರೆಗೂ ಪರೀಕ್ಷಾ ವೇಳಾಪಟ್ಟಿಯನ್ನೇ ಬಿಡುಗಡೆ ಮಾಡಿಲ್ಲ. ಜೊತೆಗೆ ಮಾದರಿ ಪ್ರಶ್ನೆ ಪತ್ರಿಕೆ, ಪರೀಕ್ಷಾ ವೇಳಾಪಟ್ಟಿ ಸಹ ಬಿಡುಗಡೆ ಮಾಡಿಲ್ಲ. ಎನ್‌ಇಪಿಯೇತರ ಪ್ರಥಮ ಸೆಮಿಸ್ಟರ್‌ನ ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷೆಗಳನ್ನು ನಡೆಸಿರುವ ಹಲವು ವಿವಿಗಳು, ಎನ್‌ಇಪಿ ವಿದ್ಯಾರ್ಥಿಗಳಿಗೆ ಮಾತ್ರ ಇನ್ನೂ ಪರೀಕ್ಷೆ ಆಯೋಜಿಸಿಲ್ಲ ಜೊತೆಗೆ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವುದರಲ್ಲಿ ಸಂಪೂರ್ಣ ವಿಫಲವಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪಠ್ಯೇತರ ಚಟುವಟಿಕೆ ಕಡ್ಡಾಯ: ಅಶ್ವತ್ಥ್ ನಾರಾಯಣ

ಇಲ್ಲಿಯವರೆಗೂ ಇದ್ದ ಸ್ಟೂಡೆಂಟ್ ಪೋರ್ಟಲ್ ಬದಲಾಗಿ ಯುಯುಸಿಎಂಎಸ್ (ಯುನಿಫೈಡ್ ಯುನಿವರ್ಸಿಟಿ & ಕಾಲೇಜ್ ಮ್ಯಾನೇಜ್‌ಮೆಂಟ್ ಸಿಸ್ಟಮ್) ಅನ್ನುವ ಹೊಸ ಪೋರ್ಟಲ್ ಪ್ರಾರಂಭಿಸಿರುವುದು ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಲ್ಲಿ ಹಲವು ತಾಂತ್ರಿಕ ಗೊಂದಲಗಳನ್ನು ಸೃಷ್ಪಿ ಮಾಡಿದೆ. ಈ ಪೋರ್ಟಲ್‌ನಿಂದ ವಿದ್ಯಾರ್ಥಿಗಳನ್ನ ಬಲಿಪಶು ಮಾಡಲಾಗುತ್ತಿದೆ. ಪ್ರಥಮ ವರ್ಷದ ಪದವಿ ಕೋರ್ಸ್ ಮುಗಿಯಬೇಕಿದ್ದ ಸಮಯದಲ್ಲಿ ವಿವಿಯು ಪ್ರಥಮ ಸೆಮಿಸ್ಟರ್ ಪರೀಕ್ಷೆ ಕುರಿತು ವೇಳಾಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.. ಆದ್ರೇ ವಿವಿಯ ಕುಲಪತಿ ಸಿದ್ದು ಪಿ. ಅಲಗೂರು ಅವರು ಹೇಳೋದು ಮಾತ್ರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗಿದೆ. ಸ್ವಲ್ಪ ತಾಂತ್ರಿಕ ತೊಂದರೆ ಇರುವುದು ಸತ್ಯ. ಶ್ರೀಘ್ರದಲ್ಲೇ ಪರೀಕ್ಷೆ ನಡೆಸುತ್ತೇವೆ ಎನ್ನುತ್ತಿದ್ದಾರೆ..

ವಿವಿಗಳ ಎನ್‌ಇಪಿ(NEP) ಶಿಕ್ಷಣದ ಬಗ್ಗೆ ಇರೋ ಗೊಂದಲ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ(Academic Year) ಮೇಲೆ ಪರಿಣಾಮ ಬೀರಿದೆ. ಪದವಿ ಪ್ರಥಮ ವರ್ಷದ ಪರೀಕ್ಷೆ ಮುಗಿದಿಲ್ಲ ಆದ್ರೇ ಇದೀಗ ದ್ವೀತಿಯ ವರ್ಷದ ಸಿದ್ಧತೆ ಮಾಡಿಕೊಳ್ಳೋ ಅನಿವಾರ್ಯ ಬಂದಿದೆ. ಹೀಗಾದ್ರೇ ಮುಂದಿನ ವರ್ಷ ಮತ್ತಷ್ಟು ಕಷ್ಟವಾಗಲಿದೆ ಎನ್ನುತ್ತಾರೆ ವಿದ್ಯಾರ್ಥಿಗಳು. ಹೀಗಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನಕ್ಕೆ ಸಿಲುಕಲಿದೆ.