ನಮ್ ಶಾಲೆಯ ಅರ್ಧಕ್ಕರ್ಧ ಮಕ್ಕಳು ಕೆಟ್ಟು ಹೋಗಿದ್ದಾರೆ. ಕೆಟ್ಟ ಪದ ಬಳಕೆ ಮಾಡುತ್ತಿದ್ದಾರೆ. ಪ್ರಶ್ನೇ ಕೇಳಿದರೆ ಪುಷ್ಪಾ2 ಚಿತ್ರದಲ್ಲಿ ನಾಯಕನ ಡೈಲಾಗ್‌ನ್ನು ಹೇಳುತ್ತಿದ್ದಾರೆ. ಪರೀಕ್ಷೆಯಲ್ಲಿ ಕಳಪೆಯಾಗಿದ್ದಾರೆ. ಪುಷ್ಪಾ2 ಚಿತ್ರ ಮಕ್ಕಳ ಭವಿಷ್ಯ ಹಾಳುಮಾಡುತ್ತಿದೆ ಎಂದು ಸರ್ಕಾರಿ ಶಾಲಾ ಶಿಕ್ಷಕಿ ಗಂಭೀರ ಆರೋಪ ಮಾಡಿದ್ದಾರೆ.

ಹೈದಾರಾಬಾದ್(ಫೆ.24) ಅಲ್ಲು ಅರ್ಜುನ್ ಅಭಿನಯದ ಪುಷ್ಪಾ2 ಚಿತ್ರ ಭಾರತೀಯ ಸಿನಿಮಾ ರಂಗದಲ್ಲಿ ಹಲವು ದಾಖಲೆ ಬರೆದಿದೆ. ದಾಖಲೆಯ ಗಳಿಕೆ, ಉತ್ತಮ ಚಿತ್ರ ಅನ್ನೋ ಹೆಗ್ಗಳಿಕೆ, ದೇಶಾದ್ಯಂತ ಅಪಾರ ಮೆಚ್ಚುಗೆ ಸೇರಿದಂತೆ ಪ್ರಶಂಸೆಗಳ ಸುರಿಮಳೆ ವ್ಯಕ್ತವಾಗಿದೆ. ನಾಯಕ ಅಲ್ಲು ಅರ್ಜುನ್ ರಕ್ತ ಚಂದನ ಅಕ್ರಮವಾಗಿ ಸಾಗಾಟ ಮಾಡುವ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಮ್ಯಾನರಿಸಂ, ಬಾಡಿ ಲಾಂಗ್ವೇಜ್, ಡೈಲಾಗ್ ಎಲ್ಲವೂ ಡೇರಿಂಗ್ ಸ್ಮಗ್ಲರ್ಸ್‌ಗೆ ಹೋಲಿಕೆಯಾಗುವಂತಿದೆ. ದೇಶ ವಿದೇಶಗಳಲ್ಲಿ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಶಾಲಾ ಶಿಕ್ಷಕರು ಮಾತ್ರ ಅಲ್ಲು ಅರ್ಜುನ್ ಪುಷ್ಪಾ2 ಚಿತ್ರದಿಂದ ರೋಸಿ ಹೋಗಿದ್ದಾರೆ. ಈ ಚಿತ್ರ ಮಕ್ಕಳನ್ನು ಹಾಳು ಮಾಡುತ್ತಿದೆ ಎಂದು ದೂರಿದ್ದಾರೆ.

