ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಠ್ಯ ಪರಿಷ್ಕರಣೆ ಸಮಿತಿ ವಿಸರ್ಜನೆ ಮಾಡಿದರೆ ಸಾಲದು. ಪರಿಷ್ಕೃತ ಪಠ್ಯ ಹಿಂಪಡೆಯಬೇಕು ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಎಚ್ಚರಿಕೆ ನೀಡಿದ್ದಾರೆ. 

ಬೆಂಗಳೂರು (ಜೂ.05): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಠ್ಯ ಪರಿಷ್ಕರಣೆ ಸಮಿತಿ ವಿಸರ್ಜನೆ ಮಾಡಿದರೆ ಸಾಲದು. ಪರಿಷ್ಕೃತ ಪಠ್ಯ ಹಿಂಪಡೆಯಬೇಕು. ಇಲ್ಲದಿದ್ದರೆ ಕುವೆಂಪು ಅವರ ಜನ್ಮಸ್ಥಳ ಕುಪ್ಪಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಎಚ್ಚರಿಕೆ ನೀಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಪಠ್ಯ ಪರಿಷ್ಕರಣೆ ಸಮಿತಿ ವಿಸರ್ಜಿಸುವ ಮೂಲಕ ವಿವಾದ ಮುಗಿದಿದೆ ಎಂದು ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ಸರ್ಕಾರದ ಕ್ರಮ ಸ್ವೀಕಾರಾರ್ಹವಲ್ಲ. ಹೀಗಾಗಿ ನಾವು ಹೋರಾಟ ಮುಂದುವರೆಸುತ್ತೇವೆ. ಎಲ್ಲರ ಜತೆಯೂ ಚರ್ಚಿಸಿ ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಹೇಳಿದರು. ಬರಗೂರು ರಾಮಚಂದ್ರಪ್ಪನವರು ಎರಡೂವರೆ ವರ್ಷಗಳ ಕಾಲ ವಿಷಯವಾರು 27 ಸಮಿತಿ ರಚಿಸಿ, ಆಯಾ ವಿಷಯಗಳ ಅತ್ಯುತ್ತಮ ಉಪಾಧ್ಯಾಯರನ್ನು ಸಂಪರ್ಕಿಸಿ ಅಭಿಪ್ರಾಯ ಪಡೆದು ಪರಿಷ್ಕರಣೆ ಮಾಡಿದ್ದರು. ಇನ್ನು ಸಂಘ ಸಂಸ್ಥೆಗಳು, ಸಾಹಿತಿಗಳ ಸಂಘಟನೆಗಳನ್ನು ಚರ್ಚಿಸಿ ತೀರ್ಮಾನ ಮಾಡಿದ್ದರು ಎಂದರು.

ವಿವಾದಗಳ ಸುಳಿಯಲ್ಲಿ Rohith Chakrathirtha, 2016ರ ಟ್ವೀಟ್ ಬಗ್ಗೆ ಭಾರೀ ಚರ್ಚೆ!

ಗೃಹ ಸಚಿವ ಆರಗ ಜೈಲಲ್ಲಿರಬೇಕಿತ್ತು: ಕೇಂದ್ರದಲ್ಲಿ ನೋಡಿದರೆ ಎರಡು ವರ್ಷ ಜೈಲಿನಲ್ಲಿದ್ದವರು ಗೃಹ ಸಚಿವರಾಗಿದ್ದಾರೆ. ಇಲ್ಲಿ ನೋಡಿದರೆ ಇಷ್ಟೆಲ್ಲಾ ಗಲಭೆ ಮಾಡಿದವರು ಗೃಹ ಸಚಿವರಾಗಿದ್ದಾರೆ. ಪಠ್ಯ ಪರಿಷ್ಕರಣೆ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಎನ್‌ಎಸ್‌ಯುಐ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಪ್ರತಿಭಟನೆಗೆ ಬಂಧಿಸುವುದಾದರೆ ಆರಗ ಜ್ಞಾನೇಂದ್ರ ಅವರು ಜೈಲಿನಲ್ಲಿರಬೇಕಿತ್ತು. ಅಷ್ಟೊಂದು ಪ್ರತಿಭಟನೆ, ಗಲಭೆಗಳನ್ನು ಅವರು ನಮ್ಮ ಕ್ಷೇತ್ರದಲ್ಲಿ ಮಾಡಿದ್ದರು ಎಂದು ಕಿಮ್ಮನೆ ರತ್ನಾಕರ್‌ ಕಿಡಿಕಾರಿದರು.

