Asianet Suvarna News Asianet Suvarna News

5, 8ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಪ್ರಸ್ತಾವನೆ ಕೈಬಿಡಲು ರುಪ್ಸಾ, ಎಐಡಿಎಸ್‌ಒ ಆಗ್ರಹ

ಸರ್ಕಾರ 5, 8ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಪ್ರಸ್ತಾವನೆ ಕೈಬಿಡಲು ಎಐಡಿಎಸ್‌ಒ ಆಗ್ರಹಿಸಿದೆ. ಶಿಕ್ಷಣ ಗುಣಮಟ್ಟ ಕುಸಿದಿರುವುದರ ಕಾರಣವನ್ನು ಶಿಕ್ಷಕರ ತಲೆ ಮೇಲೆ ಹೊರೆಸಿ ತನ್ನ ಜವಾಬ್ದಾರಿಯಿಂದ ಸರ್ಕಾರ ಕೈ ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದೆ.

 

Rupsa and AIDSO oppose board exam to 5th and 8th students in Karnataka  gow
Author
First Published Oct 9, 2022, 3:50 PM IST

ಮೈಸೂರು (ಅ.9): ರಾಜ್ಯ ಸರ್ಕಾರ ಈ ಕೂಡಲೇ 5 ಮತ್ತು 8ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆಯ ಪ್ರಸ್ತಾವನೆ ಕೈಬಿಡಬೇಕು ಎಂದು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರವು 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆಗಳನ್ನು ನಡೆಸುವುದಾಗಿ ಹೇಳಿದ್ದು, ಶಿಕ್ಷಣ ಗುಣಮಟ್ಟವನ್ನು ಕಾಪಾಡುವ ಉದ್ದೇಶದಿಂದ ಈ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಶಿಕ್ಷಣ ಸಚಿವರು ಹೇಳುತ್ತಿದ್ದಾರೆ. ಗುಣಮಟ್ಟ ಕುಸಿದಿರುವುದರ ಕಾರಣವನ್ನು ಶಿಕ್ಷಕರ ತಲೆ ಮೇಲೆ ಹೊರೆಸಿ ತನ್ನ ಜವಾಬ್ದಾರಿಯಿಂದ ಸರ್ಕಾರ ಕೈ ತೊಳೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಆ ವಯೋಮಿತಿಯ ಮಕ್ಕಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಗುಣಮಟ್ಟ ಕುಸಿದಿರುವುದಕ್ಕೆ ಸರ್ಕಾರದ ನೀತಿಗಳೇ ಕಾರಣ. ಈಗಾಗಲೇ ಪಾಸ್‌ ಫೇಲ್‌ ಪದ್ಧತಿಯನ್ನು ಕೈಬಿಟ್ಟು ಕಡ್ಡಾಯ ಉತ್ತೀರ್ಣ ನೀತಿಯನ್ನು ಜಾರಿಗೊಳಿಸಿರುವುದು ಶಿಕ್ಷಣದ ಗುಣಮಟ್ಟವನ್ನು ಹಾಳುಗೆಡವಿದೆ ಎಂದು ತಿಳಿಸಿದ್ದಾರೆ. ಶಾಲೆಗಳಲ್ಲಿ ಸಮರ್ಪಕ ಸಂಖ್ಯೆಯಲ್ಲಿ ಶಿಕ್ಷಕರ ನೇಮಕಾತಿಯಾಗಿಲ್ಲ, ಸರಿಯಾದ ಕಟ್ಟಡಗಳಿಲ್ಲ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅನೇಕ ಕನಿಷ್ಠ ಸೌಲಭ್ಯಗಳು ಕೂಡ ಇಲ್ಲ.

