ಶಿವಮೊಗ್ಗದಲ್ಲಿ, ಸಚಿವ ಮಧು ಬಂಗಾರಪ್ಪ ಅವರು 1995ರಿಂದ ಅನುದಾನವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಕನ್ನಡ ಶಾಲೆಗಳಿಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಜೊತೆಗೆ, ಕೆಪಿಎಸ್ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಬಗ್ಗೆಯೂ ಅವರು ಘೋಷಿಸಿದ್ದಾರೆ.

ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, 1995ರಿಂದ ಹತ್ತು ವರ್ಷಗಳ ಕಾಲ ಅನುದಾನವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಕನ್ನಡ ಶಾಲೆಗಳಿಗೆ ರಾಜ್ಯ ಬಜೆಟ್‌ನಲ್ಲಿ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಶಿಕ್ಷಣ ಕ್ಷೇತ್ರದ ಬಲವರ್ಧನೆ ಸರ್ಕಾರದ ಪ್ರಮುಖ ಗುರಿಯಾಗಿದ್ದು, ಈ ಕುರಿತು ಫೆಬ್ರವರಿ 2ರಂದು ಬಜೆಟ್ ಪೂರ್ವ ಸಭೆಯನ್ನು ಕರೆಯಲಾಗಿದೆ ಎಂದು ಅವರು ಹೇಳಿದರು.

Add Asianetnews Kannada as a Preferred SourcegooglePreferred

ಕೆಪಿಎಸ್ ಶಾಲೆಗಳಲ್ಲಿ ಶಿಕ್ಷಕರ ನೇಮಕಕ್ಕೆ ಕ್ರಮ

ಸರ್ಕಾರಿ ಕೆಪಿಎಸ್ (KPS) ಶಾಲೆಗಳ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ, ಆಹಾರ ಸಂಗೀತ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಕಲಾ ಶಿಕ್ಷಕರ ನೇಮಕಾತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಈ ಮಹತ್ವದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರು ಶಿವಮೊಗ್ಗದಿಂದಲೇ ಅಧಿಕೃತ ಚಾಲನೆ ನೀಡಲಿದ್ದಾರೆ ಎಂಬುದನ್ನೂ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.

1995ರಿಂದ 2005ರವರೆಗೆ ಸುಮಾರು 10 ವರ್ಷಗಳ ಕಾಲ ಅನುದಾನವಿಲ್ಲದೆ ಕಾರ್ಯನಿರ್ವಹಿಸಿದ ಶಾಲೆಗಳಿಗೆ ನ್ಯಾಯ ಒದಗಿಸಬೇಕೆಂಬ ಉದ್ದೇಶದಿಂದ ಅನುದಾನ ನೀಡುವಂತೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಿಕ್ಷಣ ಇಲಾಖೆಗೆ ಎಷ್ಟು ಅನುದಾನ ಲಭ್ಯವಾಗುತ್ತದೆ ಎಂಬುದು ಬಜೆಟ್ ಅಧಿವೇಶನದಲ್ಲಿ ಸ್ಪಷ್ಟವಾಗಲಿದೆ ಎಂದು ಅವರು ಹೇಳಿದರು.

ಬೀದರ್ ಸರ್ಕಾರಿ ಶಾಲೆಯ ಅನುದಾನ ದುರ್ಬಳಕೆ ವಿಚಾರ

ಬೀದರ್‌ನಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ಸುಮಾರು 1.5 ಕೋಟಿ ರೂ. ಅನುದಾನದ ದುರ್ಬಳಕೆ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, “ರಾಜ್ಯದಲ್ಲಿ ಸುಮಾರು 46 ಸಾವಿರಕ್ಕೂ ಹೆಚ್ಚು ಶಾಲೆಗಳಿವೆ. ಇಂತಹ ದೊಡ್ಡ ವ್ಯವಸ್ಥೆಯಲ್ಲಿ ಕೆಲವೊಂದು ಚಿಕ್ಕ ಮಟ್ಟದ ಅಕ್ರಮಗಳು ಸಂಭವಿಸಬಹುದು. ಆದರೆ ಯಾವುದೇ ಅಕ್ರಮವನ್ನು ಸರ್ಕಾರ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದರು.

ತರೀಕೆರೆಯ ದ್ವೇಷ ಭಾಷಣ ಪ್ರಕರಣದ ಬಗ್ಗೆ ಸ್ಪಷ್ಟನೆ

ತರೀಕೆರೆಯಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೋಟಿಸ್ ನೀಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, “ಯಾರೇ ಆಗಲಿ ದ್ವೇಷ ಭಾಷಣ ಮಾಡಿದರೆ ಅದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಹೊಸ ಕಾನೂನು ರೂಪುಗೊಂಡಿದೆ. ಅದು ಸರ್ಕಾರಿ ಆದೇಶವಾಗಿ ಜಾರಿಯಾಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಪರಿಶೀಲನೆ ಅಗತ್ಯವಿದೆ. ಕಾನೂನು ಜಾರಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಕೆಲ ಮಟ್ಟಿಗೆ ಮಾಹಿತಿ ಕೊರತೆ ಉಂಟಾಗಿರಬಹುದು” ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ತರೀಕೆರೆ ಪ್ರಕರಣದ ಹಿನ್ನೆಲೆಯನ್ನು ಪರಿಶೀಲಿಸುವುದಾಗಿ ತಿಳಿಸಿದ ಅವರು, “ಹೊಸ ಕಾನೂನು ರೂಪಿಸಿದ ಬಳಿಕ ಕಾನೂನು ಯಾವಾಗಲೂ ಮೇಲುಗೈ ಸಾಧಿಸಬೇಕು. ಕಾನೂನಿನ ವ್ಯಾಪ್ತಿಯಲ್ಲಿಯೇ ಎಲ್ಲರನ್ನೂ ನಿಯಂತ್ರಣದಲ್ಲಿಡಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