ಅಲ್ಲು ಅರ್ಜುನ್ ಪುಷ್ಪಾ2 ಚಿತ್ರ ನೋಡಿದ ಬಳಿಕ ಮಕ್ಕಳು ಸ್ಮಗ್ಲಿಂಗ್ ನಾಯಕನ ಡೈಲಾಗ್ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಕೆಟ್ಟ ಕೆಟ್ಟ ಪದಗಳನ್ನು ಬಳಕೆ ಮಾಡುತ್ತಿದ್ದಾರೆ. ನಡಿಗೆಯಲ್ಲೂ ಅಲ್ಲು ಅರ್ಜುನ್ ಶೈಲಿಯನ್ನು ಅನುಸರಿಸುತ್ತಿದ್ದಾರೆ. ಪರೀಕ್ಷೆಯಲ್ಲಿ ಮತ್ತಷ್ಟು ಕಳಪೆಯಾಗಿದ್ದಾರೆ. ಅಸಂಬದ್ಧ ಉತ್ತರ ಹೇಳುತ್ತಾರೆ. ಗದರಿದರೆ ಡೈಲಾಗ್ ರೀತಿಯಲ್ಲಿ ಭಾಷೆಗಳ ಪದಪ್ರಯೋಗ ಮಾಡುತ್ತಿದ್ದಾರೆ ಎಂದು ಹೈದರಾಬಾದ್‌ನ ಯೂಸುಫ್‌ಗುಡಾ ಸರ್ಕಾರಿ ಶಾಲಾ ಹೆಡ್‌ಮಾಸ್ಟರ್ ಆರೋಪಿಸಿದ್ದಾರೆ.

ಯಾದಗಿರಿಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ: ದಲಿತ ಮಕ್ಕಳ ಊಟದ ತಟ್ಟೆ ತೊಳೆಯಲು ನಿರಾಕರಣೆ: ಬಿಸಿಯೂಟವೇ ಸ್ಥಗಿತ!

ಪುಷ್ಪಾ ಚಿತ್ರದ ಕುರಿತು ಶಿಕ್ಷಕಿ ಆಕ್ಷೇಪ್ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಆಯೋಗದ ಮುಂದೆ ಮಾತನಾಡಿದ ಸರ್ಕಾರಿ ಶಾಲಾ ಮುಖ್ಯೋಪಾದ್ಯಾಯಿನಿ, ಪುಷ್ಪ ರೀತಿಯ ಸಿನಿಮಾಗಳು ಮತ್ತು ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ವಿದ್ಯಾರ್ಥಿಗಳು ಕೆಟ್ಟದಾಗಿ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಶಾಲೆಯ ವಿದ್ಯಾರ್ಥಿಗಳ ವರ್ತನೆಯನ್ನು ನೋಡಿದಾಗ ಶಾಲಾ ಮುಖ್ಯಸ್ಥೆಯಾಗಿ ತಾನು ವಿಫಲನಾಗಿದ್ದೇನೆ ಎಂದು ಅನಿಸುತ್ತಿದೆ ಎಂದು ಶಿಕ್ಷಕಿ ವಿಡಿಯೋದಲ್ಲಿ ಹೇಳಿದ್ದಾರೆ.

ವಿದ್ಯಾರ್ಥಿಗಳು ವಿಚಿತ್ರವಾದ ಹೇರ್‌ಸ್ಟೈಲ್‌ ಮಾಡಿಕೊಂಡು ಶಾಲೆಗೆ ಆಗಮಿಸುತ್ತಿದ್ದಾರೆ. ಶಿಸ್ತು ಕಾಣದಾಗಿದೆ. ಏನೇ ಕೇಳಿದರೂ ಸಿನಿಮಾದ ಡೈಲಾಗ್ ರೀತಿ ಮಾತನಾಡುತ್ತಾರೆ. ಕೆಟ್ಟ ಕೆಟ್ಟ ಪದ ಬಳಕೆ ಮಾಡಿ ಉತ್ತರಿಸುತ್ತಾರೆ. ನಾವು ಶಿಕ್ಷಣದ ಮೇಲೆ ಮಾತ್ರ ಗಮನ ಹರಿಸುತ್ತೇವೆ. ಆದರೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಸ್ತು, ಚೌಕಟ್ಟು ಕೂಡ ಅತೀ ಮುಖ್ಯ. ಆದರೆ ಇದನ್ನು ನಿರ್ಲಕ್ಷಿಸುತ್ತಿದ್ದೇವೆ. ಇದು ಸರ್ಕಾರಿ ಶಾಲೆಗಳಲ್ಲಿ ಮಾತ್ರವಲ್ಲ, ಖಾಸಗಿ ಶಾಲೆಗಳಲ್ಲೂ ಇದೆ. ಒಬ್ಬ ಆಡಳಿತಾಧಿಕಾರಿಯಾಗಿ, ನಾನು ವಿಫಲನಾಗುತ್ತಿದ್ದೇನೆ ಎಂದು ನನಗೆ ಅನಿಸುತ್ತಿದೆ ಎಂದು ಶಾಲಾ ಮುಖ್ಯೋಪಾದ್ಯಾಯಿನಿ ಅಳಲು ತೋಡಿಕೊಂಡಿದ್ದಾರೆ. 

