* ಕಲ್ಯಾಣ ಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದ ನವವಧು* ತಾಳಿ ಕಟ್ಟಿಸಿಕೊಂಡು ಬಂದು ಪರೀಕ್ಷೆ ಬರೆದ  ಮದುಮಗಳು * ಯುವತಿಯ ನಡೆಗೆ ಎಲ್ಲೆಡೆ ಮೆಚ್ಚುಗೆ

ಮಂಡ್ಯ, (ಮೇ.12): ನವ ಜೀವನಕ್ಕೆ ಕಾಲಿಟ್ಟ ಮರುಕ್ಷಣವೇ ಮದುಮಗಳು ಮದುವೆ ಮಂಟಪದಿಂದ ನೇರವಾಗಿ ಕಾಲೇಜಿಗೆ ಬಂದು ಪರೀಕ್ಷೆ ಬರೆದಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು...ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಎಸ್‍ಟಿಜಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಎಲ್.ವೈ.ಐಶ್ವರ್ಯ(ತೇಜಸ್ವಿನಿ) ತಾಳಿ ಕಟ್ಟಿಸಿಕೊಂಡು ನೇರವಾಗಿ ಕಾಲೇಜಿಗೆ ಬಂದು ಪರೀಕ್ಷೆ ಬರೆದು ಮಾದರಿಯಾಗಿದ್ದಾರೆ.

ಲಿಂಗಪುರ ಗ್ರಾಮದ ಕಮಲಾ ಮತ್ತು ಯೋಗೇಂದ್ರ ಅವರ ಪುತ್ರಿ ಐಶ್ವರ್ಯಾ ಹಾಗೂ ಮೈಸೂರು ತಾಲೂಕು ಲಕ್ಷ್ಮೀಪುರ ಗ್ರಾಮದ ಭಾಗ್ಯಲಕ್ಷ್ಮೀ ಮತ್ತು ಸೋಮಶೇಖರ್​ ಅವರ ಪುತ್ರ ಎಲ್​.ಎಸ್​.ಯಶ್ವಂತ್​ ಅವರ ವಿವಾಹ ಪಟ್ಟಣದ ಟಿಎಪಿಸಿಎಂಎಸ್​ ಕಲ್ಯಾಣ ಮಂಟಪದಲ್ಲಿ ಬುಧವಾರ ನೆರವೇರಿತು. ಆದರೆ ಇದೇ ದಿನ ಬಿಕಾಂ ಪ್ರಥಮ ವರ್ಷದ ಡಿಜಿಟಲ್​ ಫ್ಲೂಯೆನ್ಸಿ ವಿಷಯ ಪರೀಕ್ಷೆ ಇದ್ದ ಕಾರಣ ಧಾರೆ ಮುಗಿದ ತಕ್ಷಣ ನವವಧು ಹಿರಿಯರ ಅನುಮತಿ ಪಡೆದು ಪರೀಕ್ಷೆಗೆ ಹಾಜರಾದರು.

Mandya ಊರ ಜಾತ್ರೆಯಲ್ಲಿ ಬಲಿ ತಪ್ಪಿಸಲು ಮರವೇರಿ ಕುಳಿತ ಹರಕೆ ಹುಂಜ!

ಐಶ್ವರ್ಯಳ ಮದುವೆ ಇಂದು ಅವಿನಾಶ್ ಎಲ್.ಎಸ್ ಜೊತೆಗೆ ನಿಶ್ಚಯವಾಗಿತ್ತು. ಬೆಳಗ್ಗೆ 9.30 ರಿಂದ 10.30ರವರೆಗೆ ಮುಹೂರ್ತವಿದ್ದು ನಂತರ ಆರತಕ್ಷತೆ ಮುಗಿಸಿ ಅತ್ತೆಯ ಮನೆಗೆ ಪ್ರವೇಶಿಸ ಬೇಕಿದ್ದ ಮದುಮಗಳು ಕಲ್ಯಾಣ ಮಂಟಪದಿಂದ ಮದುಮಗನೊಂದಿಗೆ ಕಾಲೇಜಿಗೆ ಬಂದು ಪರೀಕ್ಷೆಗೆ ಹಾಜರಾಗಿದ್ದಾರೆ. 

ಮದುವೆಯ ದಿನವೇ ಮೈಸೂರು ವಿಶ್ವವಿದ್ಯಾನಿಲಯದ ಪ್ರಥಮ ಸೆಮಿಸ್ಟರ್ ಬಿಕಾಂ ಪತ್ರಿಕೆ ಡಿಜಿಟಲ್ ಫ್ಲೂಯೆನ್ಸಿ ಪರೀಕ್ಷೆ ನಿಗದಿಯಾಗಿತ್ತು, ಮದುವೆ ಕಾರಣಕ್ಕೆ ಪರೀಕ್ಷೆಗೆ ತೊಂದರೆ ಆಗಬಾರದೆಂದು ಯೋಚಿಸಿ ಗಂಡು ಮತ್ತು ಹೆಣ್ಣಿನ ಮನೆಯವರಿಬ್ಬರು ಐಶ್ವರ್ಯಳನ್ನು ಪ್ರೋತ್ಸಾಹಿಸಿ ಪರೀಕ್ಷೆ ಬರೆಯಲು ಕಳುಹಿಸಿ ಕೊಡಲು ನಿಶ್ಚಯಿಸಿದರು. ಮಧುಮಗಳ ಅಲಂಕಾರದಲ್ಲೇ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದು ಇತರ ಎಲ್ಲ ಹೆಣ್ಣು ಮಕ್ಕಳಿಗೂ ಪ್ರೇರಣೆಯಾಗಿದ್ದಾಳೆ.

ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಪತಿ ಸಹಕಾರ ನೀಡಿದ್ದಾರೆ. ಪರೀಕ್ಷೆ ಮುಗಿಯುವ ತನಕ ಕಾಲೇಜ್ ಕ್ಯಾಂಪಸ್​ನಲ್ಲಿ ಕಾದು ಬಳಿಕ ಪತಿ ಹಾಗೂ ಕುಟುಂಬಸ್ಥರು ಮನೆಗೆ ಕರೆದು ಕೊಂಡು ಹೋಗಿದ್ದಾರೆ. ಪರೀಕ್ಷೆ ಮುಗಿದ ಬಳಿಕ ಅವಿನಾಶ್ ಕುಟುಂಬಸ್ಥರು ಮನೆ ತುಂಬಿಸಿಕೊಂಡಿದ್ದಾರೆ.

ಮದುವೆ ದಿನವೇ ಪರೀಕ್ಷೆ ಬರೆದ ವಿದ್ಯಾರ್ಥಿನಿ ಐಶ್ವರ್ಯ ಹಾಗೂ ಈಕೆಗೆ ಸಹಕಾರ ನೀಡಿದ ಪಾಲಕರಿಗೆ ಶಾಸಕ ಸಿ.ಎಸ್​.ಪುಟ್ಟರಾಜು ಹಾಗೂ ಎಸ್​ಟಿಜಿ ಶಿಕ್ಷಣ ಸಂಸ್ಥೆಯ ಸಿಇಒ ಸಿ.ಪಿ.ಶಿವರಾಜು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.