Asianet Suvarna News Asianet Suvarna News

ಫಸ್ಟ್ ಕರ್ನಾಟಕದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆಗೆ ಪಣ: ಮತ್ತೊಂದು ಹೆಜ್ಜೆ ಮುಂದಿಟ್ಟ ಡಿಸಿಎಂ

 ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ಇಡೀ ದೇಶದಲ್ಲೇ ಮೊಟ್ಟ ಮೊದಲಿಗೆ ಕರ್ನಾಟಕದಲ್ಲಿ ಜಾರಿ ಮಾಡಲು ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಿಸಿಎಂ ಅಶ್ವತ್ಥ ನಾರಾಯಣ ಪಣತೊಟ್ಟಿದ್ದು ಈ ಬಗ್ಗೆ ರಾಜ್ಯಪಾಲರನ್ನ ಭೇಟಿಯಾಗಿದ್ದಾರೆ.

Dycm ashwath narayan Meets governor-vajubhai-vala Over new education policy
Author
Bengaluru, First Published Aug 28, 2020, 10:43 PM IST

ಬೆಂಗಳೂರು, (ಆ.28): ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮೊದಲ ರಾಜ್ಯದಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ, ರಾಜ್ಯಪಾಲ ವಜೂಭಾಯಿ ವಾಲ ಅವರ ಜತೆ ಮಹತ್ವದ ಮಾತುಕತೆ ನಡೆಸಿದರು.

ಶುಕ್ರವಾರ ಬೆಂಗಳೂರಿನಲ್ಲಿ ರಾಜಭವನಕ್ಕೆ ಭೇಟಿ ನೀಡಿದ ಡಿಸಿಎಂ, ಶಿಕ್ಷಣ ನೀತಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಈವರೆಗೆ ಸರಕಾರ ಕೈಗೊಂಡಿರುವ ಕ್ರಮಗಳು, ಕಾರ್ಯಪಡೆ ರಚನೆ, ಆ ಕಾರ್ಯಪಡೆ ಜತೆ ನಡೆಸಿರುವ ಸಭೆಗಳು, ವಿಚಾರ ವಿನಿಮಯ ಇತ್ಯಾದಿ ಸಂಗತಿಗಳ ಬಗ್ಗೆ ರಾಜ್ಯಪಾಲರ ಜತೆ ವಿಚಾರ ವಿನಿಮಯ ಮಾಡಿಕೊಂಡರು.

ಇಡೀ ದೇಶದಲ್ಲಿಯೇ ಇತರೆ ರಾಜ್ಯಗಳಿಗಿಂತ ಮೊದಲು ಶಿಕ್ಷಣ ನೀತಿಯನ್ನು ಜಾರಿ ಮಾಡುವುದು ಸರಕಾರದ ಉದ್ದೇಶವಾಗಿದೆ. ಅದಕ್ಕಾಗಿ ಬೇಕಾಗಿರುವ ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಇದುವರೆಗೂ ಕಾರ್ಯಪಡೆ ಹಾಗು ಕಾರ್ಯಪಡೆಯ ಉಪ ಸಮಿತಿಗಳು ನೀಡಿರುವ ಸಲಹೆಗಳು ಮತ್ತು ವರದಿಗಳು ಸೇರಿದಂತೆ ಹತ್ತು ಹಲವು ಸಂಗತಿಗಳ ಬಗ್ಗೆ ಚರ್ಚಿಸಿರುವ ಅಂಶಗಳ ಬಗ್ಗೆ ಉಪಮುಖ್ಯಮಂತ್ರಿ ಅವರು ರಾಜ್ಯಪಾಲರಿಗೆ ವಿವರಿಸಿದರು.

'ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಜಾರಿಯಾಗುತ್ತಿರುವ ಮೊದಲ ರಾಜ್ಯ ಕರ್ನಾಟಕ'

ನೀತಿಯಲ್ಲಿ ಅಡಕವಾಗಿರುವ ಪ್ರಮುಖ ವಿಷಯಗಳು, ಅವುಗಳ ಜಾರಿಯಿಂದ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಆಗಲಿರುವ ಮಹತ್ವದ ಬದಲಾವಣೆಗಳ ಬಗ್ಗೆಯೂ ಅವರು ರಾಜ್ಯಪಾಲರಿಗೆ ವಿವರಣೆ ನೀಡಿದರಲ್ಲದೆ, ಈ ಸಂಬಂಧ ರಾಜ್ಯ ಸರಕಾರ ತರಲಿಚ್ಛಿಸಿರುವ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಬದಲಾವಣೆಗಳ ಬಗ್ಗೆಯೂ ಮಾಹಿತಿ ನೀಡಿದರು.

ಸಲಹೆ ನೀಡಿದ ರಾಜ್ಯಪಾಲರು
Dycm ashwath narayan Meets governor-vajubhai-vala Over new education policy
ಇದೇ ವೇಳೆ ಶಿಕ್ಷಣ ನೀತಿ ಜಾರಿಯ ನಿಟ್ಟಿನಲ್ಲಿ ವೇಗವಾಗಿ ಹೆಜ್ಜೆಗಳನ್ನು ಇಡುತ್ತಿರುವ ಸರಕಾರದ ಬಗ್ಗೆ ಹರ್ಷ ವ್ಯಕ್ತಪಡಿಸಿದ ರಾಜ್ಯಪಾಲರು, ಕೆಲ ಮಹತ್ವದ ಸಲಹೆಗಳನ್ನು ನೀಡಿದರು. ಜತೆಗೆ, ಡಿಸಿಎಂ ಜತೆಯಲ್ಲೇ ತಮ್ಮನ್ನು ಭೇಟಿಯಾಗಿದ್ದ ಶಿಕ್ಷಣನೀತಿ ನಿರೂಪಣಾ ಸಮಿತಿ ಸದಸ್ಯ ಹಾಗೂ ಅಜೀಂ ಪ್ರೇಮ್ ಜೀ ವಿವಿಯ ಉಪ ಕುಲಪತಿ ಪ್ರೊ. ಅನುರಾಗ್ ಬೇಹರ್ ಅವರಿಂದ ನೀತಿಯಲ್ಲಿರುವ ಮತ್ತಷ್ಟು ಅಂಶಗಳ ಬಗ್ಗೆ ವಿವರಣೆ ಪಡೆದರು. ಜತೆಗೆ, ಡಿಸಿಎಂ ಅವರಿಗೆ ಕೆಲ ಮುಖ್ಯ ಸಲಹೆಗಳನ್ನೂ ನೀಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿರುವ ರಾಜ್ಯವಾಗಿದ್ದು, ಆದಷ್ಟು ಬೇಗ ಹಂತ ಹಂತವಾಗಿ ಶಿಕ್ಷಣ ನೀತಿಯನ್ನು ಜಾರಿ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಾರ್ಯಪಡೆಯು ನೀತಿಯ ಜಾರಿಯ ಬಗ್ಗೆ ಅಂತಿಮ ನೀಲನಕ್ಷೆಯನ್ನು ನೀಡುವುದು ಬಾಕಿ ಇದ್ದು, ಅದು ಕೈಸೇರಿದ ಕೂಡಲೇ ಅನುಷ್ಟಾನದ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಡಿಸಿಎಂ ಅವರು ರಾಜ್ಯಪಾಲರಿಗೆ ತಿಳಿಸಿದರು. ಈ ಭೇಟಿಯ ಸಂದರ್ಭದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಅವರು ಹಾಜರಿದ್ದರು.

Follow Us:
Download App:
  • android
  • ios