ಶಿಕ್ಷಕಿಯಾಗಿ, ವಿದ್ಯಾರ್ಥಿಗಳನ್ನು 'ಶಿಕ್ಷಿಸಲು ನನಗೆ ಇಷ್ಟವಿಲ್ಲ.ಇದರಿಂದ ಮಕ್ಕಳ ಮೇಲೆ ಒತ್ತಡ ಹೆಚ್ಚುತ್ತದೆ. ಶಾಲೆಗೆ ಆಗಮಿಸುವ ಸಂಖ್ಯೆ ಕಡಿಮೆಯಾಗುತ್ತದೆ. ಶಿಕ್ಷೆಯಿಂದ ಮಕ್ಕಳಿಗೆ ಶಾಲೆ ನರಕವಾಗಿ ಅಥವಾ ಇಷ್ಟವಿಲ್ಲದ ಕೇಂದ್ರವಾಗಿ ಪರಿಣಿಸುತ್ತದೆ ಎಂದಿದ್ದಾರೆ. ವಿದ್ಯಾರ್ಥಿಗಳ ವರ್ತನೆಗೆ ಸಾಮಾಜಿಕ ಮಾಧ್ಯಮ ಮತ್ತು ಸಿನಿಮಾಗಳೇ ಕಾರಣ ಎಂದು ಅವರು ದೂರಿದ್ದಾರೆ.

 ಶಿಕ್ಷಕಿ ಮಾತುಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಪುಷ್ಪಾ2 ಸಿನಿಮಾ ಮಕ್ಕಳ ವರ್ತನೆ ಬದಲಾಗಲು ಕಾರಣ ಹೇಗೆ ಎಂದು ಪ್ರಶ್ನಿಸಿದ್ದಾರೆ. ಒಂದು ಒಳ್ಳೆ ಸಿನಿಮಾ ನೋಡಿ ಯಾರಾದರೂ ಬದಲಾಗುತ್ತಾರಾ? ಸಿನಿಮಾ ಸಣ್ಣ ಮಟ್ಟದಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ. ಆದರೆ ಇಷ್ಟು ಸಾಧ್ಯವಿಲ್ಲ ಎಂದಿದ್ದಾರೆ. ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವಲ್ಲಿ, ಶಿಸ್ತು ರೂಪಿಸುವಲ್ಲಿ ನೀವು ವಿಫಲರಾಗಿದ್ದೀರಿ. ಇದನ್ನು ಸಿನಿಮಾ ಮೇಲೆ ಹಾಕಬೇಡಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಸಿನಿಮಾ ಸಮಾಜದ ಮೇಲೆ ಪ್ರಭಾವ ಬೀರುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಪ್ರಮುಖವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಪುಷ್ಪಾ2 ಚಿತ್ರದಿಂದ ಮಕ್ಕಳು ಬದಲಾಗಿದ್ದಾರ ಎಂದರೆ ಇದು ಉತ್ತಮ ಸಂದೇಶವಲ್ಲ. ಹೀಗಾಗಿ ಸರ್ಕಾರ ಈ ರೀತಿಯ ಚಿತ್ರಕ್ಕೆ ಪ್ರಶಸ್ತಿ ನೀಡಿ ಗೌರವಿಸಬಾರದು. ಇದು ಕೆಟ್ಟ ಸಂದೇಶ ನೀಡುತ್ತದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಕ್ಕರೆ ಕೊಬ್ಬಿನಂಶದ ಕಾರಣ ಹೇಳಿ ಶಾಲಾ ಮಕ್ಕಳಿಗೆ ನೀಡುವ ಚಿಕ್ಕಿಗೂ ಗೋತಾ!