ಮೂಳೆಯ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬೆಂಗಳೂರಿನ ಚಿರಂತನ್ ಹೊನ್ನಾಪುರ, ಐಸಿಎಸ್‌ಸಿ 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 92 ಅಂಕ ಗಳಿಸಿದ್ದಾರೆ. 

ಇಂದು ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಕೆಲ ಕ್ಷಣಗಳಲ್ಲಿ ಪ್ರಕಟವಾಗಲಿದೆ. ಏಪ್ರಿಲ್‌ 30 ರಂದು ಐಸಿಎಸ್‌ಸಿ ಸಿಲಬಸ್‌ನ 10ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿತ್ತು. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಯೋರ್ವ ಮಹತ್ತರವಾದ ಸಾಧನೆ ಮಾಡಿದ್ದಾನೆ. ಮೂಳೆಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಕೂಡ ಬೆಂಗಳೂರಿನ ಚಿರಂತನ್ ಹೊನ್ನಾಪುರ ಎಂಬ ವಿದ್ಯಾರ್ಥಿ ಈ ಕ್ಯಾನ್ಸರ್ ವಿರುದ್ಧ ಹೋರಾಡುತ್ತಲೇ ಐಸಿಎಸ್‌ಸಿಯ 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 92 ಅಂಕ ಗಳಿಸಿ ಸಾಧನೆ ಮಾಡಿದ್ದಾನೆ. ಈ ಮೂಲಕ ವಿದ್ಯಾರ್ಥಿ ಕ್ಯಾನ್ಸರ್‌ಗೆ ಸಡ್ಡು ಹೊಡೆದಿದ್ದಾನೆ. 

ಚಿರಂತನ್ ಹೊನ್ನಾಪುರ ಎಂಬಾತನೇ ಹೀಗೆ ಮೂಳೆಯ ಕ್ಯಾನ್ಸರ್ ವಿರುದ್ಧ ಹೋರಾಡುತ್ತಲೇ ಐಸಿಎಸ್‌ಸಿಯಲ್ಲಿ 92 ಶೇಕಡಾ ಅಂಕಗಳೊಂದಿಗೆ ಅತ್ಯುನ್ನತ ದರ್ಜೆಯಲ್ಲಿ 10ನೇ ಕ್ಲಾಸ್ ಪಾಸು ಮಾಡಿದ ವಿದ್ಯಾರ್ಥಿ. ಈ ಅಪೂರ್ವ ಸಾಧನೆ ಮಾಡಿದ ವಿದ್ಯಾರ್ಥಿ ಚಿರಂತನ್ ಹೊನ್ನಾಪುರ, ಬೆಂಗಳೂರಿನ ನಾಗರಬಾವಿಯಲ್ಲಿರುವ ದಿ ಆರ್ಯನ್ ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಈತನಿಗೆ 9ನೇ ತರಗತಿಯಲ್ಲಿ ಓದುತ್ತಿರುವಾಗಲೇ ಹೆಚ್ಚಾಗಿ ಹದಿಹರೆಯದ ಮಕ್ಕಳು ಹಾಗೂ ಯುವಕಯುವತಿಯರಲ್ಲಿ ಕಂಡು ಬರುವ ಹೈ-ಗ್ರೇಡ್ ಆಸ್ಟಿಯೋಸಾರ್ಕೋಮಾ ಎಂಬ ಮೂಳೆಯ ಕ್ಯಾನ್ಸರ್‌ ಇರುವುದು ಪತ್ತೆಯಾಗಿತ್ತು. ಹೀಗಾಗಿ ಈತ 9ನೇ ತರಗತಿಯಲ್ಲಿ ಇದ್ದಾಗಲೇ ಆಕ್ಟೋಬರ್‌ ತಿಂಗಳಿನಿಂದ ಚಿಕಿತ್ಸೆ ಆರಂಭಿಸಲಾಗಿದ್ದು, ಆಗಿನಿಂದಲೂ ಅವರಿಗೆ ತರಗತಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಚಿಕಿತ್ಸೆಯ ಭಾಗವಾಗಿ 9ನೇ ತರಗತಿಯಲ್ಲಿ ಇದ್ದಾಗಲೇ ಆತನ ಬಲಕೈನ ಮೂಳೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದು ಹಾಕಲಾಗಿತ್ತು. ನಂತರ ಆತ ಸಹಾಯಕರ ಸಹಾಯದಿಂದ 9ನೇ ತರಗತಿ ಪರೀಕ್ಷೆ ಪಾಸು ಮಾಡಿದ್ದ. ಅಲ್ಲದೇ ಶೇಕಡಾ 82 ಅಂಕಗಳೊಂದಿಗೆ ಆತ 9ನೇ ತರಗತಿ ಪಾಸು ಮಾಡಿದ್ದ. 