ಶಿವಮೊಗ್ಗದಲ್ಲಿ ಕಲಾ ವಸ್ತುಗಳ ಪ್ರದರ್ಶನ – ಡಿಜಿಟಲ್ ವೇದಿಕೆಗೆ ಚಾಲನೆ

ಶಿವಮೊಗ್ಗ ಜಿಲ್ಲೆಯಲ್ಲಿ ಕಲಾ ವಸ್ತುಗಳ ಪ್ರದರ್ಶನಕ್ಕೆ ವಿಶೇಷ ಮಹತ್ವ ನೀಡಲಾಗಿದ್ದು, ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಶೀಘ್ರದಲ್ಲೇ ವಿಶೇಷ ವೆಬ್‌ಸೈಟ್‌ಗೆ ಚಾಲನೆ ನೀಡಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು. ಕ್ಯೂಆರ್ ಕೋಡ್ ಮೂಲಕ ವೆಬ್‌ಸೈಟ್‌ಗೆ ಪ್ರವೇಶಿಸುವ ವ್ಯವಸ್ಥೆ ಇರಲಿದ್ದು, ಪ್ರತಿಯೊಂದು ಕಲಾ ವಸ್ತುವಿನ ಹಿಂದಿನ ಕಥೆ, ಶ್ರಮ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ವಿವರಿಸಲಾಗುತ್ತದೆ. “ಒಂದು ಸಣ್ಣ ಕಲಾಕೃತಿಯ ಹಿಂದೆಯೂ ಅಪಾರ ಶ್ರಮ ಅಡಗಿದೆ. ಆ ಶ್ರಮಕ್ಕೆ ಯೋಗ್ಯ ಮೌಲ್ಯ ದೊರಕಬೇಕು. ಈ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಮಲೆನಾಡಿನ ‘ಕ್ರಾಫ್ಟ್ಸ್ ಆಫ್ ಮಲೆನಾಡ್’ ದೇಶ–ವಿದೇಶಗಳಲ್ಲಿ ರಾಯಭಾರಿಯಾಗಿ ಗುರುತಿಸಿಕೊಳ್ಳಲಿದೆ” ಎಂದು ಅವರು ಹೇಳಿದರು.

ಕಲಾವಿದರ ಬದುಕಿಗೆ ಬಲ, ಮುಂದಿನ ಪೀಳಿಗೆಗೆ ಸಂಸ್ಕೃತಿ ವರ್ಗಾವಣೆ

ಈ ಪ್ರದರ್ಶನದಿಂದ ಕಲಾವಿದರ ಕಲೆಗೆ ಮಾರುಕಟ್ಟೆ ಸಿಗುವುದರ ಜೊತೆಗೆ, ಅವರ ಜೀವನೋಪಾಯಕ್ಕೂ ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು. ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಕಲಾ ವಸ್ತುಗಳ ಪ್ರದರ್ಶನಕ್ಕೆ ಮಾಧ್ಯಮಗಳ ಪ್ರಚಾರ ಸಿಕ್ಕರೆ ಮತ್ತಷ್ಟು ಲಾಭವಾಗುತ್ತದೆ ಎಂದು ಆಶಿಸಿದರು. “ದೇಶ ಹಾಗೂ ವಿದೇಶಗಳಲ್ಲಿ ಮಾರಾಟವಾಗುವ ಮಟ್ಟದ ಕಲಾ ವಸ್ತುಗಳು ಇಲ್ಲಿ ಲಭ್ಯವಿವೆ. ಶಾಲಾ ಮಕ್ಕಳಿಗೆ ರಜೆಯ ಸಮಯದಲ್ಲಿ ಇಂತಹ ಪ್ರದರ್ಶನಗಳನ್ನು ಆಯೋಜಿಸಿದರೆ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡುತ್ತದೆ. ಇಂತಹ ಕಲೆಗಳು ಮುಂದಿನ ಪೀಳಿಗೆಗೆ ವರ್ಗಾವಣೆಯಾಗಲು ಶಾಲೆಗಳೇ ಪ್ರಮುಖ ವೇದಿಕೆ” ಎಂದು ಹೇಳಿದರು. ಕೊನೆಯಲ್ಲಿ, “ನಮ್ಮ ಸಂಸ್ಕೃತಿಯಲ್ಲಿ ಕಾರ್ಯಕುಶಲ ಕಲೆ ಕೇವಲ ಉದ್ಯೋಗವಲ್ಲ, ಅದು ಒಂದು ಜೀವಂತ ಸಂಸ್ಕೃತಿ” ಎಂದು ಮಧು ಬಂಗಾರಪ್ಪ ಹೇಳಿದರು.