ಬೆಂಗಳೂರು: ಮದ್ಯ ತರಲು ಹೋಗಿ 10ನೇ ಮಹಡಿಯಿಂದ ಬಿದ್ದು ಸಾವು
ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
ಬೆಂಗಳೂರು(ಆ.14): ಮದ್ಯದ ಅಮಲಿನಲ್ಲಿ ಆಯತಪ್ಪಿ ಅಪಾರ್ಟ್ಮೆಂಟ್ನ 10ನೇ ಮಹಡಿಯಿಂದ ಕೆಳಗೆ ಬಿದ್ದು ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಸಾವನ್ನಪ್ಪಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಸುಕಿನಲ್ಲಿ ನಡೆದಿದೆ.
ಗ್ರೀನ್ ಗ್ಲೆನ್ ಲೇಔಟ್ನ ಶೋಭಾ ದಾಲಿಯಾ ಅಪಾರ್ಟ್ಮೆಂಟ್ ನಿವಾಸಿ ತ್ರಿದೀಪ್ ಕನ್ವಾರ್ (28) ಮೃತ ದುರ್ದೈವಿ. ತನ್ನ ಸ್ನೇಹಿತರ ಜತೆ ಪಾರ್ಟಿ ಮಾಡಿ ಬಳಿಕ ಮದ್ಯದ ಬಾಟಲಿಯನ್ನು ಶನಿವಾರ ನಸುಕಿನ 3ರ ಸುಮಾರಿಗೆ ಫ್ಲ್ಯಾಟ್ನಿಂದ ತೆಗೆದುಕೊಂಡು ಬರುವಾಗ ಆಯತಪ್ಪಿ ತ್ರಿದೀಪ್ ಕೆಳಗೆ ಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ನಿದ್ರೆ ಹಾಳು ಮಾಡಿದ್ದಕ್ಕೆ 1.5 ವರ್ಷದ ಕಂದಮ್ಮನನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ..!
ವಿಕೆಂಡ್ ಪಾರ್ಟಿ ತಂದ ಆಪತ್ತು
ಮೃತ ತ್ರಿದೀಪ್ ಮೂಲತಃ ಅಸ್ಸಾಂ ರಾಜ್ಯದವನಾಗಿದ್ದು, ನಗರದಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ತನ್ನ ಗೆಳೆಯ ಶಶಾಂಕ್ ಜತೆ ನೆಲೆಸಿದ್ದ ಆತ, ಕಸುವನಹಳ್ಳಿಯಲ್ಲಿ ಗೆಳೆಯರ ಮನೆಗೆ ತೆರಳಿ ಇಬ್ಬರು ತಡ ರಾತ್ರಿವರೆಗೆ ಪಾರ್ಟಿ ಮಾಡಿದ್ದರು. ಬಳಿಕ ಅಲ್ಲಿಂದ ಅವರು ಮನೆಗೆ ಮರಳಿದ್ದಾರೆ. ಅದೇ ವೇಳೆ ಆ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದ ಮತ್ತಿಬ್ಬರು, ಅದೇ ಅಪಾರ್ಟ್ಮೆಂಟ್ 10ನೇ ಮಹಡಿಯಲ್ಲಿ ಮದ್ಯದ ಪಾರ್ಟಿ ಮುಗಿಸಿ ಕೆಳಗೆ ಬಂದಿದ್ದರು. ಗೆಳೆಯರ ಮನೆಯಲ್ಲಿ ಮದ್ಯದ ಪಾರ್ಟಿ ಮುಗಿಸಿದ ಬಂದ ಶಶಾಂಕ್ ಹಾಗೂ ತ್ರಿದೀಪ್, ಅಪಾರ್ಚ್ಮೆಂಟ್ ಕೆಳಗೆ ಸ್ನೇಹಿತರನ್ನು ಕಂಡು ಮಾತನಾಡಿಸಿದ್ದಾರೆ. ಆಗ ನಾವು ಸಹ ಪಾರ್ಟಿ ಮಾಡ್ತಾ ಇದ್ದೀವಿ. ಈಗ ತಿನ್ನಲು ಫಿಜ್ಜಾ ಅರ್ಡರ್ ಮಾಡಿದ್ದು, ಅದನ್ನು ಪಡೆಯಲು ಬಂದಿದ್ದೇವೆ ಎಂದಿದ್ದಾರೆ. ನಂತರ ಈ ನಾಲ್ವರು ಮತ್ತೆ ತ್ರಿದೀಪ್ ಫ್ಲ್ಯಾಟ್ನಲ್ಲಿ ಪಾರ್ಟಿ ಮಾಡಲು ನಿರ್ಧರಿಸಿದ್ದಾರೆ. ಆಗ 10ನೇ ಮಹಡಿಯ ಸಜ್ಜೆ ಮೇಲಿಟ್ಟಿದ್ದ ಮದ್ಯದ ಬಾಟಲ್ಗಳನ್ನು ತೆಗೆದುಕೊಂಡು ಬರುವುದಾಗಿ ಹೇಳಿ ತ್ರಿದೀಪ್ ತೆರಳಿದ್ದ. ಆಗ ಸಜ್ಜೆ ಏಣಿ ಹತ್ತುವಾಗ ಆತ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.