ನಿರಂತರ ಸುರಿಯುತ್ತಿರುವ ಮಳೆಗೆ ಸೋಮವಾರದಿಂದ ಸಣ್ಣದಾಗಿ ಶಿಥಿಗೊಂಡು ಬೀಳಲಾರಂಭಿಸಿ ಶನಿವಾರ ರಾತ್ರಿ 6 ಕೊಠಡಿಗಳು ನೆಲಕಚ್ಚಿದ್ದು, ಕೇವಲ 5 ಕೊಠಡಿಗಳು ಮಾತ್ರ ಉಳಿದಿವೆ.

ಬ್ಯಾಡಗಿ(ಸೆ.14): ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಶಿಥಿಲಗೊಂಡಿದ್ದ ಹಿರೇಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 6 ಕೊಠಡಿಗಳು ಶನಿವಾರ ರಾತ್ರಿ ಕುಸಿದುಬಿದ್ದಿದ್ದು, ವಿದ್ಯಾರ್ಥಿಗಳನ್ನು ಹತ್ತಿರದ ದೇವಾಲಯಕ್ಕೆ ಸ್ಥಳಾಂತರಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ತಾಲೂಕಿನ ಹಿರೇಹಳ್ಳಿ ಶಾಲೆಯಲ್ಲಿ 11 ಕೊಠಡಿಗಳಿದ್ದು 226 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನಿರಂತರ ಸುರಿಯುತ್ತಿರುವ ಮಳೆಗೆ ಸೋಮವಾರದಿಂದ ಸಣ್ಣದಾಗಿ ಶಿಥಿಗೊಂಡು ಬೀಳಲಾರಂಭಿಸಿ ಶನಿವಾರ ರಾತ್ರಿ 6 ಕೊಠಡಿಗಳು ನೆಲಕಚ್ಚಿದ್ದು, ಕೇವಲ 5 ಕೊಠಡಿಗಳಿವೆ ಮಾತ್ರ ಉಳಿದಿವೆ.

Add Asianetnews Kannada as a Preferred SourcegooglePreferred

ತಪ್ಪಿದ ಅನಾಹುತ:

ತಾಲೂಕು ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ ಕೆಲದಿನಗಳ ಹಿಂದಷ್ಟೇ ಶಾಲೆಗೆ ಭೇಟಿ ನೀಡಿ ಕೊಠಡಿ ಪರಿಶೀಲಿಸಿದ್ದರು. ಯಾವುದೇ ಕಾರಣಕ್ಕೂ ಮಕ್ಕಳನ್ನು ಕೊಠಡಿಗಳಲ್ಲಿ ಕೂಡ್ರಿಸದಂತೆ ಮುಖ್ಯಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದರಿಂದ ಮಕ್ಕಳನ್ನು ಸಮೀಪದ ದೇವಸ್ಥಾನದಲ್ಲಿ ಕೂಡ್ರಿಸಿ ಪಾಠ ಪ್ರವಚನ ನಡೆಸಲಾರಂಭಿಸಿದ್ದರು. ಇದರಿಂದ ಅನಾಹುತವೊಂದು ತಪ್ಪಿದೆ.

Karnataka Floods: ‘ನೋಡೋ ನನ್ನಪ್ಪ ನೋಡೋ, ಎಲ್ಲಾ ಸರ್ವನಾಶ ಆಗೈತಿ!

ಶಾಲಾ ಕೊಠಡಿ ನೆಲಕ್ಕಚಿದ ವಿಷಯ ತಿಳಿಯುತ್ತಿದ್ದಂತೆ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ ಆಗಮಿಸಿ ಪರಿಶೀಲಿಸಿದರು. ಬಳಿಕ ಶಾಲಾ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಹೊಸ ಕಟ್ಟಡ ಕಾಮಗಾರಿ ಆರಂಭವಾಗುವವರೆಗೂ ದೇವಸ್ಥಾನದಲ್ಲಿಯೇ ಪಾಠ ಪ್ರವಚನ ನಡೆಸುವಂತೆ ಸೂಚನೆ ನೀಡಿದರು.

ತಾಲೂಕಿನಲ್ಲಿರುವ 50 ವರ್ಷ ಮೀರಿದ ಕಟ್ಟಡ ಸೇರಿದಂತೆ ನದಿಕೆರೆ ಪಾತ್ರದಲ್ಲಿರುವ ಹಾಗೂ ಶಿಥಿಲಾವಸ್ಥೆ ತಲುಪಿರುವ ಕಟ್ಟಡಗಳಲ್ಲಿ ಮಕ್ಕಳಿಗೆ ಪಾಠ ನಡೆಸಕೂಡದು, ಒಂದು ವೇಳೆ ಇಂತಹ ಪ್ರಯತ್ನಕ್ಕೆ ಮುಂದಾಗಿ ಯಾವುದೇ ಅನಾಹುತ ನಡೆದಲ್ಲಿ ಸಂಬಂಧಿಸಿದ ಮುಖ್ಯಶಿಕ್ಷಕರನ್ನೇ ಹೊಣೆಗಾರರನ್ನಾಗಿಸಲಾಗುವುದು ಅಂತ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ ಹೇಳಿದ್ದಾರೆ. 

ಶಾಲೆಯಲ್ಲಿ ಒಟ್ಟು 226 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 11 ಕೊಠಡಿಗಳಿವೆ. ಅವುಗಳಲ್ಲಿ 6 ನೆಲಕಚ್ಚಿವೆ, ಉಳಿದಿರುವ 5 ಕೊಠಡಿಗಳು ಸಹ ದುರಸ್ತಿ ಹಂತ ತಲುಪಿವೆ ಮತ್ತು ಹೊಸದಾಗಿ 8 ಕೊಠಡಿಗಳು ಶಾಲೆಗೆ ಅವಶ್ಯವಿದ್ದು, ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಅಂತ ಮುಖ್ಯಶಿಕ್ಷಕ ಡಿ.ಎ. ಯಾಡವಾಡ ತಿಳಿಸಿದ್ದಾರೆ.