ರಾಜ್ಯದಲ್ಲಿಯೂ ಕೊರೋನಾ ಮಹಾಮಾರಿ ಇದೀಗ ಕೊಂಚ ಕೊಂಚ ಮಟ್ಟಿಗೆ ಏರಿಕೆಯಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಸಚಿವ ಸುರೇಶ್ ಕುಮಾರ್ ಶಾಲೆಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. 

ಬೆಂಗಳೂರು (ಮಾ.12):  ಸರ್ಕಾರದ ಆದೇಶ ಮೀರಿ ಒಂದರಿಂದ ಐದನೇ ತರಗತಿವರೆಗಿನ ಮಕ್ಕಳಿಗೂ ತರಗತಿ ಬೋಧನೆ ನಡೆಸುತ್ತಿರುವ ಶಾಲೆಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ರಾಜ್ಯದ ಎಲ್ಲ ಜಿಲ್ಲಾ ಉಪನಿರ್ದೇಶಕರುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಮಕ್ಕಳ ಯೋಗಕ್ಷೇಮಕ್ಕಾಗಿ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಮೀರಲು ಅವಕಾಶವಿಲ್ಲ. ಅನುಮತಿ ಇಲ್ಲದಿದ್ದರೂ 1ರಿಂದ 5ನೇ ತರಗತಿ ಮಕ್ಕಳನ್ನು ಶಾಲೆಗೆ ಕರೆಸಿ ತರಗತಿ ಬೋಧನೆ ಮಾಡುತ್ತಿರುವ ಶಾಲೆಗಳ ವಿರುದ್ಧ ಕಾನೂನಾತ್ಮಕವಾಗಿ ಕಠಿಣ ಕ್ರಮ ಕೈಗೊಳ್ಳಿ ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರ ಪ್ರಸ್ತುತ 6ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಮಾತ್ರ ತರಗತಿ ಬೋಧನೆಗೆ ಅವಕಾಶ ನೀಡಿದೆ. ಆದರೆ, ಕೆಲ ಖಾಸಗಿ ಶಾಲೆಗಳು ಅನುಮತಿ ಇಲ್ಲದ 1ರಿಂದ 5ನೇ ತರಗತಿ ಮಕ್ಕಳಿಗೂ ಶಾಲೆಗೆ ಹಾಜರಾಗುವಂತೆ ಸೂಚಿಸಿ ತರಗತಿ ನಡೆಸುತ್ತಿವೆ. ಅಂತಹ ಶಾಲೆಗಳ ಪರವಾನಗಿ ರದ್ದುಪಡಿಸುವುದು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಟ್ವೀಟ್‌ ಮೂಲಕ ಮನವಿ ಮಾಡಿದ್ದರು.

ಮಹಾ ವೈರಸ್ ಸ್ಫೋಟ : ಮಾ.15ರಿಂದ ಮತ್ತೆ ಲಾಕ್‌ಡೌನ್

ಇದಕ್ಕೆ ಸ್ಪಂದಿಸಿರುವ ಸಚಿವ ಸುರೇಶ್‌ ಕುಮಾರ್‌ ಅವರು, ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಅದರ ಹಿಂದೆ ಮಕ್ಕಳ ಹಿತ, ಯೋಗಕ್ಷೇಮ ಕುರಿತ ಚಿಂತನೆ ಇರುತ್ತದೆ. ಆರೋಗ್ಯ ಇಲಾಖೆಯ ಸಲಹೆಯಂತೆ 1ರಿಂದ 5ನೇ ತರಗತಿ ಮಕ್ಕಳಿಗೆ ತರಗತಿ ಪ್ರಾರಂಭಿಸಲು ಸಮ್ಮತಿ ನೀಡಿಲ್ಲ. ಆದರೂ, ಕೆಲ ಖಾಸಗಿ ಶಾಲೆಗಳಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿ 1ರಿಂದ 5ನೇ ತರಗತಿ ಮಕ್ಕಳಿಗೂ ತರಗತಿ ಬೋಧನೆ ನಡೆಸುತ್ತಿರುವ ಮಾಹಿತಿ ದೊರಕಿದೆ. ಸರ್ಕಾರದ ನಿರ್ಧಾರ, ಆದೇಶವನ್ನು ಮೀರಿ ತಾವೇ ಸ್ವತಃ ನಿರ್ಧಾರ ಕೈಗೊಳ್ಳಲು ಯಾವುದೇ ಶಾಲೆಗಳಿಗೂ ಅವಕಾಶವಿಲ್ಲ. ಅಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಎಲ್ಲ ಜಿಲ್ಲೆಗಳ ಉಪನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.