Asianet Suvarna News Asianet Suvarna News

ಕೊಡಗು ಸೈನಿಕ ಶಾಲೆಯಲ್ಲಿ ಅಂತರ ನಿಲಯ ಗುಡ್ಡಗಾಡು ಓಟದ ಸ್ಪರ್ಧೆ

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡಿಗೆ ಸೈನಿಕ ಶಾಲೆಯಲ್ಲಿ ಶನಿವಾರ ನಡೆದ 2022-23ನೇ ಸಾಲಿನ ಅಂತರ ನಿಲಯ ಗುಡ್ಡಗಾಡು ಓಟ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿನ ದೈಹಿಕ ಸಾಮರ್ಥ್ಯ, ಸ್ವಯಂ ಪ್ರೇರಣೆ, ಸಾಂಘಿಕ ಹೋರಾಟ ಮತ್ತು ದೃಢತೆಯನ್ನು ಸಾದರಪಡಿಸುವುದಕ್ಕಾಗಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

cross country running competition in kodagu sainik school gow
Author
First Published Dec 10, 2022, 8:27 PM IST

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಡಿ.10): ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡಿಗೆ ಸೈನಿಕ ಶಾಲೆಯಲ್ಲಿ ಶನಿವಾರ ನಡೆದ 2022-23ನೇ ಸಾಲಿನ ಅಂತರ ನಿಲಯ ಗುಡ್ಡಗಾಡು ಓಟ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿನ ದೈಹಿಕ ಸಾಮರ್ಥ್ಯ, ಸ್ವಯಂ ಪ್ರೇರಣೆ, ಸಾಂಘಿಕ ಹೋರಾಟ ಮತ್ತು ದೃಢತೆಯನ್ನು ಸಾದರಪಡಿಸುವುದಕ್ಕಾಗಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.  ಈ ಸ್ಪರ್ಧೆಗೆ ಮುಖ್ಯ ಅತಿಥಿಗಳಾಗಿ ಕರ್ನಲ್ ಇಂದ್ರನೀಲ್ ಘೋಷ್‌ರವರು ಆಗಮಿಸಿ ಚಾಲನೆ ನೀಡಿದರು. ಸೈನಿಕ ಶಾಲೆಯಲ್ಲಿ ನಡೆದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಎ, ಬಿ, ಸಿ, ಡಿ, ಇ ಮತ್ತು ಎಫ್ ಎಂಬ ಆರು ವಿಭಾಗಗಳಲ್ಲಿ ನಡೆದವು.  ‘ಎ’ ವಿಭಾಗದಲ್ಲಿ ಹನ್ನೊಂದು ಮತ್ತು ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಿದ್ದರೆ, ‘ಬಿ’ ವಿಭಾಗದಲ್ಲಿ ಒಂಭತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳು,  ‘ಸಿ’ ವಿಭಾಗದಲ್ಲಿ  ಏಳು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳು, ‘ಡಿ’ ವಿಭಾಗದಲ್ಲಿ ಆರನೇ ತರಗತಿಯ ವಿದ್ಯಾರ್ಥಿಗಳು, ‘ಇ’ ವಿಭಾಗದಲ್ಲಿ ಒಂಭತ್ತರಿಂದ ಹನ್ನೆರಡನೆ ತರಗತಿಯ ವಿದ್ಯಾರ್ಥಿನಿಯರು ಹಾಗೂ ‘ಎಫ್’ ವಿಭಾಗದಲ್ಲಿ ಆರರಿಂದ ಎಂಟನೆ  ತರಗತಿಯ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

‘ಎ’ ವಿಭಾಗಕ್ಕೆ 9 ಕಿ ಮೀ, ‘ಬಿ’ ವಿಭಾಗಕ್ಕೆ 7  ಕಿ ಮೀ, ‘ಸಿ’ ವಿಭಾಗಕ್ಕೆ 5 ಕಿ ಮೀ, ‘ಡಿ’ ವಿಭಾಗಕ್ಕೆ 4 ಕಿ ಮೀ ಹಾಗೂ  ‘ಇ’ ವಿಭಾಗಕ್ಕೆ 4 ಕಿ ಮೀ ಹಾಗೂ ‘ಎಫ್’ ವಿಭಾಗಕ್ಕೆ 4 ಕಿ ಮೀ ದೂರವನ್ನು ನಿಗದಿಪಡಿಸಲಾಗಿತ್ತು. ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಶಾಲೆಯ ಸುಮಾರು 600 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂಧರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಜಿ ಕಣ್ಣನ್‌  ಅವರು ಕ್ರೀಡಾ ಧ್ವಜ ಹಾರಿಸುವ ಮೂಲಕ ಕ್ರೀಡಾ ಸ್ಪರ್ಧೆಗೆ ಚಾಲನೆ ನೀಡಿದರು.

