ಶಾಲಾ ಪಠ್ಯಗಳ ಸಮಗ್ರ ಪರಿಷ್ಕರಣೆ ಈ ವರ್ಷ ಇಲ್ಲ
ಈ ವರ್ಷದ ಮಟ್ಟಿಗೆ ಕೆಲ ವಿವಾದಿತ ಪಠ್ಯವಿಷಯಗಳ ಪಟ್ಟಿ ಮಾಡಿ ಅವುಗಳನ್ನು ಬೋಧನೆ ಮಾಡದಂತೆ ಸುತ್ತೋಲೆ ಹೊರಡಿಸಲು ನಿರ್ಧರಿಸಿದ ಸರ್ಕಾರ
ಬೆಂಗಳೂರು(ಜೂ.14): ಶಾಲಾ ಪಠ್ಯಪುಸ್ತಕಗಳನ್ನು ಸಂಪೂರ್ಣವಾಗಿ ಪರಿಷ್ಕರಿಸುವ ಕೆಲಸಕ್ಕೆ ಈ ವರ್ಷ ಕೈ ಹಾಕದಿರಲು ತೀರ್ಮಾನಿಸಿರುವ ಸರ್ಕಾರ ಈ ವರ್ಷದ ಮಟ್ಟಿಗೆ ಕೆಲ ವಿವಾದಿತ ಪಠ್ಯವಿಷಯಗಳ ಪಟ್ಟಿ ಮಾಡಿ ಅವುಗಳನ್ನು ಬೋಧನೆ ಮಾಡದಂತೆ ಸುತ್ತೋಲೆ ಹೊರಡಿಸಲು ನಿರ್ಧರಿಸಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಪಠ್ಯ ಪರಿಷ್ಕರಣೆ ವಿಚಾರ ಕೂಡ ಚರ್ಚೆಗೆ ಬಂದಾಗ ಮುಖ್ಯಮಂತ್ರಿ ಅವರು ಈ ಮಾಹಿತಿ ನೀಡಿದ್ದು ಸಮಗ್ರ ಪಠ್ಯ ಪರಿಷ್ಕರಣೆಗೆ ಮುಂದಿನ ವರ್ಷ ಸಮಿತಿ ರಚಿಸುವುದಾಗಿ ತಿಳಿಸಿದ್ದಾರೆ.
ಅವನು ಯಾವ ಪಿಹೆಚ್ಡಿ ಮಾಡಿದ್ದಾರೆ? ಸೂಲಿಬೆಲೆ ಪಠ್ಯ ತೆಗೆಯುತ್ತೇವೆ; ಜೂನಿಯರ್ ಖರ್ಗೆ!
ಈಗಾಗಲೇ 2023-24ನೇ ಸಾಲಿಗೆ ಸಂಬಂಧಿಸಿದಂತೆ ಅಗತ್ಯ ಪ್ರಮಾಣದಲ್ಲಿ ಪಠ್ಯಪುಸ್ತಕಗಳ ಮುದ್ರಣ ಹಾಗೂ ಶಾಲೆಗಳಿಗೆ ಅವುಗಳ ಪೂರೈಕೆ ನಡೆದಿದೆ. ಹಾಗಾಗಿ ಆ ಪುಸ್ತಕಗಳನ್ನು ವಾಪಸ್ ಪಡೆದು ಪಠ್ಯ ಪರಿಷ್ಕರಣೆ ಮಾಡಿ ಮಕ್ಕಳಿಗೆ ನೀಡಲು ಹೋದರೆ ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತದೆ. ಹಾಗಾಗಿ ಈ ವರ್ಷದ ಮಟ್ಟಿಗೆ ಸಂಪೂರ್ಣ ಪಠ್ಯ ಪರಿಷ್ಕರಣೆ ಮಾಡುವ ಕೆಲಸಕ್ಕೆ ಹೋಗುವುದಿಲ್ಲ. ಬದಲಿಗೆ ಕೆಲ ವಿವಾದಿತ ಪಠ್ಯ ವಿಷಯಗಳ ಪಟ್ಟಿಮಾಡಿ ಅವುಗಳನ್ನು ಮಕ್ಕಳಿಗೆ ಬೋಧಿಸದಂತೆ ಶಿಕ್ಷಕರಿಗೆ ಸೂಚಿಸಿ ಸುತ್ತೋಲೆ ಹೊರಡಿಸಲು ಶಿಕ್ಷಣ ಇಲಾಖೆ ಕ್ರಮ ವಹಿಸುತ್ತದೆ. ಪಠ್ಯಪರಿಷ್ಕರಣೆಗೆ ಸಮಿತಿಯನ್ನು ಮುಂದಿನ ವರ್ಷ ರಚಿಸುವುದಾಗಿ ಹೇಳಿದರು ಎಂದು ತಿಳಿದು ಬಂದಿದೆ.