ಮತ್ತೆ ಸಿಡಿದೆದ್ದ ಖಾಸಗಿ ಶಾಲೆಗಳ ಒಕ್ಕೂಟ, ಸರ್ಕಾರಕ್ಕೆ ಡೆಡ್ಲೈನ್..!
ಶುಲ್ಕ ನಿಗದಿ ವಿಚಾರವಾಗಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ರುಪ್ಸಾ ಇದೀಗ ತನ್ನ ಇತರೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದು, ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟಿದೆ.
ಬೆಂಗಳೂರು, (ಮಾ.14): ಶಿಕ್ಷಣ ಇಲಾಖೆ ಧೋರಣೆ ಖಂಡಿಸಿ ರುಪ್ಸಾ ಕರ್ನಾಟಕ ಮತ್ತೆ ಸಿಡಿದೆದ್ದಿದೆ. ಮೊದಲ ಹಂತವಾಗಿ ಶಿಕ್ಷಣ ಸಚಿವರ ಮನೆ ಮುಂದೆ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ಮಾ.23ರೊಳಗೆ ಬೇಡಿಕೆ ಈಡೇರದೇ ಹೋದಲ್ಲಿ ಖಾಸಗಿ ಶಾಲೆ ಬಂದ್ ಮಾಡುವ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಕೊರೋನಾ ಕಾರಣ ಈ ಶೈಕ್ಷಣಿಕ ವರುಷ ಪೋಷಕರಿಗೂ, ಶಾಲೆಗಳಿಗೂ ಸಂಕಷ್ಟವಿದೆ. ಈ ಬಗ್ಗೆ ಗಮನಹರಿಸಬೇಕಾದ ಶಿಕ್ಷಣ ಇಲಾಖೆ ಬೇಡಿಕೆ ಈಡೇರಿಸುತ್ತೇನೆ ಎಂದು ಹೇಳಿ ಭರವಸೆ ಮಾತ್ರ ನೀಡುತ್ತಿದೆ. ಆದರೆ ಇವಾವು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ರುಪ್ಸಾ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ ಗರಂ ಆಗಿದೆ.
ಶಾಲಾ-ಕಾಲೇಜುಗಳಿಗೆ 15 ದಿನ ರಜೆನಾ? ಸುತ್ತೋಲೆ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟನೆ
ರುಪ್ಸಾ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ ಇಂದು (ಭಾನುವಾರ) ರಾಜ್ಯಮಟ್ಟದ ಪದಾಧಿಕಾರಿಗಳ ಸಭೆ ಕರೆದಿತ್ತು. ಸಭೆಯಲ್ಲಿ ಖಾಸಗಿ ಶಾಲೆಗಳ ಸಂಕಷ್ಟ, ಸರ್ಕಾರ ಸ್ಪಂದಿಸದೇ ಇರುವುದರ ಬಗ್ಗೆ ಸುದೀರ್ಘವಾಗಿ ಚರ್ಚೆಯಾಯಿತು. ಈ ಮೊದಲು ಭರವಸೆ ನೀಡಿದಂತೆ ಆರು ಬೇಡಿಕೆಗಳು ಈಗಲೂ ಈಡೇರದೇ ಇರುವ ಹಿನ್ನೆಲೆ ಮತ್ತೆ ರೋಡಿಗಿಳಿದು ಹೋರಾಟ ಮಾಡಲು ನಿರ್ಧರಿಸಿವೆ.