ಈ ಸ್ಪರ್ಧೆಯಲ್ಲಿ ‘ಎ’ ವಿಭಾಗದಿಂದ ಕೆಡೆಟ್ ದರ್ಶನ್ ಎಂ ಪಿ,  ‘ಬಿ’ ವಿಭಾಗದಿಂದ ಕೆಡೆಟ್ ಪ್ರಜ್ವಲ್,  ‘ಸಿ’ ವಿಭಾಗದಿಂದ ಕೆಡೆಟ್ ಸೋಹಮ್, ‘ಡಿ’ ವಿಭಾಗದಿಂದ ಕೆಡೆಟ್ ಆರ್ಯನ್ ಮಾರ್ವಕ್ರರ್              ‘ಇ’ ವಿಭಾಗದಿಂದ ಕೆಡೆಟ್ ಮಾನ್ಯ ‘ಎಫ್’ ವಿಭಾಗದಿಂದ ಕೆಡೆಟ್ ಅನ್ವಿ ಹಾಗೂ ‘ಜಿ’ ವಿಭಾಗದಿಂದ ಕೆಡೆಟ್ ದೀಪ್ತಿ ದೇವಿ ಪ್ರಥಮ ಸ್ಥಾನವನ್ನು ಪಡೆದರು. ಒಟ್ಟಾರೆಯಾಗಿ ಶಾಲೆಯ ಸುಬ್ರತೋ ನಿಲಯವು  2022-23ನೇ ಸಾಲಿನ ಗುಡ್ಡಗಾಡು ಓಟ ಸ್ಪರ್ಧೆಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.

ಮುಖ್ಯ ಅತಿಥಿಗಳಾದ ಕರ್ನಲ್ ಇಂದ್ರನೀಲ್ ಘೋಷ್ ಹಾಗೂ ಶ್ರೀಮತಿ ಸ್ವಾತಿ ಘೋಷ್ ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ವಿತರಿಸಿದರು. ಹಾಗೆಯೇ  ವಿಜೇತ ನಿಲಯವಾದ ಸುಬ್ರತೋ ನಿಲಯಕ್ಕೆ 2022-23ನೇ ಸಾಲಿನ ಗುಡ್ಡಗಾಡು ಓಟ ಸ್ಪರ್ಧೆಯ ಚಾಂಪಿಯನ್ ಪಾರಿತೋಷಕವನ್ನು ನೀಡಿ ಗೌರವಿಸಿದರು.

ಸಲಾಂ ಸೈನಿಕ: ಇದು ವೀರಯೋಧ ಮಹೇಶ್‌ ಸಾಹಸಗಾಥೆ

ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಜಿ ಕಣ್ಣನ್‌ರವರು ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು. ಹಾಗೆಯೇ ಪ್ರಸ್ತುತ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತೋರಿದ ಅಸಾಧಾರಣ ಸಾಮರ್ಥ್ಯವನ್ನು ಪ್ರಶಂಸಿಸಿದರು. ಜೊತೆಗೆ ವಿದ್ಯಾರ್ಥಿಗಳು ಬೌದ್ಧಿಕ ವಿಕಸನಕ್ಕೆ ತೋರುವ ಆಸಕ್ತಿಯನ್ನು ತಮ್ಮ ದೈಹಿಕ ಸಾಮರ್ಥ್ಯದ ವೃದ್ಧಿಗೂ ನೀಡಿ, ಉತ್ತಮ ಆರೋಗ್ಯವನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ 6ನೇ ತರಗತಿಯ ವಿದ್ಯಾರ್ಥಿಗಳು ಎಲ್ಲಿಯೂ ಆಯಾಸಗೊಂಡು ಸ್ಪರ್ಧೆಯಿಂದ ವಿಮುಖರಾಗದೆ ತೋರಿದ  ಅಸಾಧಾರಣ ಸಾಮರ್ಥ್ಯವು ಸ್ಮರಣಾರ್ಹವಾಗಿದೆ ಎಂದರು. ಇದರೊಂದಿಗೆ ಸಾಂಘಿಕ ಹೋರಾಟದ ಮೂಲಕ ತಮ್ಮ ನಿಲಯದ ಅಂಕಗಳನ್ನು ಹೇಗೆ ಹಚ್ಚಳ ಮಾಡಬಹುದೆಂಬುದಕ್ಕೆ ಈ ಸ್ಪರ್ಧೆಯು ನಿದರ್ಶನವಾಗಿದೆ ಎಂದು ತಿಳಿಸಿದರು.

ಶ್ವಾನಗಳ ಗುಡ್ಡಗಾಡು ಓಟ... ವಿಡಿಯೋ ವೈರಲ್

ಈ ಸಂದರ್ಭದಲ್ಲಿ ಶ್ರೀಮತಿ ಸ್ವಾತಿ ಘೋಷ್,  ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಜಿ ಕಣ್ಣನ್, ಆಡಳಿತಾಧಿಕಾರಿಗಳಾದ ಲೆಫ್ಟಿನೆಂಟ್ ಕರ್ನಲ್ ಅಜಿತ್ ಸಿಂಗ್, ಉಪ ಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮನ್‌ಪ್ರೀತ್ ಸಿಂಗ್, ವೈದ್ಯಾಧಿಕಾರಿಗಳಾದ ಸುಜಾತ, ಹಿರಿಯ ಶಿಕ್ಷಕರಾದ  ಎನ್ ವಿಬಿನ್ ಕುಮಾರ್,  ಬೋಧಕ, ಬೋಧಕೇತರ ವರ್ಗ, ಎನ್ ಸಿ ಸಿ ಸಿಬ್ಬಂದಿವರ್ಗ, ಸಾಮಾನ್ಯ ಸಿಬ್ಬಂದಿ ವರ್ಗ ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.

Follow Us:
Download App:
  • android
  • ios