ರೋಹಿತ್‌ ಚಕ್ರತೀರ್ಥ ಸಮಿತಿ ವಜಾಗೊಳಿಸಿಬೇಕು, ಪರಿಷ್ಕೃತ ಪಠ್ಯ ರದ್ದುಗೊಳಿಸಬೇಕು. ಇಲ್ಲದಿದ್ದರೆ ಪಾದಯಾತ್ರೆ ಮಾಡಲು ಸಾಹಿತಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗಿತ್ತು. ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌, ಪ್ರೊ. ಜಿ.ಎಸ್‌. ಸಿದ್ದರಾಮಯ್ಯ ಸೇರಿದಂತೆ ಹಲವರು ಪಾದಯಾತ್ರೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದರು. ಇದೀಗ ಸರ್ಕಾರ ಪರಿಷ್ಕೃತ ಪಠ್ಯ ಹಿಂಪಡೆದು ಹಳೆಯ ಪಠ್ಯವನ್ನೇ ಬೋಧಿಸಬೇಕು. ಪಠ್ಯಪರಿಷ್ಕರಣೆಗೆ ಹೊಸದಾಗಿ ಸಮಿತಿ ರಚಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದರು.

ಭವಿಷ್ಯದೊಂದಿಗೆ ಚೆಲ್ಲಾಟ: ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವುದು ಹೊಟೇಲ್‌ನಲ್ಲಿ ಹೋಗಿ ಬೇಕಾದ ತಿನಿಸು ಖರೀದಿಸದಂತಲ್ಲ. ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಪಠ್ಯ ಪುಸ್ತಕದಲ್ಲಿ ಆಟವಾಡಲು ಮುಂದಾಗುವುದಾದರೆ ಅವರು ಸರ್ಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲ. ಕೇವಲ 2 ತಿಂಗಳಲ್ಲಿ 1ನೇ ತರಗತಿಯಿಂದ 10ನೇ ತರಗತಿಯ ಅಂದರೆ 1 ಕೋಟಿ ವಿದ್ಯಾರ್ಥಿಗಳ ಪಠ್ಯ ಪರಿಷ್ಕರಣೆ ಸಾಧ್ಯವೇ? ಒಂದೇ ಸಮುದಾಯದವರು ಸೇರಿಕೊಂಡು ಇವರಿಗೆ ಬೇಕಾದವರ ಸಾಹಿತಿಗಳ ಬರಹ ಸೇರಿಸಿಕೊಂಡು, ಪ್ರಮುಖರ ಲೇಖನಗಳು, ಮಹಾನ್‌ ವ್ಯಕ್ತಿಗಳ ಇತಿಹಾಸ ಕೈ ಬಿಡುವುದನ್ನು ಒಪ್ಪಲು ಸಾಧ್ಯವೇ ಎದು ಪ್ರಶ್ನಿಸಿದರು.

ಪಠ್ಯವಾಪ್ಸಿ ಪ್ರಶಸ್ತಿ ವಾಪ್ಸಿ ರೀತಿಯ ಹೋರಾಟ: ಸಾಹಿತಿ ಭೈರಪ್ಪ

ಬರಗೂರು ರಾಮಚಂದ್ರಪ್ಪನವರು ಎರಡೂವರೆ ವರ್ಷಗಳ ಕಾಲ ವಿಷಯವಾರು 27 ಸಮಿತಿ ರಚಿಸಿ, ಆಯಾ ವಿಷಯಗಳ ಅತ್ಯುತ್ತಮ ಉಪಾಧ್ಯಾಯರನ್ನು ಸಂಪರ್ಕಿಸಿ ಅಭಿಪ್ರಾಯ ಪಡೆದು ಪರಿಷ್ಕರಣೆ ಮಾಡಿದ್ದರು. ಇನ್ನು ಸಂಘ ಸಂಸ್ಥೆಗಳು, ಸಾಹಿತಿಗಳ ಸಂಘಟನೆಗಳನ್ನು ಚರ್ಚಿಸಿ ತೀರ್ಮಾನ ಮಾಡಿದ್ದರು. ನಂತರ ಅದರಲ್ಲಿ ನ್ಯೂನತೆ ಇದ್ದರೆ ಅದನ್ನು ಸರಿಪಡಿಸುವುದಾಗಿಯೂ ಹೇಳಿದ್ದಾರೆ. ಇದ್ದೆಲ್ಲದರ ನಂತರ ಈ ಪಠ್ಯ ಜಾರಿಗೊಳಿಸುವ ಮುನ್ನ ಶಾಸನ ಸಭೆ, ವಿಧಾನ ಪರಿಷತ್‌ನಲ್ಲಿ ಚರ್ಚೆ ಆಗಿದೆ. ಅಲ್ಲಿ ಬಿಜೆಪಿ ನಾಯಕರು ಸೇರಿದಂತೆ ಎಲ್ಲರೂ ಚರ್ಚೆ ಮಾಡಿದ್ದಾರೆ. ಈ ಎರಡೂ ಸದನದಲ್ಲಿ ಒಪ್ಪಿದ ನಂತರ ಈ ಪಠ್ಯ ಜಾರಿಗೆ ತರಲಾಗಿತ್ತು. ಹೀಗಿರುವಾಗಿ ಈ ಸಮಿತಿಯ ಕಾರ್ಯವೈಖರಿಯನ್ನು ಒಪ್ಪಲು ಸಾಧ್ಯವೇ ಎಂದು ಕಿಡಿ ಕಾರಿದರು.