ಬೇರೆಯಾಗುವ ವಿಚಾರಕ್ಕೆ ಜಗಳ: ಪ್ರೇಯಸಿ ಕುತ್ತಿಗೆ ಬಿಗಿದು ಕೊಂದ
* ನೀನೇ ಬೇಕು ಎಂದು ಹಠ ಹಿಡಿದಿದ್ದ ಪ್ರೇಯಸಿ
* ಪತಿ, ಮಕ್ಕಳಿಂದ ಬೇರೆಯಾಗಿದ್ದ ಗಾಯಿತ್ರಿ
* ಆಟೋ ಚಾಲಕ ಮಂಜು ಜೊತೆ ಪ್ರೇಮಾಂಕುರ
ಬೆಂಗಳೂರು(ನ.07): ಕ್ಷುಲ್ಲಕ ಕಾರಣಕ್ಕೆ ಪ್ರಿಯಕರ ಪ್ರೇಯಸಿಯನ್ನೇ ವೇಲ್ನಿಂದ ಕುತ್ತಿಗೆ ಬಿಗಿದು ಕೊಲೆ(Murder) ಮಾಡಿರುವ ಘಟನೆ ಶನಿವಾರ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯನಗರದ ಪಟ್ಟೆಗಾರಪಾಳ್ಯದ ನಿವಾಸಿ ಗಾಯಿತ್ರಿ (31) ಮೃತ ದುರ್ದೈವಿ. ಮಂಜು ಪ್ರಸಾದ್ (29) ಬಂಧಿತ. ಮಧ್ಯಾಹ್ನ 12ರ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಕುಪಿತಗೊಂಡ ಮಂಜು ವೇಲ್ನಿಂದ ಗಾಯಿತ್ರಿ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂದು ಪೊಲೀಸರು(Police) ತಿಳಿಸಿದ್ದಾರೆ.
ಗಾಯಿತ್ರಿಗೆ ಬೇರೆಯೊಬ್ಬನ ಜತೆಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ, ದಂಪತಿ ನಡುವೆ ಜಗಳವಾಗಿ ಕಳೆದ ಮೂರು ವರ್ಷಗಳಿಂದ ಗಾಯಿತ್ರಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಮಕ್ಕಳು ತಂದೆಯ ಜತೆಯಲ್ಲಿ ಇದ್ದಾರೆ. ಮನೆಗೆಲಸ ಮಾಡಿಕೊಂಡು ಜೀವನ ದೂಡುತ್ತಿದ್ದ ಗಾಯಿತ್ರಿಗೆ ಮೂರು ವರ್ಷದ ಹಿಂದೆ ಮಂಜು ಪರಿಚಯವಾಗಿದ್ದು, ಬಳಿಕ ಆತ್ಮೀಯರಾಗಿದ್ದರು. ದಿನಗಳೆದಂತೆ ಪ್ರೇಮಾಂಕುರವಾಗಿದ್ದು(Love), ಇಬ್ಬರು ಒಂದೇ ಮನೆಯಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Crime News; ಮದ್ಯದ ಅಮಲಿನಲ್ಲಿ ಮಧ್ಯರಾತ್ರಿ ಮಗಳ ಕತ್ತು ಸೀಳಿದ ಕಲಬುರಗಿಯ ಪಾಪಿ
ಆರಂಭದಲ್ಲಿ ಬಿಬಿಎಂಪಿ(BBMP) ಗುತ್ತಿಗೆ ಆಟೋ ಚಾಲಕನಾಗಿದ್ದ ಮಂಜು, ಮೂರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಬಳಿಕ ಗಾಯಿತ್ರಿಯಿಂದ ಬೇರೆಯಾಗಲು ಪ್ರಯತ್ನಿಸುತ್ತಿದ್ದ. ಖುದ್ದು ಗಾಯಿತ್ರಿಗೆ ನಾನು ನಿನ್ನಿಂದ ದೂರವಾಗುತ್ತಾನೆ ಎಂದು ಹೇಳಿದ್ದ. ಆದರೆ, ನನಗೆ ನೀನು ಬೇಕು ಎಂದು ಆಕೆ ಹಠ ಹಿಡಿದಿದ್ದಳು. ಈ ವಿಚಾರವಾಗಿ ಆಗಾಗ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಶನಿವಾರ ಸಹ ಇದೇ ವಿಚಾರವಾಗಿ ಗಲಾಟೆ ನಡೆದಾಗ ಆಕ್ರೋಶಗೊಂಡ ಮಂಜು, ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಬಾಲಕ ಬಂಧನ
ಬಾಲಕಿ ಮೇಲೆ ಅಪ್ರಾಪ್ತ ಬಾಲಕ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಸಂತ್ರಸ್ತೆ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಅಪ್ರಾಪ್ತ ಆರೋಪಿಯನ್ನು ಬಂಧಿಸಿ ಬಾಲಮಂದಿರಕ್ಕೆ ಕಳುಹಿಸಿದ್ದಾರೆ. ಎರಡು ದಿನದ ಹಿಂದೆ ಮಾರತ್ತಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಅಪಾರ್ಟ್ಮೆಂಟ್ವೊಂದರಲ್ಲಿ ದೀಪಾವಳಿ(Deepavali) ಪ್ರಯುಕ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಪರಿಚಿತ ಬಾಲಕ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ(Sexual Harassment)ಎಸೆಗಿದ್ದಾನೆ. ಬಾಲಕಿ ಘಟನೆ ಕುರಿತು ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಪೋಷಕರು ನೀಡಿದ ದೂರಿನ ಮೇರೆಗೆ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ(Arrest). ಸಂತಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.
ಕುಡಿದ ನಶೆಯಲ್ಲಿ ಗಲಾಟೆ: ಹುಡುಗಿ ವಿಚಾರಕ್ಕೆ ಸ್ನೇಹಿತನನ್ನೇ ಹತ್ಯೆಗೈದ
ಕೊರಿಯರ್ ನೆಪದಲ್ಲಿ ಸರಗಳವು ಮಾಡುತ್ತಿದ್ದ ಆರೋಪಿ ಬಂಧನ
ಕೊರಿಯರ್(Courier) ನೆಪದಲ್ಲಿ ಮಹಿಳೆಯರ ಸರ ಕಳವು ಮಾಡುತ್ತಿದ್ದ ಕಿಡಿಗೇಡಿಯನ್ನು ತಿಲಕ್ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲ ನಿವಾಸಿ ಪರ್ವಿದ್(26) ಬಂಧಿತ. ಆರೋಪಿಯಿಂದ .8.50 ಲಕ್ಷ ಮೌಲ್ಯದ ಎರಡು ಚಿನ್ನದ ಸರ, ಐದು ಮೊಬೈಲ್ ಫೋನ್, 4 ದ್ವಿಚಕ್ರ ವಾಹನ ಹಾಗೂ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ವೃತ್ತಿಪರ ಕಳ್ಳನಾಗಿದ್ದಾನೆ. ಕೊರಿಯರ್ ನೆಪದಲ್ಲಿ ಮನೆಗಳಿಗೆ ತೆರಳಿ ಮಹಿಳೆಯರು ಬಾಗಿಲು ತೆಗೆದರೆ ತಕ್ಷಣ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತು ಪರಾರಿಯಾಗುತ್ತಿದ್ದ. ಒಂದು ಬಡಾವಣೆಯಲ್ಲಿ ಕಳವು ಮಾಡಲು ಮತ್ತೊಂದು ಬಡಾವಣೆಯಲ್ಲಿ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಕದಿಯುತ್ತಿದ್ದ. ಕಳವು ಮಾಡಿದ ಬಳಿಕ ಆ ವಾಹನಗಳನ್ನು ನಿರ್ಜನ ಪ್ರದೇಶಗಳಲ್ಲಿ ನಿಲ್ಲಿಸಿ ಪರಾರಿಯಾಗುತ್ತಿದ್ದ. ಅಂತೆಯೇ ರಾತ್ರಿ ವೇಳೆ ರಸ್ತೆಗಳಲ್ಲಿ ಒಂಟಿಯಾಗಿ ಓಡಾಡುವವರಿಂದ ಹಣ, ಮೊಬೈಲ್ ಫೋನ್, ಆಭರಣ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಪರ್ವಿದ್ ವಿರುದ್ಧ ಈ ಹಿಂದೆ ನಗರದ ವಿವಿಧ ಠಾಣೆಗಳಲ್ಲಿ 21 ಪ್ರಕರಣಗಳು ದಾಖಲಾಗಿದ್ದು, ಹಲವು ಬಾರಿ ಜೈಲು ಸೇರಿದ್ದಾನೆ. ಜಾಮೀನಿನ ಮೇಲೆ ಹೊರಬಂದು ಮತ್ತೆ ಕಸುಬು ಮುಂದುವರಿಸಿದ್ದ. ಆರೋಪಿಯ ಬಂಧನದಿಂದ ತಿಲಕ್ನಗರ, ಮೈಕೋ ಲೇಔಟ್, ಯಶವಂತಪುರ, ಸಿದ್ದಾಪುರ, ಬಸವನಗುಡಿ, ಜಯನಗರ, ಸುದ್ದಗುಂಟೆಪಾಳ, ವಿಲ್ಸನ್ ಗಾರ್ಡನ್ ಸೇರಿದಂತೆ ವಿವಿಧ ಠಾಣೆಯಲ್ಲಿ ದಾಖಲಾಗಿದ್ದ 11 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.