ರಾಜ್ಯದಲ್ಲಿ 4500 ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ಶಿಕ್ಷಕರೇ ಇಲ್ಲದಿರುವ ಶಾಲೆಗಳು ಕೂಡ ಈ ರಾಜ್ಯದಲ್ಲಿವೆ. ಇರುವ ಕೆಲವು ಶಿಕ್ಷಕರಿಗೆ ಪಾಠವನ್ನು ಹೊರತುಪಡಿಸಿ ಹಲವು ಬೋಧಕೇತರ ಕೆಲಸಗಳನ್ನು ಸರ್ಕಾರವೇ ವಹಿಸುತ್ತದೆ. ಸಮರ್ಪಕ ಸೌಲಭ್ಯಗಳನ್ನು ಒದಗಿಸಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸುವ ತನ್ನ ಕನಿಷ್ಠ ಜವಾಬ್ದಾರಿಯನ್ನು ನಿಭಾಯಿಸದೆ ಸರ್ಕಾರವು ಪಬ್ಲಿಕ್‌ ಪರೀಕ್ಷೆ ಕುರಿತು ಮಾತನಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಸರ್ಕಾರವು ಈ ಕೂಡಲೇ ಪಬ್ಲಿಕ್‌ ಪರೀಕ್ಷೆಯ ಪ್ರಸ್ತಾವನೆಯನ್ನು ಕೈ ಬಿಡಬೇಕು ಮತ್ತು ಶಿಕ್ಷಣದ ಗುಣಮಟ್ಟವನ್ನು ಖಾತ್ರಿಪಡಿಸಲು ಪಾಸ್‌ ಫೇಲ್‌ ಪದ್ಧತಿಯನ್ನು ಜಾರಿಗೊಳಿಸಬೇಕು ಹಾಗೂ ಶಿಕ್ಷಕರ ನೇಮಕಾತಿ, ಶಾಲಾ ಕಟ್ಟಡ ಸೇರಿದಂತೆ ಇತರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿ ಸಾರ್ವಜನಿಕ ಶಿಕ್ಷಣ ಪದ್ಧತಿಯನ್ನು ಬಲಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರುಪ್ಸಾ  ಕೂಡ ಪರೀಕ್ಷೆಗೆ ವಿರೋಧ:  5 ಮತ್ತು 8ನೇ ತರಗತಿಗೆ ಪಬ್ಲಿಕ್‌ ಮಾದರಿಯಲ್ಲಿ ಪರೀಕ್ಷೆ ನಡೆಸಲು ಚಿಂತನೆ ನಡೆಯುತ್ತಿರುವುದಕ್ಕೆ ರುಪ್ಸಾ ಕರ್ನಾಟಕ,  ವಿರೋಧ ವ್ಯಕ್ತಪಡಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಮ್ಯಾನೇಜ್‌ಮೆಂಟ್‌ ಸಂಘ ‘ರುಪ್ಸಾ ಕರ್ನಾಟಕ’ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ, ಆರ್‌ಟಿಇ ಕಾಯ್ದೆ ಪ್ರಕಾರ 1ರಿಂದ 8ನೇ ತರಗತಿವರೆಗೂ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ಅನುತ್ತೀರ್ಣ ಮಾಡುವಂತಿಲ್ಲ. ಪರೀಕ್ಷೆ ನಡೆಸುವ ಬದಲು ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು. ಅಗತ್ಯ ಶಿಕ್ಷಕರನ್ನು ನೇಮಕ ಮಾಡಿಕೊಂಡು ತರಬೇತಿ ನೀಡಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

BENGALURU: ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಳ

7ನೇ ತರಗತಿಗೆ ಹಿಂದೆ ಪಬ್ಲಿಕ್‌ ಪರೀಕ್ಷೆ ಇತ್ತು: 2004-05ನೇ ಶೈಕ್ಷಣಿಕ ಸಾಲಿನವರೆಗೂ 7ನೇ ತರಗತಿ ಮಕ್ಕಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲಾಗುತ್ತಿತ್ತು. ನಂತರ ರದ್ದುಪಡಿಸಲಾಗಿತ್ತು. ಮಕ್ಕಳ ಕಲಿಕಾ ದೃಷ್ಟಿಯಿಂದ 5 ಮತ್ತು 8ನೇ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಸುವ ಬಗ್ಗೆ ಹಿಂದೆಯೂ ಹಲವು ಬಾರಿ ಚರ್ಚೆ ನಡೆದಿತ್ತು.

ಶಿಕ್ಷಣ ಗುಣಮಟ್ಟ ಕುಸಿತ, 5 ಮತ್ತು 8ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಸರಕಾರ ತೀರ್ಮಾನ

 ಶಿಕ್ಷಣ ಸಚಿವರು ಹೇಳಿದ್ದೇನು?: 5 ಮತ್ತು 8ನೇ ತರಗತಿಗೆ ಎಸ್‌ಎಸ್‌ಎಲ್‌ಸಿ ಮಾದರಿಯಲ್ಲಿ ಬೋರ್ಡ್‌ ಪರೀಕ್ಷೆ ನಡೆಸುವ ಉದ್ದೇಶವಿಲ್ಲ. ಆದರೆ ಪರ್ಯಾಯ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆ ನಡೆದಿದ್ದು, ಅ.12ರಂದು ನಡೆಯುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಶನಿವಾರ ಹೇಳಿದ್ದರು.

Follow Us:
Download App:
  • android
  • ios