ಟೆಕ್ ಸಮ್ಮಿಟ್‌ನಲ್ಲಿ ಮಾತನಾಡಿದ ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ್, ತಂತ್ರಜ್ಞಾನ ಆಧಾರಿತ ಪಠ್ಯಕ್ರಮ, ಕೃತಕ ಬುದ್ಧಿಮತ್ತೆ ಮತ್ತು ಡಿಸೈನ್ ಥಿಂಕಿಂಗ್ ಲ್ಯಾಬ್‌ಗಳ ಮೂಲಕ ವಿದ್ಯಾರ್ಥಿಗಳನ್ನು ಕೇವಲ ಉದ್ಯೋಗಿಗಳನ್ನಾಗಿ ಅಲ್ಲ, ಬದಲಾಗಿ ಭವಿಷ್ಯದ ನಾಯಕರುರನ್ನಾಗಿ ರೂಪಿಸುತ್ತಿದ್ದೇವೆ ಎಂದು ಹೇಳಿದರು.  

ವರದಿ- ನಂದೀಶ್ ಮಲ್ಲೇನಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಬೆಂಗಳೂರು: ಬೆಂಗಳೂರು ಕೈಗಾರಿಕೋದ್ಯಮಕ್ಕೆ ಪೂರಕವಾದ, ತಂತ್ರಜ್ಞಾನ ಆಧಾರಿತ ಪಠ್ಯಕ್ರಮವನ್ನು ಅಳವಡಿಸಿಕೊಳ್ಳವುದರ ಜತೆಗೆ ಭವಿಷ್ಯದ ಸಮಸ್ಯೆಗಳಿಗೆ ಪರಿಹಾರ ನೀಡುವ, ಆವೀಷ್ಕಾರಕರು, ನಾಯಕರನ್ನು ರೂಪಿಸುತ್ತಿದ್ದೇವೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಡಾ.ಎಸ್.ವಿದ್ಯಾಶಂಕರ್ ಹೇಳಿದರು.

ಬೆಂಗಳೂರು ಟೆಕ್ ಸಮ್ಮಿಟ್‌

ಬೆಂಗಳೂರಿನಲ್ಲಿ ನಡೆದ ಟೆಕ್ ಸಮ್ಮಿಟ್‌ನಲ್ಲಿ `ಭಾರತ ತಂತ್ರಜ್ಞಾನ ಆಧಾರಿತ ಭವಿಷ್ಯದ ಶಿಲ್ಪಿಯಾಗಿ ಶಿಕ್ಷಣದ ಪಾತ್ರ' ಎಂಬ ವಿಚಾರ ಕುರಿತು ಮಾತನಾಡಿದ ಅವರು, ನಾವು ಎನ್‌ಇಪಿ ಅನ್ನು ಜಾರಿಗೊಳಿಸಿದ್ದೇವೆ. ಕೃತಕ ಬುದ್ಧಿಮತ್ತೆ ಕೂಡ ಪಠ್ಯಕ್ರಮದ ಒಂದು ಭಾಗವಾಗಿ ಅಳವಡಿಸಿಕೊಂಡಿದ್ದೇವೆ. ಆ ಮೂಲಕ ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಅವಶ್ಯಕವಾಗಿರುವ ಶಿಕ್ಷಣ, ಕೌಶಲವನ್ನು ಕಲಿಸಿಕೊಡುತ್ತಿದ್ದೇವೆ. ಪ್ರತಿ ವಿದ್ಯಾರ್ಥಿಗಳಿಗೆ "ಸಿ" ಪ್ರೋಗ್ರಾಂ ಕಲಿಸುತ್ತಿದ್ದೇವೆ. ಎಐ ಆಧಾರಿತ ಕೌಶಲ ಶಿಕ್ಷಣ ನೀಡುತ್ತಿದ್ದೇವೆ ಎಂದರು.

ಡಿಸೈನ್ ಥಿಂಕಿಂಗ್ ಲ್ಯಾಬ್

ವಿದ್ಯಾರ್ಥಿಗಳಿಗೆ ಸೃಜನಾತ್ಮಕ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇದಕ್ಕಾಗಿ ಅವಿಷ್ಕಾರ ಮತ್ತು ಡಿಸೈನ್ ಥಿಂಕಿಂಗ್ ಲ್ಯಾಬ್ ತೆರೆದಿದ್ದೇವೆ. ನಾವು ವಿದ್ಯಾರ್ಥಿಗಳನ್ನು ಕೇವಲ ಉದ್ಯೋಗಕ್ಕೆ ಅರ್ಹರಾಗಿ ರೂಪಿಸುವುದರ ಜತೆಗೆ ಅವರನ್ನು ನಾವು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ, ಪರಿಹಾರಕರು, ಆವಿಷ್ಕಾರಕರು, ಭವಿಷ್ಯದ ನಾಯಕರನ್ನಾಗಿ ರೂಪಿಸುತ್ತಿದ್ದೇವೆ ಎಂದರು. ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಫಲಿತಾಂಶ ನೀಡುವ ಉದ್ದೇಶದಿಂದ ನಾವು ಪರೀಕ್ಷೆ ಮುಗಿದ ಒಂದು ಗಂಟೆಯಲ್ಲೇ ಫಲಿತಾಂಶ ನೀಡಿದ್ದೇವೆ. ಭಾರತ ತಂತ್ರಜ್ಞಾನ ಚಾಲಿತ ಭವಿಷ್ಯವು ನಮ್ಮ ತರಗತಿಗಳಲ್ಲಿ ಪ್ರಯೋಗಾಲಯ, ಯುವ ಎಂಜಿನಿಯರ್‌ಗಳ ಮನಸಿನಲ್ಲಿ ರೂಪುಗೊಳ್ಳುತ್ತಿದೆ ಎಂದರು.