ಸರ್ಕಾರ ಆದೇಶದಂತೆ ಶೇ.70ರಷ್ಟು ಟ್ಯುಷನ್ ಫೀಸು ಕೂಡ ಪೋಷಕರು ಕಟ್ಟುತ್ತಿಲ್ಲ. ಇದರಿಂದ ಶಾಲೆ ನಡೆಸುವುದು ಕಷ್ಟವಿದೆ. ಇದು ಸೇರಿದಂತೆ ಉಳಿದ ಐದು ಬೇಡಿಕೆ ಈಡೇರಿಸಲು ಮಾ.23ರವರೆಗೆ ಸರ್ಕಾರಕ್ಕೆ ರುಪ್ಸಾ ಕರ್ನಾಟಕ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಡೆಡ್ ಲೈನ್ ನೀಡಿದರು. ಸರ್ಕಾರಕ್ಕೆ ಇದಕ್ಕೆ ಸ್ಪಂದಿಸದೇ ಹೋದಲ್ಲಿ ಶಾಲೆ ತೆರೆಯೆಬೇಕೋ ಬಂದ್ ಮಾಡಬೇಕೋ ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಇನ್ನು ಸಭೆಯಲ್ಲಿ ಪ್ರಮುಖವಾಗಿ ರಾಜ್ಯದಲ್ಲಿರುವ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು ಎಂಬ ವಿಚಾರ ಚರ್ಚೆಯಾಯಿತು. ಕೆಲ ತಾಂತ್ರಿಕ ಕಾರಣದಿಂದಾಗಿ ಕಾನೂನು ರೀತಿ ಹೋರಾಟಕ್ಕೆ ರುಪ್ಸಾ ಕರ್ನಾಟಕ ಎಂಬ ಹೆಸರಿನೊಂದಿಗೆ ಹೊಸದಾಗಿ ನೊಂದಣಿ ಮಾಡಿಕೊಂಡು ಹೋರಾಟಕ್ಕೆ ಮುಂದಾಗಿದೆ.
ವಿದ್ಯಾರ್ಥಿಗಳ ಶಾಲೆ ಶುಲ್ಕ: ಪೋಷಕರಿಗೆ ಬಿಗ್ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್
ಕನ್ನಡ ಮಾಧ್ಯಮಗಳ ಖಾಸಗಿ ಶಾಲೆಗಳು ತಮ್ಮನ್ನು ಅನುದಾನ ನೀಡಬೇಕೆಂದು ಒತ್ತಾಯಿಸಿ, ಮಾ.23ರಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡಲು ನಿರ್ಧರಿಸಲಾಯಿತು.
ರುಪ್ಸಾ ಕರ್ನಾಟಕದ ಪ್ರಮುಖ 6 ಬೇಡಿಕೆಗಳು
1. ಈ ವರುಷದ ಶೇ.70 ರಷ್ಟು ಬೋಧನಾ ಶುಲ್ಕ ಕಟ್ಟುವಂತೆ ಪೋಷಕರಿಗೆ ಸೂಚನೆ ನೀಡಬೇಕು.
2. 1995 ರಿಂದ 2005ರವರೆಗೆ ಕನ್ನಡ ಮಾಧ್ಯಮ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು.
3. ಕಟ್ಟಡ ಸುರಕ್ಷತಾ ಪ್ರಮಾಣ ಪತ್ರದ ವಿಷಯದಲ್ಲಿ ಹತ್ತು ಸಾವಿರ ಶಾಲೆಗಳು ಬಂದ್ ಆಗಲಿವೆ. ಈ ವಿಚಾರದಲ್ಲಿ ಸರ್ಕಾರ ಪರಿಶೀಲಿಸುವುದು.
4. ಶಿಕ್ಷಕರ ಕಲ್ಯಾಣ ನಿಧಿಯಿಂದ ಖಾಸಗಿ ಶಾಲಾ ಶಿಕ್ಷಕರಿಗೂ ಪರಿಹಾರ ಸಿಗುವಂತೆ ಮಾಡುವುದು.
5. ಬಿಸಿಯೂಟ ಕಾರ್ಯಕ್ರಮವನ್ನ ಅನುದಾನರಹಿತ ಶಾಲಾ ಮಕ್ಕಳಿಗೂ ಯೋಜನೆ ವಿಸ್ತರಿಸಬೇಕು.
6. ಕರ್ನಾಟಕ ಖಾಸಗಿ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು.
ಶುಲ್ಕ ನಿಗದಿ ವಿಚಾರವಾಗಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ರುಪ್ಸಾ ಇದೀಗ ತನ್ನ ಇತರೆ ಬೇಡಿಕೆ ಈಡೇರಿಸುವಂತೆ ಮಾ.23 ಡೆಡ್ ಲೈನ್ ನೀಡಿದೆ. ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತೋ ಕಾದು ನೋಡಬೇಕು.