Asianet Suvarna News Asianet Suvarna News

ಜೈಲಿನಲ್ಲಿದ್ದುಕೊಂಡೇ ಪದವಿ ಓದಿದ ಛಲಗಾರ

  • ಜೈಲಿನಲ್ಲಿದ್ದುಕೊಂಡೇ ಪದವಿ ಓದಿದ ಛಲಗಾರ
  • ಕೊಲೆ ಕೇಸ್‌ನಲ್ಲಿ ಜೈಲುಸೇರಿದ ಗುಡೇಕೋಟೆಯ ಯುವಕ ಮಲ್ಲಿಕಾರ್ಜುನ
  • ನಿರಪರಾಧಿಯಾಗಿ ಹೊರಬಂದು ಎಂಎ ಪತ್ರಿಕೋದ್ಯಮ ಮುಗಿಸಿದ
a young man who completed his graduation while in jail rav
Author
First Published Nov 6, 2022, 1:46 PM IST

ಭೀಮಣ್ಣ ಗಜಾಪುರ

ಕೂಡ್ಲಿಗಿ (ನ.6) : ಕೊಲೆ ಕೇಸೊಂದರಲ್ಲಿ 4 ವರ್ಷ ಬಳ್ಳಾರಿ ಜೈಲು ಸೇರಿದ ಯುವಕನೊಬ್ಬ ಛಲದಿಂದ ಓದಿ ಬಿಎ ಪದವಿ ಪಡೆದಿದ್ದು, ಇದೀಗ ನ್ಯಾಯಾಲಯದಿಂದ ನಿರಪರಾಧಿ ಎಂದು ತೀರ್ಪು ನೀಡಿದ ಬಳಿಕ ಜೈಲಿನಿಂದ ಹೊರ ಬಂದು ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಎಐಸಿಸಿ ಅಧ್ಯಕ್ಷ ಖರ್ಗೆ ಬೆಂಗ್ಳೂರಿಗೆ ಪಾದಾರ್ಪಣೆ: ಸಿಎಂಗೂ ತಟ್ಟಿದ ಟ್ರಾಫಿಕ್ ಬಿಸಿ..!

ತಾಲೂಕು ಗುಡೇಕೋಟೆ ಗ್ರಾಮದ ಪಿ.ಎಂ.ಮಲ್ಲಿಕಾರ್ಜುನ 2009ರಲ್ಲಿ ಪಿಯುಸಿ ಪರೀಕ್ಷೆ ಬರೆದು ಹೊರ ಬರುತ್ತಿದ್ದಂತೆಯೇ ಕೊಲೆ ಪ್ರಕರಣವೊಂದರಲ್ಲಿ ಸಿಲುಕಿ ಬಂಧನಕ್ಕೊಳಗಾದ. ತಾನು ನಿರಪರಾಧಿ ಎಂಬುದು 17 ವರ್ಷದ ಮಲ್ಲಿಕಾರ್ಜುನಗೆ ಗೊತ್ತಿತ್ತು. ಆದರೆ ಎರಡನೇ (ಎ2) ಆರೋಪಿ ಎಂದು ಪ್ರಕರಣ ದಾಖಲಾದ್ದರಿಂದ ಜೈಲಿಗೆ ಹೋಗಬೇಕಾಯಿತು. ಬಳ್ಳಾರಿ ಜೈಲಿನಲ್ಲಿ 7 ತಿಂಗಳು ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದ. ಆದರೆ 2011ರಲ್ಲಿ ನ್ಯಾಯಾಲಯ ಅಪರಾಧಿ ಎಂದು ಜೀವಾವಧಿ ಶಿಕ್ಷೆ ನೀಡಿತು. ಮತ್ತೆ ಬಂಧನಕ್ಕೊಳಗಾದ. ಬಳಿಕ ಧಾರವಾಡ ಹೈಕೋರ್ಚ್‌ನಲ್ಲಿ ಅಪೀಲ್‌ ಮಾಡಿದ್ದು, ಅದು ವಾದ- ಪ್ರತಿವಾದ ನಡೆಯಲು ನಾಲ್ಕು ವರ್ಷ ಬೇಕಾಯಿತು. ಅಲ್ಲಿಯ ತನಕ ಬಳ್ಳಾರಿ ಜೈಲಿನಲ್ಲಿಯೇ ಇದ್ದ.

