Asianet Suvarna News Asianet Suvarna News

ಕುಡಿದ ಅಮಲಿನಲ್ಲಿ ‘ನಾನೇ ದೇವರು’ ಎಂದು ಚರ್ಚ್‌ಗೆ ನುಗ್ಗಿ ದಾಂಧಲೆ: ಆರೋಪಿ ಬಂಧನ

ಕುಡಿದ ಅಮಲಿನಲ್ಲಿ ‘ನಾನೇ ದೇವರು’ ಎಂದು ಹೇಳಿಕೊಂಡು ಚರ್ಚ್‌ಗೆ ನುಗ್ಗಿ ಪೀಠೋಪಕರಣ ಹಾಗೂ ಹೂಕುಂಡಗಳನ್ನು ಒಡೆದು ಹಾಕಿ ದಾಂಧಲೆ ನಡೆಸಿದ್ದ ಆರೋಪದ ಮೇರೆಗೆ ಯುವಕನೊಬ್ಬನನ್ನು ಬಾಣಸವಾಡಿ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

youth thrash stones on kammanahalli church and arrested by banasawadi police gvd
Author
First Published Jun 22, 2023, 6:02 AM IST

ಬೆಂಗಳೂರು (ಜೂ.22): ಕುಡಿದ ಅಮಲಿನಲ್ಲಿ ‘ನಾನೇ ದೇವರು’ ಎಂದು ಹೇಳಿಕೊಂಡು ಚರ್ಚ್‌ಗೆ ನುಗ್ಗಿ ಪೀಠೋಪಕರಣ ಹಾಗೂ ಹೂಕುಂಡಗಳನ್ನು ಒಡೆದು ಹಾಕಿ ದಾಂಧಲೆ ನಡೆಸಿದ್ದ ಆರೋಪದ ಮೇರೆಗೆ ಯುವಕನೊಬ್ಬನನ್ನು ಬಾಣಸವಾಡಿ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕಮ್ಮನಹಳ್ಳಿ ನಿವಾಸಿ ಟಾಮ್‌ ಮ್ಯಾಥ್ಯುವ್‌ ಬಂಧಿತನಾಗಿದ್ದು, ಕಮ್ಮನಹಳ್ಳಿ ಮುಖ್ಯರಸ್ತೆಯ ಸೆಂಟ್‌ ಮೇರಿಸ್‌ ಚರ್ಚ್‌ಗೆ ನಸುಕಿನಲ್ಲಿ ನುಗ್ಗಿ ಬಾಗಿಲು ಮುರಿದು ಮ್ಯಾಥ್ಯುವ್‌ ದಾಂಧಲೆ ನಡೆಸಿದ್ದ. ಈ ಬಗ್ಗೆ ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ತೆರಳಿ ಆರೋಪಿಯನ್ನು ಹೊಯ್ಸಳ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಆರೋಪಿ ಮಾನಸಿಕ ಅಸ್ವಸ್ಥ-ಡಿಸಿಪಿ ಸ್ಪಷ್ಟನೆ: ಎರಡು ದಶಕಗಳಿಂದ ಕಮ್ಮನಹಳ್ಳಿ ಪ್ರದೇಶದಲ್ಲಿ ಮ್ಯಾಥ್ಯುವ್‌ ಕುಟುಂಬ ನೆಲೆಸಿದೆ. ಪ್ರತಿ ದಿನ ಇದೇ ಚರ್ಚ್‌ಗೆ ಆತನ ತಾಯಿ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ತನ್ನ ತಂದೆ ಮನೆ ಬಿಟ್ಟು ಹೋದ ನಂತರ ಆರೋಪಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದ. ಇತ್ತೀಚೆಗೆ ‘ನಾನೇ ದೇವರು, ನಾನೇ ದೇವರು’ ಎಂದು ಹೇಳಿಕೊಂಡು ಆತ ಓಡಾಡುತ್ತಿದ್ದ. ಕುಡಿದ ಅಮಲಿನಲ್ಲಿ ಬಂದು ಚರ್ಚ್‌ ನುಗ್ಗಿ ಈ ಕೃತ್ಯ ಎಸಗಿದ್ದಾನೆ. ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್‌ ಗುಳೇದ್‌ ತಿಳಿಸಿದ್ದಾರೆ.

ಅಕ್ಕಿಭಾಗ್ಯ ಕಾಂಗ್ರೆಸ್‌ ಸ್ವಯಂಕೃತ ಅಪರಾಧ, ಕೇಂದ್ರದ ಮೇಲೆ ಗೂಬೆ ಕೂರಿಸಲೆತ್ನ: ಎಚ್‌ಡಿಕೆ

ಕಮ್ಮನಹಳ್ಳಿ ಮುಖ್ಯರಸ್ತೆಯ ಸೆಂಟ್‌ ಮೇರಿಸ್‌ ಚರ್ಚ್‌ನ ಮುಂಬಾಗಿಲ ಬೀಗವನ್ನು ಸುತ್ತಿಗೆಯಿಂದ ಒಡೆದು ಹಾಕಿ ನಸುಕಿನ 4.30ಕ್ಕೆ ಮ್ಯಾಥ್ಯುವ್‌ ಒಳಗೆ ಪ್ರವೇಶಿಸಿದ್ದಾನೆ. ಆನಂತ ಅದೇ ಸುತ್ತಿಗೆಯಿಂದ ಅಲ್ಲಿನ ಪೀಠೋಪಕರಣ ಹಾಗೂ ಹೂಕುಂಡಗಳು ಸೇರಿದಂತೆ ಕೈ ಸಿಕ್ಕಿದ ವಸ್ತುಗಳನ್ನು ಧ್ವಂಸಗೊಳಿಸಿದ್ದಾನೆ. ಈ ಗಲಾಟೆ ಸದ್ದು ಕೇಳಿ ಚರ್ಚ್‌ ಬಳಿ ಜಮಾಯಿಸಿದ ಸ್ಥಳೀಯರು, ಕೂಡಲೇ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. 

ಸಂಸದ ಡಿ.ಕೆ.​ಸು​ರೇಶ್‌ಗೆ ನೋವು, ಬೇಸರ, ಆತಂಕ ಕಾಡುತ್ತಿದೆಯಾ!

ಈ ವಿಷಯ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿದ ಬಾಣಸವಾಡಿ ಹೊಯ್ಸಳ ಸಿಬ್ಬಂದಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕ್ಷಿಪ್ರವಾಗಿ ಆತನ ಪೂರ್ವಾಪರ ಮಾಹಿತಿ ಕಲೆ ಹಾಕಿದ ಪೊಲೀಸರು, ಮಾಥ್ಯುವ್‌ ತಾಯಿಯನ್ನು ಪತ್ತೆ ಹಚ್ಚಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಚರ್ಚ್‌ನಲ್ಲಿ ಅಮಲೇರಿದ ಸ್ಥಿತಿಯಲ್ಲಿ ಆರೋಪಿ ಪತ್ತೆಯಾಗಿದ್ದಾನೆ. ಈ ಘಟನೆ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆಗೆ ಆರೋಪಿ ಪೂರಕವಾಗಿ ಸ್ಪಂದಿಸುತ್ತಿಲ್ಲ. ಮಾನಸಿಕ ಅಸ್ವಸ್ಥತೆಯಿಂದ ತನ್ನ ತಾಯಿ ಪ್ರಾರ್ಥನೆ ಸಲ್ಲಿಸುವ ಚರ್ಚ್‌ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios