ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಚಿಕ್ಕಮಗಳೂರು ಜಿಲ್ಲೆಗೆ ಎ ಶ್ರೇಣಿ ಲಭಿಸಿದೆ. ಜಿಲ್ಲೆಯಲ್ಲಿ ಆರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಟಾಪರ್ ಆಗಿದ್ದಾರೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು (ಮೇ.20): ರಾಜ್ಯದಲ್ಲಿ (Karnataka) ಎಸ್‌ಎಸ್‌ಎಲ್‌ಸಿ ಫಲಿತಾಂಶ (SSLC Result) ಪ್ರಕಟಗೊಂಡಿದ್ದು, ಚಿಕ್ಕಮಗಳೂರು (Chikkamagaluru) ಜಿಲ್ಲೆಗೆ ಎ ಶ್ರೇಣಿ ಲಭಿಸಿದೆ. ಜಿಲ್ಲೆಯಲ್ಲಿ ಆರು ವಿದ್ಯಾರ್ಥಿಗಳು (Students) 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಟಾಪರ್ (Toppers) ಆಗಿದ್ದಾರೆ. ಆರು ವಿದ್ಯಾರ್ಥಿಗಳಲ್ಲಿ ಒಂದೇ ಶಾಲೆಯ ಇಬ್ಬರು ಮತ್ತು 6 ಮಂದಿ ವಿದ್ಯಾರ್ಥಿನಿಯರೆಂಬುದು ವಿಶೇಷವಾಗಿದೆ. 

ಕಳೆದ ವರ್ಷ 15ನೇ ಸ್ಥಾನದಲ್ಲಿದ್ದ ಚಿಕ್ಕಮಗಳೂರು ಜಿಲ್ಲೆ ಈ ಭಾರೀ ಎ ಶ್ರೇಣಿ!: ಈ ಬಾರಿ ಯಾವ ಜಿಲ್ಲೆಗೂ ಯಾವುದೇ ಸ್ಥಾನ ನೀಡದೆ ಶ್ರೇಣಿಯನ್ನು ಕೊಟ್ಟಿರುವ ಪರಿಣಾಮ ಕಳೆದ ವರ್ಷ 15ನೇ ಸ್ಥಾನ ಗಳಿಸಿದ್ದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಎ ಶ್ರೇಣಿಯನ್ನು ಈ ಸಲ ತನ್ನದಾಗಿಸಿಕೊಂಡಿದೆ. ಚಿಕ್ಕಮಗಳೂರು, ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳ ತಲಾ ಇಬ್ಬರು ವಿದ್ಯಾರ್ಥಿಗಳು 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ನಗರದ ಸಂತ ಜೋಸೆಫ್ ಶಾಲೆಯ ವಿದ್ಯಾರ್ಥಿನಿ ಜಿ. ವೈಷ್ಣವಿ ಪ್ರಿಯ ಕೇವಲ ಒಂದೇ ಒಂದು ಅಂಕದೊಂದಿಗೆ ಅಗ್ರಸ್ಥಾನದಿಂದ ವಂಚಿತಳಾಗಿದ್ದಾಳೆ.

ದತ್ತಾತ್ರೇಯ ಪೀಠದಲ್ಲಿ ಮಾಂಸದೂಟ, ಶ್ರೀರಾಮಸೇನೆಯಿಂದ ಶುದ್ಧೀಕರಣ

ಚಿಕ್ಕಮಗಳೂರು ತಾಲೂಕಿನ ಉಂಡೇದಾಸರಹಳ್ಳಿಯ ಸೆಂಟ್ಮೆರಿಸ್ ಅಂಗ್ಲಮಾಧ್ಯಮ ಶಾಲೆಯ ಆರ್.ಸುಚರಿತ, ಆಲ್ದೂರು ಪೂರ್ಣಪ್ರಜ್ಞಾ ಶಾಲೆಯ ಚರಿತ್ರಾ ಎಂ.ಗೌಡ, ಕೊಪ್ಪ ತಾಲೂಕಿನ ಕಮ್ಮರಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಆಕೃತಿ, ದಾಸರಮಠ ಹುಲುಮಕ್ಕಿಯ ವೆಂಕಟೇಶ್ವರ ವಿದ್ಯಾಕೇಂದ್ರದ ಎಚ್.ಡಿ.ಜಾನವಿ, ಶೃಂಗೇರಿ ದರ್ಶಿನಿ ಪ್ರೌಢಶಾಲೆಯ ಶಮ ಎಸ್.ಶೆಟ್ಟಿ, ಇದೇ ಶಾಲೆಯ ಎಚ್.ಅನ್ನಪೂರ್ಣ 625 ಅಂಕಪಡೆದುಕೊಂಡಿದ್ದಾರೆ. ಒಂದೇ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು 625 ಅಂಕ ಪಡೆದುಕೊಂಡಿರುವುದು ಹಾಗೂ 625ಕ್ಕೆ 625 ಅಂಕ ಗಳಿಸಿದವರೆಲ್ಲ ವಿದ್ಯಾರ್ಥಿನಿಯರು ಎಂಬುದು ವಿಶೇಷವಾಗಿದೆ. 

ಟಾಪರ್ ವಿದ್ಯಾರ್ಥಿನಿಯರ ಅನಿಸಿಕೆ: ಸರ್ಕಾರಿ ಜೂನಿಯರ್ ಕಾಲೇಜು ಪ್ರೌಢಶಾಲೆ ಕಮ್ಮರಡಿಯ ವಿದ್ಯಾರ್ಥಿನಿಯ ಆಕೃತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಕ್ಕೆ 625 ಮಾರ್ಕ್ಸ್ ಬಂದಿರುವುದು ತುಂಬಾ ಖುಷಿಯಾಗಿದೆ. ಓದಲು ಶಿಕ್ಷಕರು ಪ್ರೋತ್ಸಾಹಿಸುತ್ತಿದ್ದರು. ಕೋವಿಡ್‌ ಸಮಯದಲ್ಲಿ ಶ್ರಮವಹಿಸಿ ಪಾಠ ಮಾಡುತ್ತಿದ್ದರು. ನನ್ನ ಪೋಷಕರು ಓದಲು ಪ್ರೋತ್ಸಾಹಿಸುತ್ತಿದ್ದರು. ಹತ್ತನೇ ತರಗತಿ ಪರೀಕ್ಷೆಯಲ್ಲಿ ಫುಲ್‌ಮಾರ್ಕ್ಸ್ ಬಂದಿದ್ದು ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಪರೀಕ್ಷೆ ಸಮಯದಲ್ಲಿ 3 ರಿಂದ 4ಗಂಟೆ ಓದುತ್ತಿದ್ದೆ. 

ಕಾಫಿನಾಡಿನಲ್ಲಿ ಸಿಎಂ: ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಬೊಮ್ಮಾಯಿ

625ಕ್ಕೆ 625 ಅಂಕ ಪಡೆಯಬೇಕೆನ್ನು ಕನಸ್ಸಿತ್ತು ಅದು ಈಡೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇನ್ನು ಜಿಲ್ಲೆಯ ವಿದ್ಯಾರ್ಥಿಗಳ ಸಾಧನೆ ಬಗ್ಗೆ ಮಾತಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ರಂಗನಾಥಸ್ವಾಮಿ ಕೊರೊನಾ ಸೋಂಕಿನ ಹಿನ್ನಲೆಯಲ್ಲಿ 2 ವರ್ಷ ತರಗತಿಗಳು ನಡೆದಿದರಲ್ಲಿ ಈ ವರ್ಷ ಪಾಠಗಳು ನಡೆದಿದ್ದು, ಉತ್ತಮ ಫಲಿತಾಂಶ ದೊರೆತ್ತಿರುವುದು ತೃಪ್ತಿ ನೀಡಿದೆ. ಅದರಲ್ಲೂ ಜಿಲ್ಲೆಯ 6 ವಿದ್ಯಾರ್ಥಿನಿಯರು ಟಾಪರ್ ಆಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮುಂದಿನ ವರ್ಷ ಜಿಲ್ಲೆಗೆ ಉತ್ತಮ ಫಲಿತಾಂಶ ದೊರಕಿಸಿಕೊಡಲು ಪ್ರಯತ್ನಿಸುವೆ ಎಂದು ಅಭಿಪ್ರಾಯಪಟ್ಟಿದ್ದಾರೆ.