ಪದವಿ ಪಡೆದ:

ಮಲ್ಲಿಕಾರ್ಜುನ ಬಳ್ಳಾರಿ ಜೈಲಿನಲ್ಲಿದ್ದುಕೊಂಡೇ ಮುಕ್ತ ವಿಶ್ವವಿದ್ಯಾಲಯದ ಮೂಲಕ 2013ರಲ್ಲಿ ಪದವಿಗೆ ಪ್ರವೇಶ ಮಾಡಿಸಿದ. ವರ್ಷದಲ್ಲಿ 20 ದಿವಸ ಬಳ್ಳಾರಿ ವೀರಶೈವ ಕಾಲೇಜಿನಲ್ಲಿ ಕಾಂಟ್ಯಾಕ್ಟ್ ತರಗತಿಗಳಿಗೆ ಪೊಲೀಸ್‌ ಬಂದೋಬಸ್‌್ತನಲ್ಲಿ ಹೋಗಿ ಬರುತ್ತಿದ್ದ. 2015ಕ್ಕೆ ಬಿಎ ಪದವಿ ಮುಗಿಯಿತು. ಅದೇ ಸಂದರ್ಭದಲ್ಲಿ ಅಂದರೆ 2015 ರಲ್ಲೇ ಹೈಕೋರ್ಚ್‌ ಆತನನ್ನು ನಿರಪರಾಧಿ ಎಂದು ಘೋಷಿಸಿ ಜೈಲಿನಿಂದ ಬಿಡುಗಡೆ ಮಾಡಿತು.

ನಿರಪರಾಧಿಯಾಗಿ ಹೊರ ಬರುತ್ತಿದ್ದಂತೆ ಮಲ್ಲಿಕಾರ್ಜುನಗೆ ಮತ್ತೊಂದು ಆಘಾತ ಎದುರಾಯಿತು. ಆತನ ತಂದೆ ಅದೇ ಸಂದರ್ಭದಲ್ಲಿ ಮೃತರಾದರು. ಆದರಿಂದ ನಾಲ್ಕು ವರ್ಷ ಮನೆಯ ಜವಾಬ್ದಾರಿಯ ಜೊತೆ ಊರಲ್ಲಿಯೇ ಸಮಯ ಕಳೆಯಬೇಕಾಯಿತು. ಬಳಿಕ ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇದೀಗ ಪಿಎಚ್‌ಡಿ ಮಾಡುವ ಉದ್ದೇಶ ಹೊಂದಿದ್ದಾರೆ.

ನಿರಪರಾಧಿಯಾಗಿದ್ದರೂ ಅನ್ಯಾಯವಾಗಿ ಜೈಲು ಸೇರಬೇಕಾಯಿತು. ಪತ್ರಿಕೋದ್ಯಮ ಸೇರಿದರೆ ಅನ್ಯಾಯ, ದೌರ್ಜನ್ಯಗಳ ವಿರುದ್ಧ ದನಿ ಎತ್ತಬಹುದು ಎಂಬ ಅಭಿಲಾಸೆಯಿಂದ ಪತ್ರಿಕೋದ್ಯಮ ಮಾಡಿದ್ದೇನೆ. ಪ್ರಥಮ ವರ್ಷ ಶೇ.76 ಅಂಕ ಬಂದಿದ್ದು, ಎರಡನೇ ವರ್ಷದ ಪರೀಕ್ಷೆ ಇತ್ತೀಚಿಗೆ ಬರೆದಿದ್ದೇನೆ. ಇನ್ನಷ್ಟೇ ಫಲಿತಾಂಶ ಬರಬೇಕಿದೆ. ಮುಂದೆ ಮೈಸೂರು ವಿವಿಯಲ್ಲೇ ಪಿಎಚ್‌ಡಿ ಮಾಡುವ ಗುರಿ ಇದೆ ಎನ್ನುತ್ತಾನೆ ಮಲ್ಲಿಕಾರ್ಜುನ.

ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಇಂದು ಪುರ ಪ್ರವೇಶ: ಭವ್ಯ ಸ್ವಾಗತಕ್ಕೆ ಬೆಂಗ್ಳೂರಲ್ಲಿ ಸಿದ್ಧತೆ

ನಾನು ಜೈಲಿನಲ್ಲಿದ್ದುಕೊಂಡೇ ಬಿಎ ಪದವಿ ಪಡೆದಿದ್ದೇನೆ. ಬಳ್ಳಾರಿ ಜೈಲಿನಲ್ಲಿ ಜೈಲು ಅಧೀಕ್ಷಕ ಪಿ.ವಿ.ಆನಂದರೆಡ್ಡಿಯಂತಹ ಒಳ್ಳೆಯ ಅಧಿಕಾರಿಗಳು ಇದ್ದಾರೆ. ಅವರು ಓದಲು ನನಗೆ ಅವಕಾಶ ಮಾಡಿಕೊಟ್ಟರು. ಪಿಎಚ್‌ಡಿ ಮುಗಿಸಿ ನಾನು ನೊಂದವರ ಸೇವೆ ಮಾಡಬೇಕೆಂಬ ಗುರಿ ಹೊಂದಿದ್ದೇನೆ.

ಪಿ.ಎಂ.ಮಲ್ಲಿಕಾರ್ಜುನ, ಗುಡೇಕೋಟೆ

Follow Us:
Download App:
  • android
  • ios