ಡೌಟ್‌ ಕ್ಲಿಯರ್‌ ಮಾಡ್ಕೋಲಿಕ್ಕಂತ ಮೊಬೈಲ್‌ ಮೊರೆ ಹೋಗಬ್ಯಾಡ್ರಿ, ನಿಮ್ಮ ಶಂಕೆಗಳೇನಿದ್ರೂ ಅದನ್ನೇ ಲೆಕ್ಚರ್‌ಗೆ ಕೇಳಿ, ಮೊಬೈಲ್‌ ಮುಟ್ಟಬ್ಯಾಡ್ರಿ. ಅದರಿಂದ ಏನೂ ಹೊಸ ವಿಚಾರ ಗೊತ್ತಾಗೋದಿಲ್ಲ. ಕ್ಲಾಸ್‌ ತಪ್ಪಿಸಬ್ಯಾಡ್ರಿ, ಕೂಲ್‌ ಆಗಿದ್ದು ಓದ್ರಿ, ಓದಿನಲ್ಲಿ ನಿರಂತರತೆ ಇರಲಿ’ ಈ ಬಾರಿ ಪರೀಕ್ಷೆ ಬರೆಯೋರಿಗೆ ನೀಟ್‌-2022 ಟಾಪರ್‌ಗಳು ಹೇಳಿರುವ ಕಿವಿಮಾತುಗಳಿವು

ಕಲಬುರಗಿ (ಸೆ.11) : ಡೌಟ್‌ ಕ್ಲಿಯರ್‌ ಮಾಡ್ಕೋಲಿಕ್ಕಂತ ಮೊಬೈಲ್‌ ಮೊರೆ ಹೋಗಬ್ಯಾಡ್ರಿ, ನಿಮ್ಮ ಶಂಕೆಗಳೇನಿದ್ರೂ ಅದನ್ನೇ ಲೆಕ್ಚರ್‌ಗೆ ಕೇಳಿ, ಮೊಬೈಲ್‌ ಮುಟ್ಟಬ್ಯಾಡ್ರಿ. ಅದರಿಂದ ಏನೂ ಹೊಸ ವಿಚಾರ ಗೊತ್ತಾಗೋದಿಲ್ಲ. ಕ್ಲಾಸ್‌ ತಪ್ಪಿಸಬ್ಯಾಡ್ರಿ, ಕೂಲ್‌ ಆಗಿದ್ದು ಓದ್ರಿ, ಓದಿನಲ್ಲಿ ನಿರಂತರತೆ ಇರಲಿ’ ಈ ಬಾರಿ ಪರೀಕ್ಷೆ ಬರೆಯೋರಿಗೆ ನೀಟ್‌-2022 ಟಾಪರ್‌ಗಳು ಹೇಳಿರುವ ಕಿವಿಮಾತುಗಳಿವು. ಇಲ್ಲಿನ ಎಸ್ಬಿಆರ್‌ ಕಾಲೇಜಿನಲ್ಲಿ ಈ ಬಾರಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ 21 ಮಕ್ಕಳು 600ಕ್ಕೂ ಅಧಿಕ ಅಂಕ ಗಳಿಸಿ ಗಮನ ಸೆಳೆದಿದ್ದಾರೆ. ಇದೇ ಖುಷಿಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಇವರನ್ನೆಲ್ಲ ಆತ್ಮೀಯವಾಗಿ ಕಾಲೇಜಿಗೆ ಕರೆದು ಸಿಹಿ ನೀಡಿ ಸನ್ಮಾನಿಸಿತಲ್ಲದೆ ಸುದ್ದಿಗೋಷ್ಠಿ ಆಯೋಜಿಸಿ ಅವರು ತಮ್ಮ ಅಧ್ಯಯನದ ಅನುಭವ ಹೇಳಿಕೊಳ್ಳುವಂತೆ ಮಾಡಿತ್ತು.

