ಬೆಂಗಳೂರು ವಿಶ್ವವಿದ್ಯಾಲಯ ನಡೆಸಿದ ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು,  ಹೈಕೋರ್ಟ್ ನೋಟಿಸ್‌ ಜಾರಿಗೊಳಿಸಿದೆ.

ಬೆಂಗಳೂರು (ಜು.4): ಬೆಂಗಳೂರು ವಿಶ್ವವಿದ್ಯಾಲಯ ನಡೆಸಿದ ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಹೊಸದಾಗಿ ಪರೀಕ್ಷೆ ನಡೆಸಲು ಆದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಬೆಂಗಳೂರು ವಿವಿಗೆ ಹೈಕೋರ್ಟ್ ನೋಟಿಸ್‌ ಜಾರಿಗೊಳಿಸಿದೆ. ಈ ಕುರಿತಂತೆ ಆದಿ ಮಂಜುನಾಥ್‌ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ಪೀಠ ಈ ಆದೇಶ ಮಾಡಿ ವಿಚಾರಣೆ ಮುಂದೂಡಿದೆ.

Add Asianetnews Kannada as a Preferred SourcegooglePreferred

ಪಿಎಚ್‌ಡಿ ಪ್ರವೇಶಕ್ಕೆ 2023ರ ಏ.13ರಂದು ನಡೆದ ಪರೀಕ್ಷೆ ವೇಳೆ ಹಲವು ಕೇಂದ್ರಗಳಲ್ಲಿ ಅಕ್ರಮಗಳು ನಡೆದಿವೆ. ಪರೀಕ್ಷಾರ್ಥಿಗಳ ಗುರುತಿನ ಚೀಟಿ ಪರಿಶೀಲಿಸದೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಕೆಲ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮೊಬೈಲ್‌ ತೆಗೆದುಕೊಂಡು ಹೋಗಿದ್ದಾರೆ. ಮೊಬೈಲ್‌ನಲ್ಲಿ ಉತ್ತರಗಳನ್ನು ಹುಡುಕಿ ಬರೆದಿದ್ದಾರೆ. ಈಗಾಗಲೇ ಪಿಎಚ್‌ಡಿ ಮಾಡುತ್ತಿರುವ ವಿದ್ಯಾರ್ಥಿಗಳು ಸಹ ಪರೀಕ್ಷಾ ಕೇಂದ್ರದೊಳಗೆ ತೆರಳಿ, ಅಕ್ರಮ ನಡೆಯಲು ನೆರವು ನೀಡಿದ್ದಾರೆ. ಆದ್ದರಿಂದ ಏ.13ರಂದು ನಡೆಸಿದ ಪರೀಕ್ಷೆ ರದ್ದುಪಡಿಸಲು ಅರ್ಜಿದಾರರು ಕೋರಿದ್ದಾರೆ.

ಹಕ್ಕುಚ್ಯುತಿ: ವರದಿ ನೀಡಲು ಬೆಂ.ವಿವಿ ಕುಲಪತಿಗೆ ಸೂಚನೆ
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್‌.ಎಸ್‌.ಜಯಕರ ಅವರ ವಿರುದ್ಧ ವಿಧಾನ ಪರಿಷತ್‌ ಉಪಸಭಾಪತಿ ಎಂ.ಕೆ.ಪ್ರಾಣೇಶ್‌ ಅವರು ಸಲ್ಲಿಸಿರುವ ಹಕ್ಕುಚ್ಯುತಿ ಸೂಚನೆಗೆ ವಿವರಣೆ ನೀಡಿ ವರದಿ ಸಲ್ಲಿಸುವಂತೆ ವಿಶ್ವವಿದ್ಯಾಲಯದ ಕುಲಸಚಿವರಿಗೆ ಉನ್ನತ ಶಿಕ್ಷಣ ಇಲಾಖೆ ಇತ್ತೀಚೆಗೆ ಸೂಚಿಸಿದೆ.

ಮುಂಬೈನಲ್ಲೂ ಉಡುಪಿ ರೀತಿ ಹಿಜಾಬ್ ವಿವಾದ, ಕಾಲೇಜಲ್ಲಿ ಬುರ್ಖಾಗೆ ಬ್ರೇಕ್‌

ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು ಕಳೆದ ಮಾರ್ಚ್ 17ರಂದು ಚರ್ಚೆಗೆ ಬರುವಂತೆ ಕುಲಪತಿ ಅವರಿಗೆ ತಿಳಿಸಿದ್ದರೂ ಬಂದಿಲ್ಲ. ಜೊತೆಗೆ ಯಾವುದೇ ಪತ್ರವನ್ನೂ ಕಳುಹಿಸದೆ ಉದ್ದಟತನ ತೋರಿದ್ದಾರೆ. ಅಲ್ಲದೆ, ಅವರ ಕಚೇರಿ ದೂರವಾಣಿ ಹಾಗೂ ಮೊಬೈಲ್‌ ಮೂಲಕ ಹಲವು ಬಾರಿ ಸಂಪರ್ಕಿಸಲು ಪ್ರಯತ್ನಿಸಿದರೂ ಸ್ಪಂದಿಸದೆ ಅಸಡ್ಡೆ ತೋರಿದ್ದಾರೆ. ಈ ಮೂಲಕ ಕುಲಪತಿ ಅವರು ಪೀಠಾಧಿಕಾರಿ ಹುದ್ದೆಯಾದ ಉಪಸಭಾಪತಿ ಹುದ್ದೆಗೆ ಅಗೌರವ ತೋರಿರುವ ಕಾರಣ ಹಕ್ಕುಚ್ಯುತಿ ಸೂಚನೆಯನ್ನು ಸಭಾಪತಿ ಅವರಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಈ ಸಂಬಂಧ ವರದಿ ಕಳುಹಿಸಲು ಸರ್ಕಾರಕ್ಕೂ ಪತ್ರ ಬರೆದಿದ್ದಾರೆ. ಹಾಗಾಗಿ ಪತ್ರ ತಲುಪಿದ ಮುಂದಿನ ಮೂರು ದಿನಗಳಲ್ಲಿ ವರದಿ ಕಳಹಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆ ಕುಲಸಚಿವರಿಗೆ ನಿರ್ದೇಶಿಸಿದೆ.

PHD ಪ್ರವೇಶ ಪರೀಕ್ಷೆಯಲ್ಲಿ ನಟಿ ಪವಿತ್ರಾ ಲೋಕೇಶ್ ಪಾಸ್‌!