ರಾಜ್ಯದಲ್ಲಿ ಪ್ರಸಕ್ತ ಸಾಲಿನಿಂದಲೇ 5ನೇ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೂಲಕ ಮೌಲ್ಯಾಂಕನ ಪರೀಕ್ಷೆ ನಡೆಸುವುದಾಗಿ ಘೋಷಿಸಿದ್ದ ಶಿಕ್ಷಣ ಇಲಾಖೆ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿದೆ.

ಬೆಂಗಳೂರು (ಫೆ.24): ರಾಜ್ಯದಲ್ಲಿ ಪ್ರಸಕ್ತ ಸಾಲಿನಿಂದಲೇ 5ನೇ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೂಲಕ ಮೌಲ್ಯಾಂಕನ ಪರೀಕ್ಷೆ ನಡೆಸುವುದಾಗಿ ಘೋಷಿಸಿದ್ದ ಶಿಕ್ಷಣ ಇಲಾಖೆಯು ಗುರುವಾರ ಎರಡೂ ತರಗತಿಗಳ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿದೆ. ಈ ವೇಳಾಪಟ್ಟಿ ಪ್ರಕಾರ 8ನೇ ತರಗತಿಗೆ ಮಾ. 13ರಿಂದ ಮಾ. 18ರವರೆಗೆ, 5ನೇ ತರಗತಿಗೆ ಮಾ.15ರಿಂದ ಮಾ. 18ರವರೆಗೆ ಪರೀಕ್ಷೆಗಳು ನಡೆಯಲಿದೆ. ಮಾ.6ರಿಂದ 10ರವರೆಗೆ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಿರ್ವಹಿಸಲು ಸೂಚಿಸಿದೆ. ಎಲ್ಲ ಪರೀಕ್ಷೆಗಳು ಮಧ್ಯಾಹ್ನ 2.30ರಿಂದ 4.30ರವರೆಗೆ ನಡೆಸಬೇಕು ಎಂದು ಸೂಚಿಸಿದೆ. ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ನಡೆಯಲಿದೆ.

Add Asianetnews Kannada as a Preferred SourcegooglePreferred

5ನೇ ತರಗತಿ ವೇಳಾಪಟ್ಟಿ ವಿವರ ಇಂತಿದೆ:
ಮಾ.15- ಪ್ರಥಮ ಭಾಷೆ (ಕನ್ನಡ, ಇಂಗ್ಲೀಷ್‌, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು)
ಮಾ.16- ಗಣಿತ
ಮಾ.17- ಪರಿಸರ ಅಧ್ಯಯನ
ಮಾ.18- ದ್ವಿತೀಯ ಭಾಷೆ (ಇಂಗ್ಲೀಷ್‌, ಕನ್ನಡ)

8ನೇ ತರಗತಿ ವೇಳಾಪಟ್ಟಿ ವಿವರ ಇಂತಿದೆ:
ಮಾ.13- ಪ್ರಥಮ ಭಾಷೆ (ಕನ್ನಡ, ಇಂಗ್ಲೀಷ್‌, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ)
ಮಾ.14- ದ್ವಿತೀಯ ಭಾಷೆ (ಇಂಗ್ಲೀಷ್‌, ಕನ್ನಡ)
ಮಾ.15- ತೃತೀಯ ಭಾಷೆ (ಹಿಂದಿ, ಕನ್ನಡ, ಇಂಗ್ಲೀಷ್‌, ಅರೇಬಿಕ್‌, ಪರ್ಷಿಯನ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು)
ಮಾ.16 - ಗಣಿತ
ಮಾ.17 - ವಿಜ್ಞಾನ
ಮಾ.18- ಸಮಾಜ ವಿಜ್ಞಾನ

ಮೌಲ್ಯಂಕನ ಪರೀಕ್ಷೆಗೂ ಮುನ್ನ ದಿನಾಂಕ ಮಾರ್ಚ್ 6 ರಿಂದ ಮಾರ್ಚ್ 10 ವರೆಗೆ ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಿರ್ವಹಿಸಲು ಮಂಡಲಿ ಸೂಚನೆ ನೀಡಿದೆ.