NEET ಪರೀಕ್ಷೆಯಲ್ಲಿ ಬಲವಂತದಿಂದ ಒಳ ಉಡುಪು ಬಿಚ್ಚಿಸಿದ್ದ ಪ್ರಕರಣ; ಮರು ಪರೀಕ್ಷೆಗೆ ಅವಕಾಶ

ನೀಟ್‌ನಲ್ಲಿ 650 ಅಂಕ ಪಡೆದು ಜಿಲ್ಲೆಗೇ ಮೊದಲಿಗನಾಗಿರುವ ಎಸ್ಬಿಆರ್‌ನ ರಾಕೇಶ ಕಲಾಲ್‌, 643 ಅಂಕ ಪಡೆದು ಗಮನ ಸೆಳೆದಿರುವ ವೈಷ್ಣವಿ ರೆಡ್ಡಿಯವರಂತೂ ಮೊಬೈಲ್‌ ಮುಟ್ಟದೆ ಓದೋದೇ ವಾಸಿ, ಮೊಬೈಲ್‌ ನೋಡೋದರಿಂದ ಅಧ್ಯಯನದ ವಿಷಯಗಳನ್ನೇ ನೋಡಿದರೂ ತುಂಬ ವೇಳೆ ಹಾಳಾಗುತ್ತದೆಂದರಲ್ಲದೆ ಮೊಬೈಲ್‌ ಹಿಡಿದಿದ್ದಕ್ಕೇ ತಮಗೆ ತುಂಬ ಸಮಸ್ಯೆ ಕಾಡಿದ್ದರಿಂದ ತಾವು ಅದನ್ನು ದೂರ ಸರಿಸಿ ಓದಿದಾಗ ಯಶ ಕಂಡೇವು ಎಂದರು.

ಸಂಗೀತ ಕೇಳಲು ಮೊಬೈಲ್‌ ಬಳಸ್ತಿದ್ವಿ:

ನೀಟ್‌ನಲ್ಲಿ 621, 610 ಅಂಕ ಗಳಿಸಿರುವ ಅಭಯ ಹರವಾಳ, ಪ್ರಸಾಂತ ಉಪ್ಪೀನ್‌ ಇವರು ಮೊಬೈಲ್‌ ಅತಿ ಬಳಕೆ ಪಾಯಕಾರಿ, ಓದಿನ ನಡುವೆ ಸಂಗೀತಕ್ಕೆ, ಮನೋರಂಜನೆಗೆ ತುಸು ಬಳಸೋದು ಪರವಾಗಿಲ್ಲ, ತಾವು ಅದನ್ನು ಅಗತ್ಯಕ್ಕೆ ತಕ್ಕಂತೆ ಬಳಸಿದ್ದಾಗಿ ಹೇಳಿದರಲ್ಲದೆ ಅತಿಯಾದರೆ ಅಪಾಯ ಎಂಬುದನ್ನು ಹೇಳಲು ಮರೆಯಲಿಲ್ಲ. 635 ಅಂಕ ಪಡೆದಿರುವ ಸ್ನೇಹಾ ಪಾಟೀಲ್‌ ತಾನು ಆಟ, ಊಟ, ಓಟ, ಮೊಬೈಲ್‌, ಮನೋರಂಜನೆ ಜೊತೆಗೇ ಓದಿದ್ದಾಗಿ ಮೆಲಕು ಹಾಕಿದಳು.

ಪೃಥ್ವಿ ರೆಡ್ಡಿ, ಚಂದ್ರಶೇಖ ರೆಡ್ಡಿ, ಸೃಷ್ಟಿಶ್ರೀಹರಿ, ಗೌಡಪ್ಪಗೌಡ, ಮಂಜರಿ ಕೊಪ್ಪರ್‌, ಸೃಷ್ಟಿಎಸ್ಬಿ, ಮಹೇಶ ರೆಡ್ಡಿ, ಚಾಮುಂಡಿ, ಮಹಾದೇವಿ, ಎಲ್ಲರು ನೀಟ್‌ನಲ್ಲಿ 600ಕ್ಕಿಂತ ಅಧಿಕ ಅಂಕ ಗಳಿಸಿ ಗಮನ ಸೆಳೆದಿದ್ದು ಇವರೆಲ್ಲರೂ ವೈದ್ಯರಾಗುವ ಬಯಕೆ ಹೊಂದಿದ್ದಾಗಿ ಹೇಳಿದರಲ್ಲದೆ ಗ3ಆಮೀಣ ಜನರ ಸವೆಗೂ ತಾವು ಸಿದ್ಧ ಎಂದರು.

ಸ್ಟಡಿ ಅವರ್‌, ಗ್ರ್ಯಾಂಡ್‌ ಟೆಸ್ಟ್‌ ಹೆಚ್ಚು ಗಳಿಕೆಗೆ ನೆರವಾದ್ವು:

ಎಸ್ಬಿಆರ್‌ ಕಾಲೇಜಿನಲ್ಲಿ ಹಾಸ್ಟೇಲ್‌ನಲ್ಲಿದ್ದವರಿಗೆ ಕಾಲೇಜು ನಂತರ 6 ಗಂಟೆಯಿಂದ ರಾತ್ರಿ 10. 30 ರ ವರೆಗೆ ಸ್ಟಡಿ ಅವರ್‌. ಕಾಲೇಜಿನ ಉಪನ್ಯಾಸಕರೇ ಹಾಜರಿದ್ದು ಮಕ್ಕಳ ಓದಿಗೆ ನೆರವಾಗುತ್ತಾರೆ. ಡೌಟ್‌ ಕ್ಲಿಯರ್‌ ಸಹ ಮಾಡುತ್ತಾರೆ. ಇದು ನೀಟ್‌ ಅಂಕ ಗಲಿಕೆಗೆ ನೆರವಾಯ್ತು ಎಂದು ಅನೇಕರು ಹೇಳಿದರು. ಇದಲ್ಲದೆ ಕಾಲೇಜಿನಲ್ಲಿ ವಾರದ ಟೆಸ್ಟ್‌, ಪಠ್ಯವೆಲ್ಲ ಮುಗಿದ ಮೇಲಿನ 2 ತಿಂಗಳ ನಿರಂತರ ಪರೀಕ್ಷೆಗಳು, ಕೊನೆ ಗಳಿಗೆಯ ಗ್ಯ್ರಾಂಡ್‌ ಟೆಸ್ಟ್‌ನಿಂದ, ಉಪನ್ಯಾಸಕರ ಬೋಧನೆಯಿಂದ ಹೆಚ್ಚು ಅನುಕೂಲವಾಯ್ತೆಂದು ಟಾಪ್ಪರ್‌ಗಳು ಹೇಳಿದರು.

ಓದು ಒತ್ತಡ ಅಲ್ಲ, ಸ್ಪರ್ಧಾತ್ಮಕವಾಗಿರಲಿ:

ಎಸ್ಬಿಆರ್‌ನಲ್ಲಿ ಅಂಕಗಲಿಗೆ ಅನುಗುಣವಾಗಿ ತರಗತಿ ಹೊಂದಿಸೋ ಬಗ್ಗೆಯೂ ಮಾತನಾಡಿದ ಮಕ್ಕಳು ಇದರಿಂದ ತಮ್ಮಲ್ಲಿ ಸ್ಪರ್ಧೆ ಮಾಡೋ ಗುಣ ಬೆಳೆಯಿತೆ ವಿನಃ ಇದು ಎಂದಿಗೂ ನಮಗೆ ಒತ್ತಡವಾಗಲೇ ಇಲ್ಲ ಎಂದರಲ್ಲದೆ ಇಂತಹ ಉಪಕ್ರಮಗಳೇ ಇಂದು ತಮ್ಮ ಅಂಕಗಳಿಗೆ ಕಾರಣ ಎಂದರು. ಇಂದು ಬಿಡುಗಡೆಯಾಗಲಿದೆ NEET UG 2022 ಕೀ ಉತ್ತರಗಳು..! ಆಕ್ಷೇಪಣೆ ಸಲ್ಲಿಸಲು ಇಲ್ಲಿದೆ ವಿವರ..

ಕನ್ನಡ ಮಾಧ್ಯಮದ ಮಹಾದೇವಿ ಅಮೋಘ ಸಾಧನೆ

ಚಿಟಗುಪ್ಪದ ಸದ್ಭೋಧಿನಿ ಶಾಲೆಯ ಮಹಾದೇವಿ ಕನ್ನಡ ಮಾಧ್ಯಮ ವಿದ್ಯಾರ್ಥಿನಿಯಾದರೂ ಯಾರಿಗೇನ್‌ ಕಮ್ಮಿ ಇಲ್ಲ ಎಂಬಂತೆ ಎಸ್ಬಿಆರ್‌ನಲ್ಲೇ ಪ್ರವೇಶ ಪಡೆದು ಕಷ್ಟಪಟ್ಟು ಓದಿ ನೀಟ್‌ ಪರೀಕ್ಷೆ ಭೇದಿಸಿ 618 ಅಂಕ ಪಡೆದಿದ್ದಾಳೆ. ಎಸ್ಸೆಸ್ಸೆಲ್ಸಿಯಲ್ಲೇ ವಿಜ್ಞಾನವನ್ನೇ ಓದಬೇಕೆಂಬ ಸಂಕಲ್ಪ ಮಾಡಿದ್ದೆ. ರಜೆಯಲ್ಲಿ ವಿಜ್ಞಾನವನ್ನೇ ಇಂಗ್ಲೀಷ್‌ ಮಾಧ್ಯಮದಲ್ಲಿ ಕಲಿಯೋ ಯತ್ನ ಮಾಡಿದೆ. ಅದು ಇಂದು ಫಲ ನೀಡಿದೆ ಎನ್ನುವ ಮಹಾದೇವಿ ಕನ್ನಡ ಮಾಧ್ಯಮದಲ್ಲಿ ಓದಿದ್ದರಿಂದ ಆರಂಭದಲ್ಲಿ ಕಷ್ಟವಾಯ್ತು, ನಂತರ ಎಲ್ಲವೂ ಸಲೀಸಾಯ್ತು ಎಂದಳು.