Asianet Suvarna News Asianet Suvarna News

ವಿದ್ಯಾರ್ಥಿಗಳಿಗೆ ಸಿಗಲಿದೆ ಅತ್ಯಾಧುನಿಕ ಟ್ಯಾಬ್‌..!

ಡಿಗ್ರಿ ಕಾಲೇಜುಗಳಲ್ಲಿ 8000 ಸ್ಮಾರ್ಟ್‌ ಕ್ಲಾಸ್‌| ಕೊರೋನಾ ಬಳಿಕ ಕಲಿಕಾ ಮಾದರಿ ಬದಲು| ಡಿಜಿಟಲ್‌ ಕಲಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಮಾನ್ಯ ಕೊಠಡಿಗಳನ್ನು ಸ್ಮಾರ್ಟ್‌ಕ್ಲಾಸ್‌ ಕೊಠಡಿಗಳಾಗಿ ಪರಿವರ್ತನೆ| ಉದ್ಯೋಗ ಸೃಷ್ಟಿಯಲ್ಲಿ ಬೆಂಗಳೂರು ನಂ.1| 

High Quality Tab for Students Says DCM Ashwathnarayan grg
Author
Bengaluru, First Published Feb 19, 2021, 10:10 AM IST

ಬೆಂಗಳೂರು(ಫೆ.19): ಕಾಲೇಜುಗಳಿಗೆ ಹೈಸ್ಪೀಡ್‌ ಇಂಟರ್‌ನೆಟ್‌ ನೀಡಿ, ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಗುಣಮಟ್ಟದ ಟ್ಯಾಬ್‌ ವಿತರಣೆ ಮಾಡಿ, ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಕಾಲೇಜುಗಳ ಸುಮಾರು 8 ಸಾವಿರ ಸಾಮಾನ್ಯ ಕೊಠಡಿಗಳನ್ನು ‘ಸ್ಮಾರ್ಟ್‌ಕ್ಲಾಸ್‌ ಕೊಠಡಿ’ಗಳಾಗಿ ಪರಿವರ್ತಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ನಗರದ ಕಲಾ ಕಾಲೇಜಿನಲ್ಲಿ ಗುರುವಾರ ನೂತನ ಜಿಮ್‌ ಹೌಸ್‌ ಹಾಗೂ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೋನಾ ಬಳಿಕ ಕಲಿಕಾ ಮಾದರಿ ಬದಲಾಗಿದೆ. ಆದ್ದರಿಂದ ಡಿಜಿಟಲ್‌ ಕಲಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಮಾನ್ಯ ಕೊಠಡಿಗಳನ್ನು ಸ್ಮಾರ್ಟ್‌ಕ್ಲಾಸ್‌ ಕೊಠಡಿಗಳಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ ಎಂದರು.

ಆರಂಭದ ಹಂತದಲ್ಲಿ ಅಂದರೆ ಮುಂದಿನ ಎರಡು ತಿಂಗಳಿನಲ್ಲಿ 2.500 ಕೊಠಡಿಗಳನ್ನು ಪರಿವರ್ತನೆ ಮಾಡಲಾಗುವುದು. ನಂತರದ ನಾಲ್ಕು ತಿಂಗಳಿನಲ್ಲಿ 5.500 ಕೊಠಡಿಗಳನ್ನು ಸ್ಮಾರ್ಟ್‌ಕ್ಲಾಸ್‌ ಆಗಿ ಪರಿವರ್ತಿಸಲಾಗುವುದು. ಇದರ ಜತೆಗೆ ಹೈಸ್ಪೀಡ್‌ ಇಂಟರ್‌ನೆಟ್‌, ಅತ್ಯಾಧುನಿಕ ಗುಣಮಟ್ಟದ ಟ್ಯಾಬ್‌ ನೀಡುವುದರಿಂದ ವಿದ್ಯಾರ್ಥಿಗಳ ಕಲಿಕೆಯ ಗತಿಯೇ ಬದಲಾಗಲಿದೆ ಎಂದು ತಿಳಿಸಿದರು.

ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೆ ಕ್ರಮ: ಡಿಸಿಎಂ ಅಶ್ವತ್ಥ ನಾರಾಯಣ

ಪಠ್ಯ ಆಯ್ಕೆಯಲ್ಲಿ ಸ್ವಾತಂತ್ರ್ಯ:

ಪ್ರಸಕ್ತ ಸಾಲಿನಿಂದಲೇ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದೆ. ವಿದ್ಯಾರ್ಥಿಗಳು ಪೂರ್ವ ನಿಗದಿತ ವಿಷಯಗಳ ಆಯ್ಕೆ ನಿಯಮ ಕೊನೆಗೊಳ್ಳಲಿದೆ. ತಮಗೆ ಆಸಕ್ತಿ ಇರುವ ಪಠ್ಯವನ್ನು ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡುವ ವ್ಯವಸ್ಥೆ ಬರಲಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಸರ್ಕಾರ ಮಾಡಿಕೊಂಡಿದೆ ಎಂದರು.

ಉದ್ಯೋಗ ಸೃಷ್ಟಿಯಲ್ಲಿ ಬೆಂಗಳೂರು ನಂ.1:

ಬೆಂಗಳೂರು ನಾಲೆಜ್‌ ಸಿಟಿ ಮಾತ್ರವಲ್ಲದೆ ಆವಿಷ್ಕಾರಕ್ಕೂ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಉದ್ಯೋಗ ಸೃಷ್ಟಿಯಲ್ಲಿ ಬೆಂಗಳೂರು ನಗರ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೇವಲ ಔಷಧ ಕ್ಷೇತ್ರವೊಂದರಲ್ಲೇ ಪ್ರತಿ ವರ್ಷ 5 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಿದೆ. ಇತರೆ ಕ್ಷೇತ್ರಗಳಲ್ಲಿ ಎರಡು ಲಕ್ಷ ಸೇರಿ ವರ್ಷಕ್ಕೆ 7 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದರು.

ಇನ್ನು ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಹತ್ತು ದಶಲಕ್ಷ ಉದ್ಯೋಗಳನ್ನು ಸೃಷ್ಟಿಮಾಡುವ ಗುರಿ ಹೊಂದಲಾಗಿದೆ. ಅದಕ್ಕೆ ಪೂರಕವಾಗಿ ದಿನದ 24 ಗಂಟೆ ವಿದ್ಯುತ್‌ ಹಾಗೂ ಎಲ್ಲ ಜಾಗದಲ್ಲಿಯೂ ಹೈಸ್ಪೀಡ್‌ ಇಂಟರ್‌ನೆಟ್‌ ಸಿಗುವ ಹಾಗೆ ಮಾಡಲಾಗುತ್ತಿದೆ ಎಂದು ಹೇಳಿದರು.

ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿ ಈ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಮಾಡುವ ಹಾಗೂ ಉದ್ಯಮಶೀಲತೆ ವಾತಾವರಣವನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿಗೆ ಮಾತ್ರ ಇದು ಸಾಧ್ಯವಾಗುತ್ತಿದೆ. ನಮ್ಮ ರಾಜ್ಯದಲ್ಲಿ ಅತ್ಯುತ್ತಮ ಪ್ರತಿಭೆಗಳು ಹೊರಹೊಮ್ಮುತ್ತಿರುವ ಜತೆಗೆ ಹೊರರಾಜ್ಯಗಳಿಂದ ಪ್ರತಿಭಾವಂತ ಯುವಕರು ನಮ್ಮ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್‌ ಅರ್ಷದ್‌, ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ, ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಟಿ.ಎಂ. ಮಂಜುನಾಥ, ಕಾಲೇಜಿನ ಪ್ರಾಂಶುಪಾಲ ಪ್ರೊ.ಕೋಡದ ರಾಜಶೇಖರಪ್ಪ ಉಪಸ್ಥಿತರಿದ್ದರು.
 

Follow Us:
Download App:
  • android
  • ios