9ನೇ ತರಗತಿ ರಿಸಲ್ಟ್ ಬರುತ್ತಿದ್ದಂತೆ 10ನೇ ತರಗತಿಗೆ ವಿಶೇಷ ತರಗತಿಗಳು ಆರಂಭವಾಗಿದ್ದರು. ಆದರೆ ಕಿಮೋಥೆರಪಿ ಹಾಗೂ ಇತರ ಚಿಕಿತ್ಸೆಯ ಕಾರಣದಿಂದ ಮೂರು ತಿಂಗಳ ಕಾಲ ಆತನಿಗೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. 4ನೇ ಒಂದು ಭಾಗದಷ್ಟು ತರಗತಿಗಳು ಆಗಲೇ ಮುಗಿದಿದ್ದವು. ಆದರೆ ಶಾಲೆ ನನ್ನ ಖುಷಿಯ ಸ್ಥಳವಾಗಿತ್ತು. ನಾನು ನನ್ನ ಶಿಕ್ಷಕರನ್ನು ಮಿಸ್ ಮಾಡಿಕೊಳ್ಳಲು ಇಷ್ಟವಿರಲಿಲ್ಲ, ನಾನು ಯಾವಾಗ ಶಾಲೆಗೆ ಹೋಗುವೆನೋ ಎಂದು ಕಾಯುತ್ತಿದ್ದೆ. ಇದುವೆ ನನ್ನನ್ನು ಮುಂದೆ ಹೋಗುವಂತೆ ಮಾಡಿದೆ ಎಂದು ಚಿರಂತನ್ ಅಂಗ್ಲ ಮಾಧ್ಯಮ ಟೈಮ್ಸ್ ಆಫ್ ಇಂಡಿಯಾಗೆ ಹೇಳಿದ್ದಾರೆ. 

ಈತ ಶಾಲೆಗೆ ಹೋಗುವಾಗ ಅರ್ಧ ತರಗತಿಗಳು ಮುಗಿದಿದ್ದರೂ, ಯಾವುದೇ ಹೆಚ್ಚುವರಿ ಟ್ಯೂಷನ್ ತೆಗೆದುಕೊಳ್ಳದೆ, ಅವರು ತಮ್ಮ ತರಗತಿಗಳಲ್ಲಿ ಕಲಿಸುವ ವಿಷಯಗಳ ಮೇಲೆ ಗಮನಹರಿಸಲು ನಿರ್ಧರಿಸಿದರು. ಅವರ ಶಿಕ್ಷಕರ ಕಾಳಜಿ, ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ, ಚಿರಂತನ್ ತಮ್ಮ ಸಹಪಾಠಿಗಳೊಂದಿಗೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾದರು. ಅಲ್ಲದೇ ಸೋಶಿಯಲ್ ಮೀಡಿಯತಾದಲ್ಲಿ ಬರುವ ಚಾನೆಲ್‌ಗಳಲ್ಲಿ ವಿವಿಧ ಪಠ್ಯ ವಿಷಯಗಳ ಕುರಿತು ಲೈವ್ ತರಗತಿಗಳಿಗೆ ಹಾಜರಾಗುತ್ತಿದ್ದರು ಮತ್ತು ಅಲ್ಲಿ ನೀಡಿದ ಸಲಹೆಗಳನ್ನು ಪಾಲಿಸುತ್ತಿದ್ದಿದ್ದಾಗಿ ಅವರು ಹೇಳಿಕೊಂಡಿದ್ದಾರೆ. 

ತರಗತಿಗಳ ಮೇಲೆ ಗಮನ ಕೇಂದ್ರೀಕರಿಸುವುದು ಮತ್ತು ಉತ್ತರಗಳನ್ನು ನನ್ನದೇ ಮಾತುಗಳಲ್ಲಿ ಬರೆಯುವುದು ನನ್ನ ಸ್ಟೈಲ್ ಆಗಿತ್ತು. ನಾನು ಶಾಲೆಯಲ್ಲಿದ್ದಾಗ, ನನ್ನ ಸ್ನೇಹಿತರು ನನ್ನನ್ನು ಎಂದಿಗೂ ವಿಭಿನ್ನವಾಗಿ ನಡೆಸಿಕೊಳ್ಳಲಿಲ್ಲ ಮತ್ತು ಯಾವಾಗಲೂ ನನಗೆ ಬೆಂಬಲ ನೀಡುತ್ತಿದ್ದರು ಎಂದು ಅವರು ಹೇಳಿದ್ದಾರೆ. ಈಗ 92 ಶೇಕಡಾ ಅಂಕ ಗಳಿಸಿರುವ ಚಿರಂತನ್ ಪಿಯುಸಿಯಲ್ಲಿ ವಾಣಿಜ್ಯ ವಿಷಯವನ್ನು ಅಧ್ಯಯನ ನಡೆಸಲು ನಿರ್ಧರಿಸಿದ್ದಾರೆ. ನಂತರ ಕಾನೂನು ಅಧ್ಯಯನ ಮಾಡಿ ಯುಪಿಎಸ್‌ಸಿ ಪರೀಕ್ಷೆ ಬರೆಯುವುದಾಗಿ ಹೇಳಿದ್ದಾರೆ. ಐಪಿಎಸ್ ಅಧಿಕಾರಿಯಾಗಿ ಸಮಾಜವನ್ನು ಸುಧಾರಿಸಲು ನಾನು ಬಯಸುತ್ತೇನೆ ಏಕೆಂದರೆ ಅದು ನನ್ನ ಬಾಲ್ಯದ ಕನಸಾಗಿದೆ ಎಂದು ಚಿರಂತನ್ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಚಿರಂತನ್ ಸಾಧನೆ ಮನಸ್ಸಿದ್ದರೆ ಎಂತಹ ಕಷ್ಟಗಳು ಬಂದರೆ ಯಾವುದು ಕೂಡ ಅಸಾಧ್ಯವಲ್ಲ ಎಂಬುದನ್ನು ಸಾಬೀತುಪಡಿಸಿದೆ.