ಫೆ.25 ಮತ್ತು 26 ರಂದು KPSC Exam, ಧಾರವಾಡ-ಹುಬ್ಬಳ್ಳಿಯಲ್ಲಿ 51 ಪರೀಕ್ಷಾ ಕೇಂದ್ರಗಳು

ಎಸ್ಸೆಸ್ಸೆಲ್ಸಿ ಪ್ರಿಪರೇಟರಿ ಪರೀಕ್ಷೆಗೂ ಬೋರ್ಡ್‌ನಿಂದಲೇ ಪ್ರಶ್ನೆಪತ್ರಿಕೆ
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಮಾದರಿಯಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಗೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ(ಕೆಎಸ್‌ಇಎಬಿ) ಹಂತದಲ್ಲೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ನೀಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚಿಸಿದೆ. ಈ ಮೊದಲು ಬಿಇಒಗಳ ಹಂತದಲ್ಲೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿಕೊಳ್ಳಲು ಆದೇಶಿಸಲಾಗಿತ್ತು. ಆದರೆ, ಇಲಾಖೆಯ ಸಚಿವರಾದ ಬಿ.ಸಿ.ನಾಗೇಶ್‌ ಅವರು ಪೂರ್ವ ಸಿದ್ಧತಾ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನೂ ಮಂಡಳಿಯಿಂದಲೇ ಸಿದ್ಧಪಡಿಸಿ ನೀಡಲು ಕ್ರಮ ವಹಿಸುವಂತೆ ಸೂಚಿಸಿ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಇತ್ತೀಚೆಗೆ ಟಿಪ್ಪಣಿ ಹೊರಡಿಸಿದ್ದರು. ಅದರಂತೆ ಅಧಿಕಾರಿಗಳು ಕ್ರಮ ವಹಿಸಿದ್ದಾರೆ.

ಹೈಕೋರ್ಟ್ ಆದೇಶ, ವಾರದಲ್ಲಿ 15 ಸಾವಿರ ಶಿಕ್ಷಕರ ಹೊಸ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಕ್ಕೆ ನಿರ್ಧಾರ

ಕೆಎಸ್‌ಇಎಬಿ ಸಿದ್ಧಪಡಿಸಿದ ಪೂರ್ವ ಸಿದ್ಧತಾ ಪ್ರಶ್ನೆ ಪತ್ರಿಕೆಗಳನ್ನು ಎಲ್ಲಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ಲಾಗಿನ್‌ಗೆ ಕಳುಹಿಸಬೇಕು. ಬಿಇಒಗಳು ಆ ಪ್ರಶ್ನೆ ಪತ್ರಿಕೆಗಳನ್ನು ತಮ್ಮ ಹಂತದಲ್ಲಿ ಮುದ್ರಿಸಿ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಲು ಕ್ರಮ ವಹಿಸಬೇಕು. ಪೂರ್ವ ಸಿದ್ಧತಾ ಪರೀಕ್ಷೆಗೆ ಪ್ರತಿ ವಿದ್ಯಾರ್ಥಿಯಿಂದ 50 ರು. ಸಂಗ್ರಹಿಸಿ ಆಯಾ ಶಾಲಾ ಪ್ರಾಂಶುಪಾಲರು ಬಿಇಒಗಳ ಬ್ಯಾಂಕ್‌ ಖಾತೆಗೆ ಜಮೆ ಮಾಡಬೇಕು. ಬಿಇಒಗಳು ಪರೀಕ್ಷಾ ಶುಲ್ಕ ಸ್ವೀಕರಿಸಿದ ಮತ್ತು ಪರೀಕ್ಷಾ ಖರ್ಚು-​ವೆಚ್ಚಗಳ ಬಗ್ಗೆ ಲೆಕ್ಕಪತ್ರ ನಿರ್ವಹಿಸಿ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಆದೇಶಿಸಲಾಗಿದೆ.